ಕಲಬುರಗಿ ನಗರದ ಸರಾಫ್ ಬಜಾರ್ನ ಚಿನ್ನಾಭರಣ ಮಳಿಗೆಯೊಂದಕ್ಕೆ ನುಗ್ಗಿದ ನಾಲ್ವರು ಮುಸುಕುಧಾರಿಗಳು ಮಳಿಗೆಯ ಮಾಲೀಕನಿಗೆ ಗನ್ ತೋರಿಸಿ, ಕೈ ಕಾಲು ಕಟ್ಟಿ ಹಾಕಿ ಸುಮಾರು 3 ಕೆಜಿ ಚಿನ್ನಾಭರಣವನ್ನು ದರೋಡೆ ಮಾಡಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ನಗರದ ಸರಾಫ್ ಬಜಾರ್ನಲ್ಲಿನ ಮಾಲಿಕ್ ಜ್ಯುವೆಲ್ಲರ್ಸ್ ಎಂಬ ಚಿನ್ನದ ಮಳಿಗೆಯಲ್ಲಿ ಶುಕ್ರವಾರ ಮಧ್ಯಾಹ್ನ 11:50ರ ಸಉಮಾರಿಗೆ ಈ ದರೋಡೆ ನಡೆದಿದ್ದು, ಸಿನಿಮೀಯ ರೀತಿಯಲ್ಲಿ ಚಿನ್ನಾಭರಣ ದೋಚಿರುವ ಆರೋಪಿಗಳು ಪರಾರಿಯಾಗಿದ್ದಾರೆ.
“ಜನನಿಬಿಡ ಪ್ರದೇಶವಾಗಿರುವ ಸೂಪರ್ ಮಾರ್ಕೆಟ್ನಲ್ಲಿ ಈ ರೀತಿ ಹಾಡಹಗಲೇ ದರೋಡೆ ನಡೆದಿರುವುದು ಜನತೆಯನ್ನು ಬೆಚ್ಚಿ ಬೀಳಿಸಿದೆ. ದರೋಡೆಕೋರರ ಕೃತ್ಯ ಅಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಇದನ್ನು ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ” ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಚಿನ್ನಾಭರಣ ಮಳಿಗೆಯಿಂದ ಲೂಟಿ ನಡೆದಿರುವ ವಿಷಯ ಬಹಿರಂಗವಾಗುತ್ತಲೇ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್ ಡಿ, ಡಿಸಿಪಿ ಕನಿಕಾ ಸಿಕ್ರಿವಾಲ್, ಎಸಿಪಿ, ಪಿಐ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಚಿಂತಾಮಣಿ | ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಂದ ರಸ್ತೆತಡೆ ಪ್ರತಿಭಟನೆ
ಇತ್ತೀಚೆಗೆ ನಗರದ ಪೂಜಾರಿ ಚೌಕ್ ಸಮೀಪದಲ್ಲಿ ಎಟಿಎಂನಲ್ಲಿದ್ದ ಕೋಟ್ಯಂತರ ರೂಪಾಯಿಯನ್ನು ದರೋಡೆ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ಇದೀಗ ನಗರದಲ್ಲಿ ಮತ್ತೊಂದು ದರೋಡೆ ನಡೆದಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.