ಮಳೆಗಾಲದಲ್ಲಿ ರೈತರು ವಿದ್ಯುತ್ ಪರಿಕರಗಳೊಂದಿಗೆ ಜಾಗೃತಿ ವಹಿಸಿ ಕೆಲಸ ಮಾಡಬೇಕು ಎಂದು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹುಣಶ್ಯಾಳ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಬಂಗಾರಮ್ಮ ಮಾನಪ್ಪ ದೊಡ್ಡಮನಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದು, “ಮಳೆಗಾಲದಲ್ಲಿ ಎಷ್ಟು ಹೊತ್ತಿಗೆ ಬೇಕಾದರೂ ಕರೆಂಟ್ ಬರಬಹುದು. ಆದ್ದರಿಂದ ರೈತ ಬಾಂಧವರು ಕರೆಂಟ್ ಇರುವುದಿಲ್ಲವೆಂದು ತಿಳಿದು ಯಾವುದೇ ರೀತಿಯ ವಿದ್ಯುತ್ ಕಂಬ, ತುಂಡಾಗಿರುವ ವೈರ್ಗಳನ್ನು ಸುರಕ್ಷಾ ಸಾಧನಗಳಿಲ್ಲದೆ ಮುಟ್ಟಬಾರದು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಅಲೆಮಾರಿ ಸುಡಗಾಡು ಸಿದ್ದರ ಕಾಲೋನಿಗೆ ಸೋಲಾರ್ ಲೈಟ್ ವಿತರಣೆ; ಕೇತೇಶ್ವರ ಶ್ರೀ ಶ್ಲಾಘನೆ.
“ಮಳೆಗಾಲದಲ್ಲಿ ವಿದ್ಯುತ್ಗೆ ಸಂಬಂಧಿಸಿದ ಉಪಕರಣಗಳಿಂದ ದೂರ ಇರಬೇಕು. ಹೊಲದಲ್ಲಿ ಲೈನ್ ತುಂಡಾಗಿದ್ದರೆ, ವಿದ್ಯುತ್ ಸಮಸ್ಯೆ ಇದ್ದರೆ ತಕ್ಷಣ ಕೆಇಬಿಯವರಿಗೆ ಕರೆ ಮಾಡಿ ತಿಳಿಸಬೇಕು. ಹೊಲದ ಬೋರ್ವೆಲ್ ಹಾಗೂ ಕೆನಾಲ್ ಕಾಲುವೆಗಳಲ್ಲಿನ ಮೋಟಾರ್ಗಳನ್ನು ಹಾಗೂ ಅವುಗಳಿಗೆ ಸಂಪರ್ಕವಾಗಿರುವ ವೈರ್ಗಳ ಕುರಿತು ಜಾಗೃತಿ ವಹಿಸಬೇಕು. ಯಾವುದೇ ಟ್ರಾನ್ಸ್ಫಾರ್ಮರ್ ಕೆಲಸಗಳಲ್ಲಿ ಲೈನ್ ಮ್ಯಾನ್ ಸಹಾಯ ಪಡೆದು ಕೆಲಸ ನಿರ್ವಹಿಸಬೇಕು” ಎಂದು ತಿಳಿಸಿದರು.
“ಮಳೆಗಾಲ ಜೋರಾಗುತ್ತಿರುವುದರಿಂದ ತುಂಬಾ ವಿದ್ಯುತ್ ಅನಾಹುತಗಳು ಸಂಭವಿಸುತ್ತಿರುತ್ತವೆ. ರೈತ ಈ ದೇಶದ ಬೆನ್ನೆಲುಬು, ಪ್ರತಿ ರೈತನ ಜೀವವೂ ಅತ್ಯಮೂಲ್ಯ. ಹಾಗಾಗಿ ರೈತರು ಹೊಲಗಳಲ್ಲಿ ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕು” ಎಂದರು.