ಕರ್ನಾಟಕದ ನಂದಿನಿ ಹಾಲು ಎಲ್ಲ ರೀತಿಯಲ್ಲಿಯೂ ಉತ್ತಮ ಗುಣಮಟ್ಟದ ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸಿ ಮಾರುತ್ತ ಜನಮನ್ನಣೆ ಗಳಿಸಿದ್ದು, ಬೆಂಗಳೂರು ಮೆಟ್ರೋ ರೈಲು ನಿಲ್ದಾಣಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ತೆರೆಯಲು ಆದ್ಯತೆ ನೀಡಬೇಕೆಂದು ಸಿಪಿಎಂ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಅಭಿಪ್ರಾಯ ವ್ಯಕ್ತಪಡಿಸಿದರು.
ʼಬಹುತೇಕ ಸಣ್ಣ ಮತ್ತು ಅತಿ ಸಣ್ಣ ಹೈನುಗಾರರಿಂದ ಪ್ರತಿದಿನ ಸುಮಾರು 1 ಕೋಟಿ ಲೀಟರ್ ಗಿಂತ ಹೆಚ್ಚು ಹಾಲು ಸಂಗ್ರಹಣೆ ಮಾಡುತ್ತಿರುವ ಕೆಎಂಎಫ್ ಬಹುತೇಕ ಮಾರುಕಟ್ಟೆಗೆ ಬೆಂಗಳೂರು ಮಹಾನಗರವನ್ನೇ ಆಶ್ರಯಿಸಿದೆ. ರೈತರ ಸಹಕಾರಿಯಾಗಿರುವ ನಂದಿನಿಯನ್ನು ಬೆಳೆಸುವುದು ಹಾಗೂ ಉಳಿಸುವುದು ಸರ್ಕಾರದ ಆದ್ಯತೆಯಾಗಬೇಕು. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಲ್ಲಿ ಒಂದಾದ ಶಾಲಾ ಮಕ್ಕಳಿಗೆ ಹಾಲು ವಿತರಣೆಗೆ ಸರಬರಾಜು ಆಗುತ್ತಿರುವುದು ನಂದಿನಿ ಹಾಲು ಆಗಿದೆ. ಸಂಗ್ರಹವಾಗುವ ಎಲ್ಲ ಹಾಲು ಮಾರಾಟವಾಗುವುದಿಲ್ಲ. ಹಲವು ಉಪ ಉತ್ಪನ್ನಗಳನ್ನು ತಯಾರಿಸಿದ ಮೇಲೂ ಹಾಲು ಹೆಚ್ಚುವರಿಯಾಗಿ ಉಳಿಯುತ್ತದೆʼ ಎಂದು ಹೇಳಿದರು.
ʼಪ್ರತಿಯೊಂದು ರಾಜ್ಯವು ತನ್ನದೇ ಆದ ಸಹಕಾರಿ ಒಕ್ಕೂಟವನ್ನು ಹೊಂದಿದ್ದು, ಕೆಲವು ರಾಜ್ಯಗಳು ಕೊರತೆಯನ್ನು ಕೆಲವು ರಾಜ್ಯಗಳು ಮಿಗತೆಯನ್ನು ಹೊಂದಿವೆ. ಇಂತಹ ಸಂದರ್ಭದಲ್ಲಿ ಪರಸ್ಪರರ ಮಾರುಕಟ್ಟೆ ಕಸಿಯುವ ಆನಾರೋಗ್ಯಕರ ಪೈಪೋಟಿ ನಿವಾರಿಸಲು ಈ ಹಿಂದೆ ಎನ್ಡಿಡಿಬಿ ಮೂಲಕ ಹೆಚ್ಚುವರಿ ಹಾಲು ಲಾಭ ಇರುವ ಸಹಕಾರಿ ಒಕ್ಕೂಟಗಳಿಂದ ಪಡೆದು ಕೊರತೆ ಇರುವ ರಾಜ್ಯಗಳಲ್ಲಿ ಆ ರಾಜ್ಯದ ಬ್ರಾಂಡ್ ಹೆಸರಿನಲ್ಲೇ ಮಾರಾಟ ಮಾಡಲು ಕ್ರಮ ವಹಿಸಲಾಗುತ್ತಿತ್ತು .ಆ ಮೂಲಕ ರಾಜ್ಯಗಳ ಸಹಕಾರಿ ಒಕ್ಕೂಟಗಳು ಪರಸ್ಪರ ಆನಾರೋಗ್ಯಕರ ಪೈಪೋಟಿ ಗೆ ಅವಕಾಶ ಇಲ್ಲದಂತೆ ನೋಡಿಕೊಳ್ಳಲಾಗುತ್ತಿತ್ತುʼ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼಹಿಂದಿನ ಚುನಾವಣೆಯ ಸಂದರ್ಭದಲ್ಲಿ ಸಹಕಾರಿ ವಲಯಕ್ಕೆ ಅಮುಲ್ ಲಗ್ಗೆ ಇಡುತ್ತದೆ ಎಂಬುದು ಕೂಡಾ ಚರ್ಚೆಯ ವಿಷಯವಾಗಿತ್ತು. ಈಗ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಕೆಎಂಎಫ್ನ ನೂತನ ನಿರ್ದೇಶಕರಾಗಿದ್ದು, ಮುಂದೆ
ಅಧ್ಯಕ್ಷರಾಗಲು ಎಲ್ಲಾ ತಯಾರಿ ನಡೆಸಿರುವ ಸಂದರ್ಭದಲ್ಲಿ ಅಮುಲ್ ಉತ್ಪನ್ನಗಳನ್ನು ಮೆಟ್ರೋ ನಿಲ್ದಾಣಗಳು ಅಥವಾ ಇತರ ಸರಕಾರಿ ಒಡೆತನದ ಜಾಗಗಳಲ್ಲಿ ಮಾರಾಟಕ್ಕೆ ಅನುಕೂಲ ಮಾಡಿಕೊಡುವುದು ಎಷ್ಟು ಸರಿ? ಟೆಂಡರ್ ಪ್ರಕ್ರಿಯೆಯಲ್ಲಿ ಅಮುಲ್ ಮಾತ್ರ ಭಾಗವಹಿಸಿತ್ತು ಕೆಎಂಎಫ್ ಭಾಗವಹಿಸಿಲ್ಲ ಎಂದರೆ ಅದರ ಹೊಣೆ ಯಾರದು? ಟೆಂಡರ್ ಹಾಕದಿರಲು ಕಾರಣವೇನೆಂದು ಬಹಿರಂಗ ಪಡಿಸಬೇಕುʼ ಎಂದು ಆಗ್ರಹಿಸಿದರು.
ಇದನ್ನೂ ಓದಿ : ಕಲಬುರಗಿ | ಕರ್ತವ್ಯ ಲೋಪ ಆರೋಪ : ಪ್ರಭಾರ ಮುಖ್ಯಶಿಕ್ಷಕ ಅಮಾನತು