- ಏಳು ಮಂದಿ ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್ ದಾಖಲು
- ಭದ್ರತೆ ಮತ್ತು ಜಾಗೃತ ದಳದ ಅಧಿಕಾರಿ ರಮ್ಯಾ ಸಿ ಕೆ ಯಿಂದ ಪೊಲೀಸರಿಗೆ ದೂರು
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯಲ್ಲಿ ಅಧಿಕಾರಿಗಳಿಂದಲೇ ಭಾರೀ ಗೋಲ್ಮಾಲ್ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಿಎಂಟಿಸಿ ಎಂಡಿ, ನಿರ್ದೇಶಕರ ನಕಲಿ ಸಹಿ ಬಳಸಿಕೊಂಡು ಸುಮಾರು ₹76.57 ಲಕ್ಷ ವಂಚನೆ ಮಾಡಿರುವುದು ಇಲಾಖೆಯ ತನಿಖೆಯಿಂದ ಬಯಲಾಗಿದ್ದು, ಅಕ್ರಮದಲ್ಲಿ ಭಾಗಿಯಾದ ಏಳು ಮಂದಿ ಅಧಿಕಾರಿಗಳ ವಿರುದ್ಧ ಬೆಂಗಳೂರಿನ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎರಡು ಎಫ್ಐಆರ್ ದಾಖಲಾಗಿದೆ.
ಎರಡೂ ಎಫ್ಐಆರ್ನ ಪ್ರತಿ ಈ ದಿನ.ಕಾಮ್ಗೆ ಲಭ್ಯವಾಗಿದ್ದು, ಬಿಎಂಟಿಸಿ ಅಧಿಕಾರಿಗಳು ಗುತ್ತಿಗೆದಾರರ ಜೊತೆ ಸೇರಿ ಅಕ್ರಮ ನಡೆಸಿದ್ದಾರೆ ಎಂದು ಬಿಎಂಟಿಸಿ ಸಹಾಯಕ ಭದ್ರತಾ ಜಾಗೃತಾಧಿಕಾರಿ ಸಿ.ಕೆ. ರಮ್ಯಾರವರು ಕಳೆದ ಜುಲೈ 27ರಂದು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಿಎಂಟಿಸಿಯ ವಾಣಿಜ್ಯ ವಿಭಾಗದ ಮುಖ್ಯ ಸಂಚಾರಕ ಸೇರಿ ಏಳು ಮಂದಿಯ ಮೇಲೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎರಡು ಎಫ್ಐಆರ್ ದಾಖಲಾಗಿದೆ. ಮೊದಲ ಪ್ರಕರಣವು 4 ವಂಚನೆಗಳಿಗೆ ಸಂಬಂಧಿಸಿದ್ದಾಗಿದ್ದು, ಎರಡನೇ ಪ್ರಕರಣ ಮೂರು ವಂಚನೆಗಳಿಗೆ ಸಂಬಂಧಿಸಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ನ 420 (ವಂಚನೆ ಮತ್ತು ಅಪ್ರಾಮಾಣಿಕತೆ), 465 (ನಕಲಿ), 468 (ವಂಚನೆಯ ಉದ್ದೇಶಕ್ಕಾಗಿ ನಕಲಿ), 471 (ನಕಲಿ ಎಂದು ಬಳಸಿ) ಮತ್ತು 408 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಈ ಆರೋಪಿಗಳು 2020 ಮಾರ್ಚ್ 9 ರಿಂದ 2023ರ ಜುಲೈ 27ವರೆಗಿನ ಅವಧಿಯಲ್ಲಿ ನಿಗಮಕ್ಕೆ ವಂಚನೆ ಮಾಡಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.
ಬಿಎಂಟಿಸಿಯ ಟೆಂಡರ್ಗಳ ನೀಡಿಕೆ, ಫ್ಲ್ಯಾಟ್ಗಳು ಮತ್ತು ವಾಣಿಜ್ಯ ಮಳಿಗೆಗಳ ಹಂಚಿಕೆ, ಟೆಂಡರ್ ಅವಧಿ ವಿಸ್ತರಣೆಗೆ ಸಂಬಂಧಪಟ್ಟ ಕಡತಗಳಿಗೆ ಬಿಎಂಟಿಸಿ ಎಂಡಿ, ನಿರ್ದೇಶಕರ ಹೆಸರಿನಲ್ಲಿ ನಕಲು ಸಹಿ ಮಾಡಿ ಸಂಸ್ಥೆಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ. ಇದರಿಂದ ಸಂಸ್ಥೆಗೆ ನಷ್ಟವಾಗಿದೆ ಎಂದು ದೂರಿನಲ್ಲಿ ಬಿಎಂಟಿಸಿ ಅಧಿಕಾರಿ ರಮ್ಯಾ ಉಲ್ಲೇಖಿಸಿದ್ದಾರೆ.

ಬಿಎಂಟಿಸಿ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕ ಸೂರ್ಯಸೇನ್, ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ರೇಜು, ಸಿ. ಶಿಖಾ, ಭದ್ರತಾ ಮತ್ತು ಜಾಗೃತಿ ವಿಭಾಗದ ನಿರ್ದೇಶಕ ಕೆ ಅರುಣ ಸಹಿ ನಕಲು ಮಾಡಿ, ಈ ಅಕ್ರಮ ಎಸಗಲಾಗಿದೆ ಎಂಬುದು ಇಲಾಖಾ ತನಿಖೆಯಿಂದ ತಿಳಿದು ಬಂದಿದೆ.
ಬಿಎಂಟಿಸಿಗೆ ಆರ್ಥಿಕ ನಷ್ಟ ಉಂಟಾಗಲು ಒಳಸಂಚು ರೂಪಿಸಿರುವ ಹಿನ್ನೆಲೆಯಲ್ಲಿ ವಾಣಿಜ್ಯ ವಿಭಾಗದ ಮುಖ್ಯ ಸಂಚಾರ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದ ಹಾಗೂ ಪ್ರಸ್ತುತ ಕ.ಕ.ರ.ಸಾ.ಸಂಸ್ಥೆಯ ಮಂಡಳಿ ಕಾರ್ಯದರ್ಶಿ ಶ್ರೀರಾಮ ಮುಲ್ಕಾವಾನ, ವಿಭಾಗೀಯ ಸಂಚಲನ ಅಧಿಕಾರಿ ಶ್ಯಾಮಲಾ ಎಸ್.ಮದ್ದೋಡಿ, ಸಹಾಯಕ ಸಂಚಾರ ವ್ಯವಸ್ಥಾಪಕಿ ಮಮತಾ ಬಿ.ಕೆ, ಸಹಾಯಕ ಸಂಚಾರ ಅಧೀಕ್ಷಕಿ ಅನಿತಾ ಟಿ, ಗೋಪಿ, ಸಂಚಾರ ನಿರೀಕ್ಷಕ ಸತೀಶ್, ಕಿರಿಯ ಸಹಾಯಕ ಪ್ರಕಾಶ್ ಕೊಪ್ಪಳ ವಿರುದ್ಧ ಪ್ರಕರಣ ದಾಖಲಾಗಿದೆ.
ದಾಖಲಾಗಿರುವ ಎರಡೂ ಎಫ್ಐಆರ್ನಲ್ಲಿ ವಾಣಿಜ್ಯ ವಿಭಾಗದ ಮುಖ್ಯ ಸಂಚಾರ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದ ಶ್ರೀರಾಮ ಮುಲ್ಕಾವಾನ ಎ1 ಆರೋಪಿಯಾಗಿದ್ದಾರೆ.

ಕಳೆದ ಮೂರು ವರ್ಷಗಳಿಂದ ನಿಗಮದ ಕೆಲ ಬಸ್ ನಿಲ್ದಾಣಗಳ ವಾಣಿಜ್ಯ ಸಂಕೀರ್ಣ, ಸ್ವಚ್ಛತಾ ನಿರ್ವಹಣಾ ಗುತ್ತಿಗೆ ಸೇರಿ ಪ್ರಮುಖ ನಾಲ್ಕು ಟೆಂಡರ್ಗಳಲ್ಲಿ ಅಧಿಕಾರಿಗಳು ಗುತ್ತಿಗೆದಾರರ ಜೊತೆ ಸೇರಿ ಅವ್ಯವಹಾರ ನಡೆಸಿದ್ದಾರೆ. ದಾಖಲೆಗಳಲ್ಲಿ ಬಿಎಂಟಿಸಿ ಅಧಿಕಾರಿಗಳ ಸಹಿ ನಕಲು ಮಾಡಿ ಬಿಎಂಟಿಸಿ ನಿಗಮಕ್ಕೆ ಒಟ್ಟು ₹76,57,481 ಲಕ್ಷ ವಂಚಿಸಿರುವುದಾಗಿ ರಮ್ಯಾ ಸಿ ಕೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಿಎಂಟಿಸಿ ಬಸ್ ನಿಲ್ದಾಣಗಳ ಆವರಣದಲ್ಲಿ ಜಾಹೀರಾತು ನೀಡಿಕೆ, ಬ್ಯಾಂಕ್ ಎಟಿಎಂ ಘಟಕಗಳ ಜಾಗದ ಪರವಾನಗಿ ಅವಧಿ ವಿಸ್ತರಣೆ, ಬಿಎಂಟಿಸಿಯ ಫ್ಲ್ಯಾಟ್ಗಳ ಹಂಚಿಕೆಗೆ ಸಂಬಂಧಪಟ್ಟ ಕಡತಗಳಿಗೆ ತಪ್ಪಿತಸ್ಥ ಅಧಿಕಾರಿಗಳು ಸಂಸ್ಥೆಯ ಹಾಲಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ, ಹಿಂದಿನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಭದ್ರತೆ ಮತ್ತು ಜಾಗೃತ ದಳದ ನಿರ್ದೇಶಕರ ಹೆಸರಿನಲ್ಲಿ ನಕಲಿ ಸಹಿ ಮಾಡಿ ವಂಚಿಸಿದ್ದಾರೆ. ಇದರಿಂದ ಸಂಸ್ಥೆಗೆ ಸಾಕಷ್ಟು ವಂಚನೆಯಾಗಿದೆ. ಅಧಿಕಾರಿಗಳ ಅಕ್ರಮವು ಈಗಾಗಲೇ ಇಲಾಖಾ ತನಿಖೆಯಲ್ಲಿ ದೃಢಪಟ್ಟಿದೆ ಎಂದು ರಮ್ಯಾ ಅವರು ದೂರಿನಲ್ಲಿ ತಿಳಿಸಿದ್ದಾರೆ.