ಕಳೆದ ಐದು ವರ್ಷಗಳಲ್ಲಿ ಐಐಟಿ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 25,593 ಮಂದಿ ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡ (ಎಸ್ಟಿ), ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಇತರ ಅಲ್ಪಸಂಖ್ಯಾತ ಸಮುದಾಯದ ಒಟ್ಟು 25,593 ಮೀಸಲಾತಿ ವರ್ಗದ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಶ್ ಸರ್ಕಾರ್ ಈ ಬಗ್ಗೆ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. 2019 ಮತ್ತು 2023 ರ ನಡುವೆ ಇಲ್ಲಿಯವರೆಗೆ , 17,545 ವಿದ್ಯಾರ್ಥಿಗಳು ಕೇಂದ್ರೀಯ ವಿಶ್ವವಿದ್ಯಾಲಯಗಳಿಂದ ಮತ್ತು ಐಐಟಿಯಿಂದ 8,139 ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧದಲ್ಲಿಯೇ ಬಿಟ್ಟಿದ್ದಾರೆ ಎಂದು ಸಚಿವರು ತಿಳಿಸಿದರು.
ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಅವರ ಪ್ರಶ್ನೆಗೆ ಅಂಕಿಅಂಶಗಳೊಂದಿಗೆ ಸರ್ಕಾರ್ ಮಾಹಿತಿ ಹಂಚಿಕೊಂಡಿದ್ದಾರೆ.
ಸಚಿವರ ಮಾಹಿತಿಯ ಪ್ರಕಾರ, ಅರ್ಧದಲ್ಲಿಯೇ ಶಿಕ್ಷಣ ಬಿಟ್ಟವರಲ್ಲಿ ಹೆಚ್ಚಿನವರು ಸ್ನಾತಕೋತ್ತರ ಮತ್ತು ಪಿಎಚ್ಡಿ ಪದವಿ ಪಡೆಯಲು ಬಂದವರಾಗಿದ್ದಾರೆ. ಆದಾಗ್ಯೂ ನಿಖರವಾದ ಅಂಕಿಅಂಶಗಳನ್ನು ಸಚಿವರು ಉಲ್ಲೇಖಿಸಿಲ್ಲ.
ಈ ಸುದ್ದಿ ಓದಿದ್ದೀರಾ? ಉಡುಪಿ ಘಟನೆ | ಟ್ವಿಟರ್ನಲ್ಲಿ ಯೋಗಿ ಆದಿತ್ಯನಾಥ್ ಜೊತೆಗಿದ್ದ ಫೋಟೋ ‘ಡಿಲೀಟ್’ ಮಾಡಿದ ರಶ್ಮಿ ಸಮಂತ್!
ಸಾರ್ವಜನಿಕ ರಂಗದ ಸಂಸ್ಥೆಗಳಲ್ಲಿ ಕೆಲಸದ ಲಭ್ಯತೆ ಮತ್ತು ಉತ್ತಮ ಅವಕಾಶಗಳು ಮುಂತಾದ ಕಾರಣದಿಂದ ವಿದ್ಯಾರ್ಥಿಗಳು ಶಿಕ್ಷಣ ತ್ಯಜಿಸಿದ್ದಾರೆ.
ತಪ್ಪಾದ ವಿಷಯ ಆರಿಸಲಾಗಿದೆ ಅಥವಾ ವೈಯಕ್ತಿಕ ಮತ್ತು ವೈದ್ಯಕೀಯ ಕಾರಣಗಳು ಎಂದು ಹೇಳಿ ವಿದ್ಯಾರ್ಥಿಗಳು ಅರ್ಧದಲ್ಲಿಯೇ ಕೈಬಿಡಲು ಕಾರಣ ಉಳಿದ ಕಾರಣ ಎಂದು ಸಚಿವರು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಶಿಕ್ಷಣ ಮೊಟಕುಗೊಳಿಸುವುದನ್ನು ಕಡಿಮೆ ಮಾಡಲು ವಿಶ್ವವಿದ್ಯಾಲಯಗಳು ಮತ್ತು ಐಐಟಿಗಳು ಹಲವಾರು “ಸಮಾಲೋಚನೆ ಕಾರ್ಯಕ್ರಮಗಳನ್ನು” ಪ್ರಾರಂಭಿಸಿವೆ ಎಂದು ಪ್ರತಿಕ್ರಿಯೆಯಲ್ಲಿ ಸಚಿವರು ಹೇಳಿದ್ದಾರೆ.
ಸಮಾಲೋಚನೆ ಕಾರ್ಯಕ್ರಮಗಳಲ್ಲಿ,”ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಸಲಹೆಗಾರರ ನೇಮಕ, ಶೈಕ್ಷಣಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿಗಳನ್ನು ಒದಗಿಸುವುದು, ಒತ್ತಡವನ್ನು ನಿವಾರಿಸಲು ವಿದ್ಯಾರ್ಥಿಗಳಿಗೆ ಸಮಾಲೋಚನೆ, ಪಠ್ಯೇತರ ಚಟುವಟಿಕೆಗಳಂಥ ಕಾರ್ಯಕ್ರಮಗಳು ಸೇರಿವೆ ಎಂದು ಸುಭಾಶ್ ಸರ್ಕಾರ್ ತಿಳಿಸಿದ್ದಾರೆ.