ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಡೇವಿಡ್ ಸಿಮಿಯೋನ್ ಅವರು ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಅವರ ಅಗಲಿಕೆಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಡೇವಿಡ್ ಸಿಮಿಯೋನ್ ಅವರ ಅಗಲಿಕೆಗೆ ಸಂತಾಪ ಸೂಚಿಸಿರುವ ಹೊರಟ್ಟಿ, “ವಿಧಾನ ಪರಿಷತ್ತಿನ ಸದಸ್ಯರಾಗಿ ಕ್ರೀಯಾಶೀಲವಾಗಿ ಕಾರ್ಯ ನಿರ್ವಹಿಸಿರುವ ಡೇವಿಡ್ ಸಿಮಿಯೋನ್ ಮೂರು ವರ್ಷಗಳ ಕಾಲ ವಿಧಾನ ಪರಿಷತ್ತಿನ ಉಪಸಭಾಪತಿಯಾಗಿ ಹಾಗೂ ಸುಮಾರು ಒಂದೂವರೆ ವರ್ಷಗಳ ಕಾಲ ಹಂಗಾಮಿ ಸಭಾಪತಿಯಾಗಿ ಸದನವನ್ನು ಸಮರ್ಥವಾಗಿ ನಿರ್ವಹಿಸಿದ್ದರು” ಎಂದು ಸ್ಮರಿಸಿದ್ದಾರೆ.
“ಡೇವಿಡ್ ಸಿಮಿಯೋನ್ ಅವರು ಎಲ್ಲ ಜನಾಂಗಗಳ ಬಗೆಗೂ ಅತೀವ ಪ್ರೀತಿ, ಕಾಳಜಿ ಹೊಂದಿದ್ದರು. ಉತ್ತರ ಕರ್ನಾಟಕ ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಸೇರಿದಂತೆ ಎಲ್ಲಾ ರಂಗಗಳ ಅಭಿವೃದ್ದಿಗೆ ಅರ್ಹನಿಶಿ ಶ್ರಮಿಸಿರುವ ಡೇವಿಡ್ ಸಿಮಿಯೋನ್ ತಮ್ಮ ಸರಳತೆ ಹಾಗೂ ಸಜ್ಜನಿಕೆಯಿಂದ ಇಂದಿನ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ” ಎಂದು ಹೇಳಿದ್ದಾರೆ.
“ಡೇವಿಡ್ ಸಿಮಿಯೋನ್ ಅವರ ಅಗಲಿಕೆಯಿಂದ ಕನ್ನಡ ನಾಡು ಉತ್ತಮ ಸಮಾಜ ಸೇವಕ ಹಾಗೂ ಸಂಸದೀಯ ಪಟುವನ್ನು ಕಳೆದುಕೊಂಡಂತಾಗಿದೆ ಎಂದು ಕಂಬನಿ ಮಿಡಿದಿರುವ ಬಸವರಾಜ ಹೊರಟ್ಟಿ, ಡೇವಿಡ್ ಸಿಮಿಯೋನ್ ಅವರ ಅಪಾರ ಅಭಿಮಾನಿಗಳು, ಬಂಧು ಮಿತ್ರರು ಹಾಗೂ ಕುಟುಂಬ ವರ್ಗದವರಿಗೆ ಭಗವಂತ ಅವರ ಅಗಲಿಕೆಯ ದುಖಃವನ್ನು ಸಹಿಸುವ ಶಕ್ತಿ ನೀಡಲಿ” ಎಂದು ಪ್ರಾರ್ಥಿಸಿದ್ದಾರೆ.