ಗಿಲ್ಲೆಸುಗೂರು ಕ್ಯಾಂಪ್ ಬಳಿ ಅಲೆಮಾರಿ ಸಮುದಾಯದ ಬಾಲಕಿಯ ಅನುಮಾನಾಸ್ಪದ ಸಾವನ್ನು ಸೂಕ್ತ ತನಿಖೆಗೊಳಪಡಿಸಿ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಿ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಸ್ಕಿ ತಹಶೀಲ್ದಾರ್ಗೆ ಹಕ್ಕೊತ್ತಾಯ ಸಲ್ಲಿಸಿದ ಕಾರ್ಯಕರ್ತರು, “ಪ್ರಜಾಪ್ರಭುತ್ವ ದೇಶದಲ್ಲಿ ದಿನನಿತ್ಯ ಅನ್ಯಾಯ ಅತ್ಯಾಚಾರ ಕೊಲೆ ಸುಲಿಗೆಗಳು ಎಗ್ಗಿಲ್ಲದೆ ಸಾಗುತ್ತಿವೆ. ಮಹಿಳೆ, ಬಾಲಕಿಯರ ಮೇಲೆ ಪುರುಷನ ದಬ್ಬಾಳಿಕೆ ಮತ್ತು ಆತನ ನೀಚತನದ ಪರಮಾವಧಿಗೆ ಹಿಡಿದ ಕೈಗನ್ನಡಿಯಂತೆ ಇಂದು ಮತ್ತೊಂದು ಘಟನೆಗೆ ರಾಯಚೂರು ಜಿಲ್ಲೆಯ ಕೃತ್ಯ ಸಾಕ್ಷಿಯಾಗಿದೆ” ಎಂದು ಆಗ್ರಹಿಸಿದರು.
“ರಾಯಚೂರು ತಾಲೂಕಿನ ಇಡಪನೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಿಲ್ಲೆಸುಗೂರು ಕ್ಯಾಂಪಿನಲ್ಲಿ ಜುಲೈ 13ರಂದು ಮಧ್ಯಾಹ್ನ ಅಲೆಮಾರಿ ಸಮುದಾಯಗಳಲ್ಲಿ ಅಲಕ್ಷಿತ ಜಾತಿಗಳಲ್ಲೊಂದಾದ ಬುಡ್ಗಜಂಗಮ ಸಮುದಾಯದ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿ ಬೇವಿನ ಮರಕ್ಕೆ ನೇಣು ಹಾಕಿದ್ದರು” ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
“ಕ್ಯಾಂಪಿನ ಹೊರ ವಲಯದ ಬೇವಿನ ಮರಕ್ಕೆ ಹಗ್ಗ ಬಿಗಿದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಮೃತದೇಹ ಸಿಕ್ಕ ಸ್ಥಳ ಮತ್ತು ಪರಿಸ್ಥಿತಿ ನೋಡಿದರೆ, ನೂರಕ್ಕೆ ನೂರು ರೇಪ್ ಅಂಡ್ ಮರ್ಡರ್ ಆಗಿರುವುದು ಖಚಿತ” ಎಂದು ಸಂಶಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಜುಲೈ 21 ರೈತ ಹುತಾತ್ಮ ದಿನಾಚರಣೆ; ಮದ್ಯ ಮಾರಾಟ ನಿಷೇಧಕ್ಕೆ ಜಿಲ್ಲಾಧಿಕಾರಿ ಆದೇಶ
“ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ದೂರು ದಾಖಲಾಗಿದ್ದು, ಮೂರು ಮಂದಿ ಆರೋಪಿತ ಯುವಕರನ್ನು ಬಂಧಿಸಲಾಗಿದೆ.
ಆದ್ದರಿಂದ ಆ ಬಾಲಕಿಯ ಸಾವಿಗೆ ಸೂಕ್ತ ನ್ಯಾಯ ಸಿಗಬೇಕು ಮತ್ತು ತಪ್ಪಿತಸ್ಥರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ಅಲೆಮಾರಿ ಸಮುದಾಯದ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿ ಆ ಕುಟುಂಬಕ್ಕೆ ಸರ್ಕಾರಿ ಸೌಲಭ್ಯ ನೀಡಬೇಕು” ಎಂದು ಮನವಿ ಮಾಡಿದರು.