ಸುಮಾರು 23 ದೇಶಗಳಲ್ಲಿ ತನ್ನ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳ ಮಾರಾಟ ವ್ಯವಸ್ಥೆ ಹೊಂದಿರುವ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತಕ್ಕೆ (ಕೆಎಸ್ಡಿಎಲ್) ಹಾಗೂ ಮೈಸೂರು ಸ್ಯಾಂಡಲ್ ಸೋಪು ಉತ್ಪಾದನಾ ಘಟಕಕ್ಕೆ ಭಾರತದಲ್ಲಿರುವ ಬ್ರಿಟಿಷ್ ಹೈಕಮಿಷನರ್ ಲಿಂಡಿ ಕ್ಯಾಮರೋನ್ ಮತ್ತು ಕರ್ನಾಟಕ-ಕೇರಳ ವ್ಯಾಪ್ತಿಯಲ್ಲಿನ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಭೇಟಿ ನೀಡಿ, ಉತ್ಪನ್ನಗಳ ಬಗ್ಗೆ ತಿಳಿದುಕೊಂಡರು.
ಕೆಎಸ್ಡಿಎಲ್ಗೆ ಭೇಟಿ ನೀಡಿದ ಈ ಇಬ್ಬರು ಗಣ್ಯರನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬರಮಾಡಿಕೊಂಡರು. ಜತೆಯಲ್ಲಿ ಸಂಸ್ಥೆಯ ಅಧ್ಯಕ್ಷ ಸಿ.ಎಸ್. ನಾಡಗೌಡ ಕೂಡ ಇದ್ದರು. ಈ ಸಂದರ್ಭದಲ್ಲಿ, ಕೆಎಸ್ಡಿಎಲ್ ಚರಿತ್ರೆಯನ್ನು ಕಟ್ಟಿಕೊಡುವ ಪ್ರಾತ್ಯಕ್ಷಿಕೆಯನ್ನು ಲಿಂಡಿ ಮತ್ತು ಅಯ್ಯರ್ ಇಬ್ಬರಿಗೂ ಪ್ರದರ್ಶಿಸಲಾಯಿತು.
ಸಂಸ್ಥೆಯ ಉಗಮದ ಹಿನ್ನೆಲೆಯಲ್ಲಿ ಬ್ರಿಟನ್ನಿನ ಪಾತ್ರ ಇರುವುದನ್ನು ಕೇಳಿ, ಇಬ್ಬರೂ ಅಚ್ಚರಿ ವ್ಯಕ್ತಪಡಿಸಿದರು. ಜತೆಯಲ್ಲೇ ಕೆಎಸ್ಡಿಎಲ್ ಉತ್ಪನ್ನಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಲಿಂಡಿ ಮತ್ತು ಅಯ್ಯರ್ ಇಬ್ಬರೂ ಸಂಸ್ಥೆಯ ಉತ್ಪನ್ನಗಳ ತಯಾರಿಕೆ ವಿಧಾನವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲಿಂಡಿ ಕ್ಯಾಮರೋನ್, ಭಾರತ ಮತ್ತು ಬ್ರಿಟನ್ ನಡುವೆ ಮುಕ್ತ ವಾಣಿಜ್ಯ ಒಪ್ಪಂದ ಏರ್ಪಟ್ಟಿರುವುದರಿಂದ ಎರಡೂ ದೇಶಗಳಿಗೂ ಸಾಕಷ್ಟು ಲಾಭವಾಗಲಿದೆ. ನಾವು ನಮ್ಮ ನಮ್ಮ ನೈಪುಣ್ಯಗಳನ್ನು ಪರಸ್ಪರರ ಹಿತಗಳಿಗೆ ಧಕ್ಕೆಯಾಗದಂತೆ ವಿನಿಮಯ ಮಾಡಿಕೊಳ್ಳಬೇಕು. ಈ ಒಡಂಬಡಿಕೆಯ ಲಾಭವು ಕೈಗಾರಿಕಾ ಬೆಳವಣಿಗೆ ಮತ್ತು ವಾಣಿಜ್ಯ ವಹಿವಾಟಿನಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕಕ್ಕೂ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
108 ವರ್ಷಗಳ ಹಿಂದೆ, ಅಂದರೆ 20ನೇ ಶತಮಾನದ ಎರಡನೆಯ ದಶಕದಲ್ಲಿ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಆಸ್ಥಾನದಿಂದ ಪರಿಣತರೊಬ್ಬರನ್ನು ಬ್ರಿಟನ್ನಿಗೆ ಕಳುಹಿಸಿ, ಸಾಬೂನು ತಯಾರಿಕೆ ತಂತ್ರಜ್ಞಾನದ ಪರಿಚಯ ಮಾಡಿಕೊಂಡರು. ಆಮೇಲೆ, ನಾಲ್ವಡಿ ಮತ್ತು ವಿಶ್ವೇಶ್ವರಯ್ಯನವರ ದೂರದೃಷ್ಟಿಯಿಂದ ಸ್ಥಾಪನೆಗೊಂಡ ಕೆಎಸ್ಡಿಎಲ್ ಉತ್ಕೃಷ್ಟ ಮಟ್ಟಕ್ಕೆ ಬೆಳೆದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಚಿವ ಪಾಟೀಲ್ ತಿಳಿಸಿದರು.
ಕೆಎಸ್ಡಿಎಲ್ ಉತ್ಪನ್ನಗಳನ್ನು ಸದ್ಯಕ್ಕೆ 23 ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಯೂರೋಪಿಯನ್ ರಾಷ್ಟ್ರಗಳಿಗೂ ಮೈಸೂರು ಸ್ಯಾಂಡಲ್ ಸೋಪ್, ಶವರ್ ಜೆಲ್ ಮುಂತಾದ ಗುಣಮಟ್ಟದ ಉತ್ಪನ್ನಗಳನ್ನು ಮತ್ತಷ್ಟು ರವಾನಿಸಲಾಗುವುದು. ಇದಕ್ಕೆ ಬ್ರಿಟನ್ನಿನ ಸಹಕಾರವೂ ನಮಗೆ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಾರುಕಟ್ಟೆ ವಿಸ್ತರಣೆ ನಡೆಯುತ್ತಿದೆ ಎಂದರು.
ಕೆಎಸ್ಡಿಎಲ್ ಸಂಸ್ಥೆಯು ಕಳೆದ ಸಾಲಿನಲ್ಲಿ 416 ಕೋಟಿ ರೂ. ಲಾಭ ಗಳಿಸಿದ್ದು, 2028ರ ವೇಳೆಗೆ ವಾರ್ಷಿಕ ವಹಿವಾಟನ್ನು 3,000 ಕೋಟಿ ರೂ.ಗಳಿಗೆ ಕೊಂಡೊಯ್ಯಲಾಗುವುದು. ಜತೆಗೆ ವಿಜಯಪುರದಲ್ಲಿ 50 ಎಕರೆ ವಿಸ್ತೀರ್ಣದಲ್ಲಿ ಉತ್ಪಾದನಾ ಘಟಕವನ್ನೂ ಆರಂಭಿಸಲಾಗುವುದು. ಸದ್ಯದಲ್ಲೇ ಸಂಸ್ಥೆಯ ವತಿಯಿಂದ ನಾನಾ ತರಹದ ಸುಗಂಧ ದ್ರವ್ಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದರು.
ಇದನ್ನು ಓದಿದ್ದೀರಾ? ಕಲ್ಲಡ್ಕ ಭುಜಕ್ಕೆ ಭುಜ ತಾಗಿಸಿ ನಿಂತರು ಜಾತ್ಯತೀತವಾದಿ ದೇವೇಗೌಡರು!
ಈ ವೇಳೆ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಮತ್ತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ್, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಇದ್ದರು.


