ಛೋಟಾ ಮುಂಬೈ ಹುಬ್ಬಳ್ಳಿಯು ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದು, ಸಮಸ್ಯೆಗಳ ಆಗರವಾಗಿದೆ. ಇಲ್ಲಿನ ಜನತೆ ನಿತ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಸ್ಪಂದಿಸಿದರೂ ಬಾಯಿಮೇಲೆ ಬೆಣ್ಣೆ ಸವರುವ ಕೆಲಸ ಮಾತ್ರ ಮಾಡುತ್ತಿದ್ದಾರೆ ಎಂಬುದು ಇಲ್ಲಿನ ಜನರ ಅಳಲಾಗಿದೆ. ಆ ಹಿನ್ನೆಲೆಯಲ್ಲಿ ನಗರದ ವಿರಾಪೂರ ರಸ್ತೆಯಲ್ಲಿರುವ ಎರಡೆತ್ತಿನ ಮಠದ ಮುಂಭಾಗದಲ್ಲಿ ತೆರೆದ ಒಳಚರಂಡಿಯಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಎರಡೆತ್ತಿನ ಮಠದ ಮುಂಭಾಗದ ರಸ್ತೆಯಲ್ಲಿರುವ ಒಳಚರಂಡಿಯು ಕಳೆದ ಎಂಟು ತಿಂಗಳಿಂದ ತುಂಬಿ ಹರಿಯುತ್ತಿದ್ದು, ಸಾರ್ವಜನಿಕರ ಓಡಾಟಕ್ಕೆ ಬಹಳ ತೊಂದರೆ ಉಂಟಾಗಿದೆ. ಅನೇಕ ಸಲ ಮಕ್ಕಳು, ಬೈಕ್ ಸವಾರರು ಆಯತಪ್ಪಿ ಬಿದ್ದುದ್ದೂ ಉಂಟು. ನಿತ್ಯ ಬೆಳಗಾದರೆ ಅಕ್ಕಪಕ್ಕದಲ್ಲಿರುವ ಅಂಗಡಿಕಾರರು ಮತ್ತು ಇಲ್ಲಿರುವ ಮಠದಲ್ಲಿ ನರ್ಸರಿ ಶಾಲೆ ನಡೆಯುತ್ತಿದ್ದು, ಆ ಶಾಲಾ ಮಕ್ಕಳು ಕೊಳಚೆ ನೀರಿನ ದುರ್ಗಂಧವನ್ನು ಸೇವಿಸುತ್ತ ಜೀವಿಸುವ ವಾತಾವರಣ ಸೃಷ್ಟಿಯಾಗಿದೆ. ಚಿಕ್ಕ ಮಕ್ಕಳು, ವಯಸ್ಸಾದವರು ಅನೇಕ ಸಲ ಜಾರಿ ಬಿದ್ದಿದ್ದಾರೆ. ಒಟ್ಟಿನಲ್ಲಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬಂದೊದಗಿದೆ.
ಈ ಕುರಿತು ಸ್ಥಳೀಯ ನಿವಾಸಿ ರಿಯಾಜ಼್ ಅಹ್ಮದ್ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಇಲ್ಲಿ ಉಂಟಾಗಿರುವ ಒಳಚರಂಡಿ ಸಮಸ್ಯೆಯನ್ನು ಬಗೆಹರಿಸಲು ಮತ್ತೊಂದು ಒಳಚರಂಡಿ ರಿಪೇರಿ ಮಾಡಿದ್ದಾರೆ. ಆದರೆ ರಿಪೇರಿ ಮಾಡಿದ ಒಳಚರಂಡಿಯ ತಗ್ಗಿಗೆ ಮಣ್ಣು ಹಾಕದೆ ಹಾಗೆಯೇ ಬಿಟ್ಟಿದ್ದಾರೆ. ಅದರಿಂದ ಸಾರ್ವಜನಿಕ ವಾಹನಗಳು ಓಡಾಡುವುದು ಬಹಳಷ್ಟು ಕಷ್ಟವಾಗಿದೆ. ಈ ಸಮಸ್ಯೆ ಕುರಿತು ಹಲವು ಬಾರಿ ಮಹಾನಗರ ಪಾಲಿಕೆಯ ಗಮನಕ್ಕೂ ತಂದಿದ್ದೇವೆ. ಮನವಿ ಪತ್ರಗಳನ್ನೂ ಕೊಟ್ಟಿದ್ದೇವೆ. ಅದರಂತೆ ಸ್ಥಳಕ್ಕೆ ಅಧಿಕಾರಿಗಳು ಬಂದು ಭೇಟಿ ಕೊಟ್ಟಿದ್ದಾರೆ. ತಾತ್ಕಾಲಿಕವಾಗಿ ಈ ಸಮಸ್ಯೆಯನ್ನು ಸರಿಪಡಿಸಿ ಹೋಗುತ್ತಾರೆ. ಆದರೆ ಶಾಶ್ವತ ಪರಿಹಾರ ದೊರಕುವುದು ಯಾವಾಗ ಎಂಬುದು ಇಲ್ಲಿನ ಜನರ ಚಿಂತೆಯಾಗಿದೆ. ನಿತ್ಯ ಬೆಳಗಾದರೆ ಈ ಕೊಳಚೆ ನೀರಿನ ವಾಸನೆಯನ್ನು ತಡೆದುಕೊಂಡು ಬದುಕು ಸಾಗಿಸುವ ವಾತಾವರಣ ಸೃಷ್ಟಿಯಾಗಿದೆ. ಆದಷ್ಟು ಬೇಗ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು” ಎಂದು ಒತ್ತಾಯಿಸಿದರು.

“ದಿನಬೆಳಗಾದರೆ ಈ ಒಳಚರಂಡಿ ನೀರು ಹರಿಯುವ ಸಮಸ್ಯೆಯನ್ನೇ ನಾವು ಎದುರಿಸುತ್ತಿದ್ದೇವೆ. ಇಲ್ಲಿವರೆಗೂ ಅನೇಕ ಬಾರಿ ಸೈಕಲ್ ಮತ್ತು ಬೈಕ್ ಸವಾರರು ಆಯತಪ್ಪಿ ಬಿದ್ದಿದ್ದಾರೆ. ಪಾದಚಾರಿಗಳು ಈ ಕೊಳಚೆ ರಸ್ತೆಯಲ್ಲಿಯೇ ನಡೆದುಕೊಂಡು ಹೋಗಬೇಕು. ಹೋಗುವಾಗ ಅನೇಕರು ಕಾಲು ಜಾರಿ ಬಿದ್ದು ಎದ್ದಿದ್ದಾರೆ. ಈ ಬಗ್ಗೆ ಹಲವು ಬಾರಿ ಮಹಾನಗರ ಪಾಲಿಕೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಒಂದು ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿ ಮತ್ತೊಂದು ಸಮಸ್ಯೆಯನ್ನು ಉಂಟುಮಾಡಿದ್ದಾರೆ. ರಸ್ತೆ ಮಧ್ಯದಲ್ಲಿಯೇ ಪೈಪ್ಲೈನ್ ತಗ್ಗು ಗುಂಡಿಯನ್ನು ಅಗೆದಿದ್ದು, ಅದನ್ನೂ ಮುಚ್ಚದೆ ಹಾಗೆಯೇ ಬಿಟ್ಟಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ಸಮಸ್ಯೆ ಉಂಟಾಗುತ್ತಿದೆ. ಇಲ್ಲಿ ಓಡಾಡುವುದೇ ಬಹಳಷ್ಟು ಕಷ್ಟವೆನಿಸಿಬಿಟ್ಟಿದೆ” ಎನ್ನುತ್ತಾರೆ ಸ್ಥಳೀಯರು.

“ಒಂದು ಕಡೆ ದುರ್ವಾಸನೆ ಮತ್ತೊಂದು ಕಡೆ ಸಾಯಂಕಾಲವಾದರೆ ಸಾಕು ಸೊಳ್ಳೆಕಾಟದಿಂದ ಇಲ್ಲಿನ ಜನ ಬೇಸತ್ತು ಹೋಗಿದ್ದಾರೆ. ಇಲ್ಲಿನ ಒಂದೇ ಜಾಗದಲ್ಲಿ ಮೂರು ಒಳಚರಂಡಿ ತುಂಬಿ ಹರಿಯುತ್ತ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿವೆ. ಒಂದು ಪೈಪ್ಲೈನ್ ತಗ್ಗು ನಡುರಸ್ತೆಯಲ್ಲಿಯೇ ಜನರಿಗೆ ಕಿರಿಕಿರಿ ಉಂಟುಮಾಡಿದೆ. ರಸ್ತೆಮೇಲೆ ಕೊಳಚೆ ನೀರು ಹರಿದುಹೋಗುವ ಒಳಚರಂಡಿಯ ಕೊಳಚೆ ನೀರಿನಲ್ಲೇ ಪಾದಚಾರಿಗಳು ದಾಟಬೇಕು. ಜಾನುವಾರುಗಳೂ ಅದೇ ಕೊಳಚೆ ನೀರನ್ನು ಕುಡಿಯುತ್ತವೆ. ವಿಪರೀತ ಟ್ರಾಫಿಕ್ ಜಾಮ್ ಆಗುತ್ತದೆ. ಅಧಿಕಾರಿಗಳು ಬರುತ್ತಾರೆ ಹೋಗುತ್ತಾರೆ. ಯಾರೂ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ, ಬಗೆಹರಿಸುವವರಿಲ್ಲ” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿದ್ದೀರಾ? ಬಿಪಿಎಲ್ ಕುಟುಂಬಗಳಿಗೆ ‘ಇಂದಿರಾ ಆಹಾರ ಕಿಟ್’ ವಿತರಣೆಗೆ ಸರ್ಕಾರ ಚಿಂತನೆ; ತಗ್ಗುವುದೇ ಮಧ್ಯವರ್ತಿಗಳ ಹಾವಳಿ
ನಿತ್ಯವೂ ಮಠಕ್ಕೆ ಭಕ್ತರು ಬಂದು ಹೋಗುವುದು ಸರ್ವೇ ಸಾಮಾನ್ಯ. ಇಂತಹ ಕೊಳಚೆ ನೀರಿನಲ್ಲೇ ಎಲ್ಲರೂ ಓಡಾಡಬೇಕು. ಒಮ್ಮೆ ರಾಜಕಾರಣಿಗಳು, ಪಾಲಿಕೆ ಸದಸ್ಯರು, ಅಧಿಕಾರಿಗಳು ಇಂತಹ ವಾತಾವರಣದಲ್ಲಿ ಬದುಕಿ ತೋರಿಸಲಿ ಮತ್ತು ಓಡಾಡಲಿ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.