ಬೆಳಗಾವಿ | ರಾಷ್ಟ್ರದ ತೈಲ ಸುರಕ್ಷತೆಗೆ ತಾಳೆ ಕೃಷಿಯ ಬಲ: ರೈತ ಸದಾನಂದ ಕರಾಡೆಯ ಯಶೋಗಾಥೆ

Date:

Advertisements

ಭಾರತ ತೈಲಕ್ಕಾಗಿ ವಿದೇಶದ ಬಾಗಿಲು ತಟ್ಟುತ್ತಿರುವ ಈ ಹೊತ್ತಿನಲ್ಲಿ, ತೈಲ ಉತ್ಪಾದನೆಯಲ್ಲಿ ಕ್ರಾಂತಿ ತರಬಲ್ಲ ಶಕ್ತಿ “ತಾಳೆ ಕೃಷಿ” ಎಂದು ಗುರುತಿಸಲಾಗಿದೆ. ಜಾಗತಿಕ ತೈಲ ಬೀಜಗಳ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ತಾಳೆ(ಪಾಮ್) ಬೆಳೆ, ಈಗ ಕರ್ನಾಟಕದ ನೆಲದಲ್ಲೂ ಹೊಸ ಭರವಸೆಯ ಬೆಳಕನ್ನು ಹರಡುತ್ತಿದೆ.

ತೈಲದ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ತಾಳೆ(ಪಾಮ್) ಬೆಳೆ, ಜಾಗತಿಕ ಮಟ್ಟದಲ್ಲಿ ಅತ್ಯಂತ ಹೆಚ್ಚು ಬೇಡಿಕೆಯ ತೈಲ ಬೀಜದ ಬೆಳೆಯಾಗಿ ಗುರುತಿಸಿಕೊಂಡಿದೆ. ಈ ಬೆಳೆಯು ವರ್ಷಕ್ಕೆ ಪ್ರತಿ ಹೆಕ್ಟೇರ್‌ಗೆ ಸರಾಸರಿ 4 ರಿಂದ 6 ಟನ್ ಇಳುವರಿಯನ್ನು ನೀಡುವ ಸಾಮರ್ಥ್ಯ ಹೊಂದಿದ್ದು, ಕೆಲವರು 10 ರಿಂದ 11 ಟನ್‌ವರೆಗೂ ಹೆಚ್ಚು ಇಳುವರಿ ಪಡೆದು ಗಮನ ಸೆಳೆಯುತ್ತಿದ್ದಾರೆ.

ಅಡುಗೆ ಎಣ್ಣೆ, ವನಸ್ಪತಿ, ಸಾಬೂನು, ಗ್ಲಿಸರಿನ್ ಹಾಗೂ ಪ್ಯಾರಾಫಿನ್ ತಯಾರಿಕೆಯಲ್ಲಿ ಪಾಮ್ ಎಣ್ಣೆ ಮಹತ್ತರ ಪಾತ್ರವಹಿಸುತ್ತಿದ್ದು, ಇದರ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಾಳೆ ಹಣ್ಣಿನಿಂದ ಪಾಮ್ ಎಣ್ಣೆ ಮತ್ತು ಬೀಜಗಳಿಂದ ಪಾಮ್ ಕರ್ನಲ್ ಎಣ್ಣೆ ಉತ್ಪಾದಿಸಲಾಗುತ್ತದೆ.

Advertisements

ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ ತಾಳೆಯ ಬಡವಣಿಗೆಗೆ ಬೆಳಕಾಗಿರುವ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ರಂಕಲಕೊಪ್ಪದ ರೈತ ಸದಾನಂದ ಕರಾಡೆ ಅವರ ಹೆಸರು ಪ್ರತ್ಯೇಕವಾಗಿ ಪ್ರಸ್ತಾಪಕ್ಕೆ ಬರುತ್ತದೆ. 2008ರಲ್ಲಿ ಕೇವಲ 2 ಎಕರೆ ಜಮೀನಿನಲ್ಲಿ ಪ್ರಾರಂಭಿಸಿದ ಈ ಕೃಷಿ ಇಂದು 9 ಎಕರೆಗಳಷ್ಟು ವಿಸ್ತರಿಸಿದ್ದು, ಬಹುಮಟ್ಟಿಗೆ ತಾಳೆ ಕೃಷಿ ಬೆಳವಣಿಗೆಗೆ ಉದಾಹಣೆಯಾಗಿದೆ. ಇವರು ರಾಮದುರ್ಗ ತಾಲೂಕಿನಲ್ಲಿಯೇ ಮೊದಲ ತಾಳೆ ಬೆಳೆಯನ್ನು ಬೆಳೆದ ರೈತರಾಗಿದ್ದಾರೆ. ಅಲ್ಲದೆ ಜಿಲ್ಲೆಯ ಅನೇಕ ರೈತರಿಗೆ ತಾಳೆ ಬೆಳೆಯ ಮಹತ್ವವನ್ನು ಹಾಗೂ ಲಾಭವನ್ನು ಪರಿಚಯ ಮಾಡಿಕೊಟ್ಟಿದ್ದಾರೆ.

ತಾಳೆ ಕೃಷಿ 1

ಈ ಕುರಿತು ರೈತ ಸದಾನಂದ ಕರಾಡೆಯವರು ಈ ದಿನ.ಕಾಮ್ನೊಂದಿಗೆ ಮಾತನಾಡಿ, “2008ರಿಂದ ತಾಳೆ ಬೆಳೆಯಲು ಪ್ರಾರಂಭಿಸಿದ್ದು, ಮೊದಲು 2 ಎಕರೆಯಲ್ಲಿ ತಾಳೆ ಕೃಷಿ ಮಾಡಿದೆ. ಸದ್ಯ 9 ಎಕರೆಯಲ್ಲಿ ತಾಳೆ ಕೃಷಿ ಮಾಡುತ್ತಿದ್ದು, ಉತ್ತಮ ಆದಾಯವಿದೆ. ತಾಳೆ ಕೃಷಿಗೆ ಸರ್ಕಾರದಿಂದ ಸಹಾಯಧನ ಸಿಗುತ್ತದೆ ಹಾಗೂ ಕಂಪನಿಯ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಕಂಪೆನಿಯವರು ನಮಗೆ ತಾಳೆ ಸಸಿ ಕೊಡುತ್ತಾರೆ. ಮೂರು ವರ್ಷಗಳ ನಂತರ ಕಾಯಿ ಬಿಡುತ್ತದೆ. ಆ ಸಂದರ್ಭದಲ್ಲಿ ಕಂಪನಿಯವರೇ ಬಂದು ಕೊಂಡುಕೊಳ್ಳುತ್ತಾರೆ. ಅಲ್ಲದೆ ಕ್ರಿಮಿನಾಶಕ ಮತ್ತು ಗೊಬ್ಬರವನ್ನು ಸರ್ಕಾರ ಹಾಗೂ ಕಂಪೆನಿಯವರು ನೀಡುತ್ತಾರೆ. ಕೃಷಿ ಉಪಕರಣ, ಕ್ರಿಮಿನಾಶಕಗಳಿಗೆ ಸರ್ಕಾರ ಸಹಾಯಧನ ನೀಡುತ್ತದೆ. ಸರ್ಕಾರದಿಂದ ಒಂದು ಟನ್ ತಾಳೆ ಬೀಜಕ್ಕೆ ₹14,400 ಬೆಂಬಲ ಬೆಲೆ ಇದೆ. ರೈತರು ತಾಳೆ ಕೃಷಿಯಿಂದ ಲಾಭವನ್ನು ಗಳಿಸಬಹುದು ವರ್ಷಕ್ಕೆ ಒಂದು ಎಕರೆಗೆ 10ರಿಂದ 11ಟನ್ ಇಳುವರಿ ಬರುತ್ತದೆ. ಆಳುಗಳ ಕೊರತೆ ಉದ್ಭವಿಸುವುದಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಒಂದು ಟನ್ ತಾಳೆ ಬೀಜಕ್ಕೆ ₹16,000 ಬೆಲೆ ಇದೆ” ಎಂದು ಸರ್ಕಾರದಿಂದ ಸಿಗುವ ಸಹಾಯಧನ ಕುರಿತು ಮಾಹಿತಿ ನೀಡಿದರು.

“ತಾಳೆ ಜೊತೆಗೆ ಬಾಳೆ, ಕಬ್ಬು ಬೆಳೆಯನ್ನೂ ಮಿಶ್ರ ಬೇಸಾಯವಾಗಿ ಮಾಡಬಹುದಾಗಿದೆ. ನಾವು ಬಾಳೆಯನ್ನು ಮಿಶ್ರ ಬೇಸಾಯವಾಗಿ ಬೆಳೆಯುತ್ತಿದ್ದು, ಉತ್ತಮ ಇಳುವರಿ ಮತ್ತು ಆದಾಯ ಬರುತ್ತಿದೆ. ನಿತ್ಯ ನೀರು ಹಾಯಿಸುವದರಿಂದ ಬೆಳೆಗೆ ಅನುಕೂಲವಾಗುತ್ತದೆ” ಎಂದು ಮಾಹಿತಿ ಹಂಚಿಕೊಂಡರು.

ರಾಮದುರ್ಗ ತಾಲೂಕಿನ ಕೃಷಿ ಅಧಿಕಾರಿ ಪ್ರಕಾಶ ಮುಗಳಕೋಡ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ತಾಳೆ ಕೃಷಿ ಮಾಡುವ ರೈತರಿಗೆ ಸಸಿಗಳನ್ನು ನೀಡಲು ಕಂಪನಿಯ ಮೂಲಕ ಉಚಿತವಾಗಿ ನೀಡುತ್ತೆವೆ. ಒಂದು ಹೆಕ್ಟೇರ್ ತಾಳೆ ಕೃಷಿಗೆ ₹5,200 ಸಹಾಯಧನ ನೀಡಲಾಗುತ್ತದೆ. ನೀರಾವರಿಗೆ ಸಹಾಯಧನ ನೀಡಲಾಗುತ್ತದೆ, ಪಂಪ್ಸೆಟ್‌ಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. ರೈತರು ಇದರ ಪ್ರಯೋಜನ ಪಡೆದುಕೊಂಡು ತಾಳೆ ಕೃಷಿ ಮಾಡಬಹುದು” ಎಂದು ತಿಳಿಸಿದರು.

ರಾಜ್ಯದಲ್ಲಿ ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಹಾಸನ, ತುಮಕೂರು, ಬೆಂಗಳೂರು ದಕ್ಷಿಣ, ಚಾಮರಾಜ ನಗರ, ಮಂಡ್ಯ, ಬೆಳಗಾವಿ ಜಿಲ್ಲೆಗಳಲ್ಲಿ ತಾಳೆ ಕೃಷಿಯನ್ನು ಬೆಳೆಯಲಾಗುತ್ತಿದೆ.

ತಾಳೆ ಕೃಷಿಗೆ ಸರ್ಕಾರದಿಂದ ಪ್ರೋತ್ಸಾಹ

ಭಾರತದಲ್ಲಿ ಖಾದ್ಯ ತೈಲದ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಪ್ರಸ್ತುತ ಇದನ್ನು ಪೂರೈಸಲು ಬಹುಮಟ್ಟಿಗೆ ಆಮದಿನ ಮೇಲೆ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ವಾರ್ಷಿಕ ಖಾದ್ಯ ತೈಲ ಬೇಡಿಕೆ ಸದ್ಯಕ್ಕೆ 236 ಲಕ್ಷ ಟನ್‌ಗಳಷ್ಟಾಗಿದ್ದು, ದೇಶೀಯ ಉತ್ಪಾದನೆ ಮಾತ್ರ 70ರಿಂದ 80 ಲಕ್ಷ ಟನ್‌ಗಳಷ್ಟು ಮಾತ್ರವಾಗಿದೆ.

ಈ ಅಂತರವನ್ನು ಪೂರೈಸುವ ಸಲುವಾಗಿ ಪ್ರತಿವರ್ಷ ಸುಮಾರು 150 ಲಕ್ಷ ಟನ್ ಖಾದ್ಯ ತೈಲವನ್ನು ವಿವಿಧ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಇದರ ಆರ್ಥಿಕ ಮೌಲ್ಯ ವಾರ್ಷಿಕ ₹77,000 ಕೋಟಿಗಳಷ್ಟಾಗುತ್ತಿತ್ತು. ಅಂತಹ ಹೊರದೇಶದ ಅವಲಂಬನೆಯನ್ನು ಕಡಿಮೆ ಮಾಡಲು ದೇಶೀಯ ತೈಲ ಬೀಜದ ಬೆಳೆಯ ಉತ್ಪಾದನೆಗೆ ಉತ್ತೇಜನ ನೀಡುವ ಅಗತ್ಯತೆ ಉಂಟಾಗಿದೆ. ಸರ್ಕಾರವು ತಾಳೆ ಬೆಳೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದ್ದು, ತಾಳೆ ಗಿಡ ಬೆಳೆಗೆ ಶೇ.85ರವರೆಗೆ ಸಹಾಯಧನ, ನೀರಾವರಿ ಸೌಲಭ್ಯಗಳಿಗೆ ಅನುದಾನ, ಗೊಬ್ಬರ, ಕೀಟನಾಶಕ, ಕಟಾವು ಉಪಕರಣಗಳಿಗೆ ಸಹಾಯಧನ, ತೈಲ ಸಂಸ್ಕರಣೆ ಘಟಕಗಳ ಸ್ಥಾಪನೆಗೆ ಸಹಾಯಧನ, ಡ್ರೋನ್ ಬಳಕೆಗೆ ಸಹಾಯಧನ ನೀಡುತ್ತಿದೆ.

ಇದನ್ನೂ ಓದಿದ್ದೀರಾ? ರಾಜ್ಯಾದ್ಯಂತ ಭಾರೀ ಮಳೆ: ಅವಧಿಗೂ ಮುನ್ನ ಜಲಾಶಯಗಳ ನೀರಿನ ಮಟ್ಟ ಹೆಚ್ಚಳ

ಐಎಸ್‌ಒಪಿಒಎಂ ನ್ಯಾಷನಲ್ ಆಯಿಲ್ ಸೀಡ್ಸ್ ಆಂಡ್ ಆಯಿಲ್ ಪಾಮ್ ಹಾಗೂ ಎನ್‌ಎಂಒಒಪಿ ಮೂಲಕ ಪೋಷಣಾ ಸಹಾಯ ದೊರೆಯುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಾಳೆ ಕೃಷಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿವೆ.

ತಾಳೆ ಕೃಷಿಯಿಂದ ರಾಮದುರ್ಗ ತಾಲೂಕಿನ ರೈತ ಸದಾನಂದ ಕರಾಡೆ ಉತ್ತಮ ಲಾಭ ಗಳಿಸುತ್ತಿದ್ದು, ಇತರ ರೈತರಿಗೂ ಈ ಕುರಿತು ಮಾಹಿತಿ ನೀಡುವ ಮೂಲಕ ರೈತರಿಗೆ ಮಾರ್ಗದರ್ಶಕರಾಗಿ ಪ್ರಗತಿಪರ ರೈತರಾಗಿದ್ದಾರೆ.

ಸುನಿಲ್
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

Download Eedina App Android / iOS

X