ಪೂರ್ವ ಪ್ರಾಥಮಿಕ ಶಿಕ್ಷಣ ನೀಡುತ್ತಿರುವ ಸರ್ಕಾರದ ಅಧೀನದಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಹಲವು ಕೇಂದ್ರಗಳ ಪರಿಸ್ಥಿತಿ ಹೇಳತೀರದಂತಿದೆ. ಹಲವು ಅಂಗನವಾಡಿಗಳು ಪಂಚಾಯತಿ ಕಟ್ಟಡ, ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದರೆ, ಇನ್ನೂ ಹಲವು ಸ್ವಂತ ಕಟ್ಟಡದಲ್ಲೇ ಇದ್ದರೂ, ಕುಸಿದು ಬೀಳುವ ಆತಂಕದಲ್ಲಿವೆ. ಧಾರವಾಡ ಜಿಲ್ಲೆಯ ಅಂಗನವಾಡಿ ಕೇಂದ್ರಗಳದ್ದೂ ಅದೇ ಪರಿಸ್ಥಿತಿ. ಜಿಲ್ಲೆಯ ಕುಂದಗೋಳ ತಾಲೂಕಿನ ಹಲವು ಗ್ರಾಮಗಳಲ್ಲಿ ಅಂಗಿನವಾಡಿ ಕಟ್ಟಡಗಳು ಶಿಥಿಲಗೊಂಡಿವೆ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ.
ವಿಕಲವಾಗಿದೆ ಹುರೆಗುಂಜಳ ಅಂಗನವಾಡಿ
ತಾಲೂಕಿನ ಹುರೆಗುಂಜಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರ-50ರ ಕಟ್ಟಡದ ಗೋಡೆಗಳೆಲ್ಲ ಬಿರುಕು ಬಿಟ್ಟಿವೆ. ಮಳೆ ಬಂದರೆ ಸೋರುತ್ತದೆ. ಯಾವುದೇ ಸಮಯದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಆದರೂ, ಆ ಕೇಂದ್ರವನ್ನು ದುರಸ್ತೆ ಮಾಡದ ಪರಿಣಾಮ, ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.
ಅಂಗನವಾಡಿ ಕೇಂದ್ರದ ಸಮಸ್ಯೆ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ ಫಕೀರಗೌಡ ಪಾಟೀಲ್, “1996 ಸಾಲಿನಲ್ಲಿ ’ನಮ್ಮ ಮಗಳು ನಮ್ಮ ಶಕ್ತಿ’ ಯೋಜನೆ ಅಡಿಯಲ್ಲಿ ನಿರ್ಮಾಣವಾದ ಕಟ್ಟಡ ಮತ್ತೆ ಎರಡು ಸಲ ಮರು ರಿಪೇರಿ ಕೂಡಾ ಆಗಿದೆ. ಈಗ ಕಟ್ಟಡದ ಪರಿಸ್ಥಿತಿ ಪೂರ್ತಿ ಹದಗೆಟ್ಟಿರುವ ಕಾರಣ; ಹೊಸ ಕಟ್ಟಡ ನಿರ್ಮಾಣವಾಗಬೇಕು. ಈ ಬಗ್ಗೆ ಸರ್ಕಾರ ಎಚ್ಚರವಹಿಸಬೇಕು” ಎಂದರು.

“ಅಂಗನವಾಡಿ ಕಾರ್ಯಕರ್ತೆಯರನ್ನು ಎಚ್.ಎನ್.ಎಸ್ ಸರ್ವೆ ಮಾಡಲು ನಿಯೋಜಿಸಿದ್ದಾರೆ. ಅದೂ ಮಕ್ಕಳಿಗೆ ಪಾಠ ಮಾಡುವ ಸಮಯದಲ್ಲೇ ಸರ್ವೆಗೆ (ನಾಲ್ಕು ತಿಂಗಳಿಂದ ಸರ್ವೆ ಮಾಡುತ್ತಿದ್ದು) ಹೋಗಬೇಕು. ಈ ಸರ್ವೆಯಿಂದ ಕಾರ್ಯಕರ್ತೆಯರನ್ನು ಮುಕ್ತಗೊಳಿಸಬೇಕು” ಎಂದು ಹೇಳಿದರು.
“ನಮ್ಮ ಅಂಗನವಾಡಿಯಲ್ಲಿ ಮೂಲಭೂತವಾಗಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಅಂಗನವಾಡಿಯಿಂದ 700 ಮೀಟರ್ ದೂರದಲ್ಲಿರುವ ಟ್ಯಾಂಕ್ನಿಂದ ನೀರನ್ನು ಹೊತ್ತು ತರಬೇಕು. ಅಂಗನವಾಡಿ ಸುತ್ತಲೂ ಕಾಂಪೌಂಡ್ ಇಲ್ಲದ ಪರಿಣಾಮ ದನ ಕರುಗಳ ಹಾವಳಿ ಹೆಚ್ಚಾಗಿದೆ. ಮಕ್ಕಳಿಗೆ ಆರೋಗ್ಯಕರ, ಪೌಷ್ಠಿಕಾಂಶಯುಕ್ತ ಆಹಾರವೂ ಪೂರೈಕೆಯಾಗುತ್ತಿಲ್ಲ” ಎಂದು ದೂರಿದರು.
ಸಂಶಿ ಅಂಬೇಡ್ಕರ್ ನಗರ ಅಂಗನವಾಡಿ
ತಾಲೂಕಿನ ಸಂಶಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಬೇಡ್ಕರ್ ನಗರದ ಅಂಗನವಾಡಿ ಕೇಂದ್ರದ ಕಟ್ಟಡ ಬೀಳುವ ಹಂತಕ್ಕೆ ತಲುಪಿ ಒಂದು ವರ್ಷ ಕಳೆದರೂ ಹೊಸ ಕಟ್ಟಡ ನಿರ್ಮಾಣವಾಗಿಲ್ಲ. ಮಕ್ಕಳ ಹಿತದೃಷ್ಠಿಯಿಂದ ಪಕ್ಕದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತಿದೆ. ಈ ಕಟ್ಟಡ ರಿಪೇರಿಗೊಳಿಸಲು ಸಂಬಂಧಪಟ್ಟ ಗ್ರಾಮಪಂಚಾಯತಿ ಸದಸ್ಯರು ಅಡ್ಡಗಾಲು ಹಾಕುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಒಂದು ವಾರದ ಹಿಂದೆ ಮಕ್ಕಳಿಗೆ ಅಡುಗೆ ಮಾಡುವಾಗ ಕುಕ್ಕರ್ ನ ಮುಚ್ಚಳ ಸಿಡಿದು ಅಂಗನವಾಡಿ ಸೇವಕಿ ಫಾತೀಮಾ ಅವರ ಕೈ ಸುಟ್ಟುಕೊಂಡಿದೆ. ಸರ್ಕಾರದ ಕುಕ್ಕರ್ ಸರಿಯಿಲ್ಲ ಎಂಬುದು ಕೇಳಿಬರುತ್ತಿದೆ. ಏನೇಯಾಗಲಿ ಈ ಕುರಿತು ಅಧಿಕಾರಿಗಳು ಎಚ್ಚರವಹಿಸಬೇಕಿದೆ.
ಬಾಗವಾಡ ಅಂಗನವಾಡಿ ಕೇಂದ್ರ
ಕುಂದಗೋಳ ತಾಲೂಕು ಹಿರೆಗುಂಜಳ ಗ್ರಾಮಪಂಚಾಯತಿ ವ್ಯಾಪ್ತಿಯ ಬಾಗವಾಡದ ಅಂಗನವಾಡಿ ಕೇಂದ್ರದ (52) ಕಟ್ಟಡವು ಸಂಪೂರ್ಣ ಹಾಳಾಗಿದೆ. ಹೊಸ ಕಟ್ಟಡದ ನಿರ್ಮಾಣಕ್ಕಾಗಿ ಮನವಿ ಸಲ್ಲಿಸಿದ ನಂತರದಲ್ಲಿ, ಹೊಸ ಕಟ್ಟಡ ನಿರ್ಮಾಣ ಆಗುವವರೆಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡದಲ್ಲೇ ಅಂಗನವಾಡಿಯನ್ನು ಮುಂದುವರೆಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಶಾಲಾ ಆವರಣದಲ್ಲೇ ಆಂಗನವಾಡಿ ಕಟ್ಟಲು ಖುಲ್ಲಾ ಜಾಗೆಯನ್ನು ಸರ್ಕಾರ ಮಂಜೂರು ಮಾಡಿದೆ. ಜಾಗ ಮಂಜೂರಾಗಿ ಒಂದು ವರ್ಷ ಕಳೆದರೂ ಅಂಗನವಾಡಿ ಹೊಸಕಟ್ಟಡ ನಿರ್ಮಾಣದ ಕಾರ್ಯ ಇನ್ನೂ ಆರಂಭವಾಗಿಲ್ಲ.

ಅಂಗನವಾಡಿ ನಡೆಸಲು ಆಶ್ರಯ ನೀಡಿದ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡವೂ ದುಸ್ಥಿತಿಯಲ್ಲಿದೆ. ಶಾಲಾ ಗೋಡೆಗಳು ಬಿರುಕು ಬಿದ್ದಿವೆ. ಹಾಸಿರುವ ಹಂಚುಗಳು ಮಕ್ಕಳ ಮೇಲೆ ಯಾವಾಗ ಬೀಳುತ್ತವೊ ಎಂಬ ಭಯವ ನಿರ್ಮಾಣವಾಗಿದೆ.
ಚಿಕ್ಕಗುಂಜಳ ಅಂಗನವಾಡಿ
ಹಿರೆಗುಂಜಳ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲೇ ಇದ್ದರು ಚಿಕ್ಕಗುಂಜಳ ಗ್ರಾಮದ ಅಂಗನವಾಡಿಗೆ (162) ವಿದ್ಯುತ್ ಸಂಪರ್ಕವೇ ಇಲ್ಲದಂತಾಗಿದೆ. ವಿದ್ಯುತ್ ಸರಬರಾಜಾಗುತ್ತಿದ್ದ ತಂತಿ ತುಂಡಾಗಿ ತಿಂಗಳುಗಳೇ ಕಳೆದಿವೆ. ಆದರೂ, ಗ್ರಾಮ ಪಂಚಾಯತಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಅಂಗನವಾಡಿಯಲ್ಲಿ ನೀರಿನ ಸಮಸ್ಯೆಯೂ ಇದ್ದು, ಸಮೀಪದ ಸರ್ಕಾರಿ ಶಾಲೆಯಿಂದ ನೀರನ್ನು ತರಬೇಕಾದ ಪರಿಸ್ಥಿತಿ ಇದೆ. 2015ರಲ್ಲಿ ನಿರ್ಮಾಣವಾದ ಈ ಕಟ್ಟಡದಲ್ಲಿ ನೀರಿನ ಮೋಟರ್ ಅಳವಡಿಸಲಾಗಿದ್ದರೂ ಯಾವ ಉಪಯೋಗವೂ ಆಗಿಲ್ಲ.

“ಸಾಯಂಕಾಲದ ಸಮಯದಲ್ಲಿ ಯುವಕರು ಅಂಗನವಾಡಿ ಬಾಗಿಲಿನ ಕಟ್ಟೆಗೆ ಕುಳಿತು ಅಡಕಿ ಎಲೆ, ಗುಟಕಾ ತಿಂದು ಉಗುಳುತ್ತಾರೆ. ಗಿಡಗಳನ್ನು ನಾಶ ಮಾಡುತ್ತಾರೆ. ಹೀಗಾಗಿ, ಅಂಗನವಾಡಿ ಸುತ್ತಲೂ ಕಾಂಪೌಂಡಿನ ಅವಶ್ಯಕತೆ ಇದೆ” ಎಂದು ಅಂಗನವಾಡಿ ಕಾರ್ಯಕರ್ತೆ ಈದಿನ.ಕಾಮ್ಗೆ ತಿಳಿಸಿದ್ದಾರೆ.
ಶಿರೂರ ಅಂಗನವಾಡಿ
ಕುಂದಗೋಳ ತಾಲೂಕಿನ ಶಿರೂರ ಗ್ರಾಮದ ಅಂಗನವಾಡಿಗೆ ಸ್ವಂತ ಕಟ್ಟಡವಿಲ್ಲ. ಬೀಳುವ ಸ್ಥಿತಿಯಲ್ಲಿರುವ ಪಂಚಾಯತಿ ಕಟ್ಟಡದಲ್ಲಿ ಅಂಗನವಾಡಿ ಕಾರ್ಯನಿರ್ವಹಿಸುತ್ತಿದೆ. ದುರಂತವೆಂದರೆ ಪಾಳುಬಿದ್ದಿರುವ ಪಂಚಾಯತಿ ಕಟ್ಟಡದಲ್ಲೇ ಅಂಗನವಾಡಿ ಮತ್ತು ಕಂದಾಯ ಕಚೇರಿ ಎರಡನ್ನೂ ನಡೆಸಲಾಗುತ್ತಿದೆ. ಒಂದು ವೇಳೆ ಅಂಗನವಾಡಿ ಸಮಯದಲ್ಲಿ ಕಂದಾಯ ಅಧಿಕಾರಿಗಳು ಬಂದಾಗ ಪಕ್ಕದಲ್ಲಿರುವ ಈಶ್ವರ ದೇವಸ್ಥಾನದಲ್ಲಿ ಮಕ್ಕಳಿಗೆ ಪಾಠ ಹೇಳುವ ಪರಿಸ್ಥಿತಿ ಇದೆ. ಇದು ನಿನ್ನೆ-ಮೊನ್ನೆ ಸಮಸ್ಯೆಯಲ್ಲ ಸುಮಾರು 7-8 ವರ್ಷಗಳಿಂದ ಇಂತದ್ದೇ ಪರಿಸ್ಥಿತಿಯಲ್ಲಿ ಅಂಗನವಾಡಿ ನಡೆಯುತ್ತಿದೆ.
ಸಮಸ್ಯೆ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ ಅವರನ್ನು ವಿಚಾರಿಸಿದಾಗ, “ಸರ್ಕಾರವು ಹೊಸ ಅಂಗನವಾಡಿ ಕಟ್ಟಡಕ್ಕಾಗಿ ಜಾಗವನ್ನು ಮಂಜೂರು ಮಾಡಿದೆ. ಶಿರೂರ ಬಸ್ ನಿಲ್ದಾಣದ ಹತ್ತಿರವಿರುವ ಗ್ರಾಮ ಪಂಚಾಯತಿ ಪಕ್ಕದಲ್ಲೇ ಅಂಗನವಾಡಿ ನಿರ್ಮಾಣ ವಾಗಲಿದೆ” ಎಂದು ಹೇಳಿದ್ದಾರೆ.
“ಅಂಗನವಾಡಿ ಕಟ್ಟಡದ ಗೋಡೆಯ ಮೇಲೆ ಗಿಡಗಳು ಬೆಳೆದಿವೆ. ಆಲದಮರದ ಬೇರುಗಳೆಲ್ಲ ಗೋಡೆಯಿಂದ ನೆಲವನ್ನು ಸ್ಪರ್ಶಿಸಿವೆ. ಗೋಡೆ ಕುಸಿದು ಬಿದ್ದು ಮಕ್ಕಳಿಗೆ ತೊಂದರೆಯಾದರೆ, ಅಧಿಕಾರಿಗಳೇ ಹೊಣೆಯಾಗುತ್ತಾರೆ” ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
ಕಮಡೊಳ್ಳಿ ಅಂಗನವಾಡಿ
ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ-188ಕ್ಕೆ ಸ್ವಂತ ಕಟ್ಟಡವಿದ್ದರೂ ಇಲ್ಲದಂತಾಗಿದೆ. ಕಳೆದ 20 ವರ್ಷಗಳಿಂದ ಪಕ್ಕದಲ್ಲಿರುವ ಸರ್ಕಾರಿ ಪ್ರಾಥಮಿಕ ಬಾಲಕಿಯ ಶಾಲೆಯಲ್ಲಿ ಅಂಗನವಾಡಿ ನಡೆಯುತ್ತಿದೆ. ಆ ಕಟ್ಟಡವೂ ದುರಸ್ತಿ ಹಂತ ತಲುಪಿದ್ದು, ಕಳೆದ ಆರು ತಿಂಗಳುಗಳಿಂದ ಹಳೆ ಅಂಗನವಾಡಿ ಕಟ್ಟಡದಿಂದ ಸುಮಾರು 200-300 ಮೀಟರ್ ದೂರದಲ್ಲಿರುವ ಸರ್ಕಾರಿ ಉರ್ದು ಶಾಲೆಗೆ ಅಂಗನವಾಡಿಯನ್ನು ಸ್ಥಳಾಂತರಿಸಲಾಗಿದೆ.

“ಅಂಗನವಾಡಿ ಕಟ್ಟಡದ ಮೇಲ್ಚಾವಣಿ ಕುಸಿದು ಬಿದ್ದಿರುವ ಕಾರಣ, ಮಕ್ಕಳ ಹಿತದೃಷ್ಠಿಯಿಂದ ಉರ್ದು ಶಾಲೆಯಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ” ಎಂದು ಕಾರ್ಯಕರ್ತೆ ಹೇಮಾ ಮತ್ತು ಸ್ಥಳಿಯರು ಹೇಳುತ್ತಾರೆ.
ಗ್ರಾಮದ ಎಲ್ಲ ಅಂಗನವಾಡಿಗಳಲ್ಲೂ ಒಂದಿಲ್ಲೊಂದು ಸಮಸ್ಯೆ ಇದ್ದೇ ಇದೆ. ಕೆಲವು ಕಡೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಕೆಲವು ಕಡೆಗಳಲ್ಲಿ ರಸ್ತೆ ಸರಿಯಿಲ್ಲ, ಸುತ್ತಲೂ ಕಾಂಪೌಂಡ್ ವ್ಯವಸ್ಥೆ ಇಲ್ಲ.
ಇದೇ ಗ್ರಾಮದ ಅಂಗನವಾಡಿ ಕೇಂದ್ರ-4ರಲ್ಲಿ ಸುಮಾರು ಒಂದು ವರ್ಷದಿಂದ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ ಎಂದು ಅಂಗನವಾಡಿ ಸೇವಕಿ ತಿಳಿಸಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯತಿ ಆಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಯಾವುದೇ ಕ್ರಮ ತೆಗದುಕೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.