ಗಾಯಕರೇ ನಾಯಕರಾಗಿರುವ ನೆಲ ಕೋಲಾರ. ಹೋರಾಟ, ಬದುಕು, ಅಸಂಖ್ಯಾತರ ಒಲವೇ ಆದಿಮ. ಮೊದಲು ಆದಿಮವನ್ನು, ಈ ನೆಲದ ಸಂಸ್ಕೃತಿಯನ್ನು ಅರಿಯಬೇಕು. ರಾಜ್ಯದಲ್ಲಿ ಹಲವು ರಂಗಶಾಲೆಗಳಿದ್ದು, ಅವುಗಳಿಗಿಂತ ವಿಭಿನ್ನವಾಗಿ ಆದಿಮ ರಂಗಶಾಲೆ ಶಿಕ್ಷಣ ಕೆಲಸ ನಡೆಯುತ್ತಿರುವುದು ಖುಷಿಯ ವಿಚಾರ ಎಂದು ನಾಟಕಕಾರ ರಾಜಪ್ಪ ದಳವಾಯಿ ಅಭಿಪ್ರಾಯಪಟ್ಟರು.
ಕೋಲಾರ ತಾಲೂಕಿನ ತೇರಹಳ್ಳಿ ಬೆಟ್ಟದ ಶಿವಗಂಗೆಯಲ್ಲಿ ಆದಿಮ ಸಾಂಸ್ಕೃತಿಕ ಕೇಂದ್ರದ ಡ್ರಾಮಾ ಡಿಪ್ಲೊಮಾ ಆರಂಭದ ಪ್ರಯುಕ್ತ ಆದಿಮ ರಂಗ ಶಿಕ್ಷಣ ಕೇಂದ್ರದ ಬೋಧನಾ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, “ಕಲೆ ನಿಂತ ನೀರಲ್ಲ; ಸದಾ ಹರಿಯುತ್ತಿರುತ್ತದೆ, ಅತ್ಯಂತ ಸೃಜನಾತ್ಮಕವಾಗಿರುತ್ತದೆ. ಹಾಗೆ ಕ್ರಿಯಾಶೀಲರಾದಾಗ ಮಾತ್ರ ಯಾವುದೇ ಕಲಾವಿದ ಏನಾದರೂ ಸಾಧಿಸಲು ಸಾಧ್ಯ” ಎಂದು ಹೇಳಿದರು.
“ಬದುಕಿ ಸಾಯಬೇಕು, ಸಾಯುವುದಕ್ಕೆ ಬದುಕಬಾರದು. ಬದುಕು ಬಹಳ ವಿಸ್ತಾರವಾದದು” ಎಂದು ನುಡಿದರು.
ದಲಿತ ಮುಖಂಡ ಸಿ ಎಂ ಮುನಿಯಪ್ಪ ಮಾತನಾಡಿ, “ನಟನಾ ಕಲಿಕೆಯ ಡಿಪ್ಲೊಮಾ ಕೋರ್ಸ್ ಮಾಡಲು ಹಲವರು ಬಂದಿದ್ದಾರೆ. ಆದಿಮದಂತಹ ಪರಿಸರದಲ್ಲಿ ಕಲಿಕೆ ಆರಂಭಿಸುತ್ತಿದ್ದಾರೆ. ನಾಳೆ ಯಾರು ಏನಾಗುವಿರೋ ಹೇಳಲು ಸಾಧ್ಯವಿಲ್ಲ. ರಂಗಭೂಮಿಯಲ್ಲಿ ಯಶಸ್ವಿ ಕಾಣಬೇಕೆಂದರೆ ಮೊದಲು ವೇದಿಕೆ ಭಯ ಬಿಡಬೇಕು. ಶ್ರದ್ಧೆಯಿಂದ ಕಲಿತರೆ ಯಾವುದೇ ಪಾತ್ರ ಮಾಡಲು ಕಷ್ಟವಾಗುವುದಿಲ್ಲ” ಎಂದರು.
ಆದಿಮ ಕಾರ್ಯದರ್ಶಿ ಹ.ಮಾ.ರಾಮಚಂದ್ರ ಆಶಯ ನುಡಿಗಳನ್ನಾಡಿ ರಂಗವಿದ್ಯಾರ್ಥಿಗಳಿಗೆ ಕೆಲವು ಸಲಹೆ, ಸೂಚನೆ ನೀಡಿದರು. ಚಿಂದಿ ಹಾಯಿಸುವ ಹುಡುಗರ ಕಾರ್ಯವೈಖರಿ ಉದಾಹರಣೆಯಾಗಿ ಕೊಟ್ಟದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ಬೆಟ್ಟಹೊಸಪುರ ಅಂಗನವಾಡಿಗೆ ಶಾಸಕ ಕೊತ್ತೂರು ಮಂಜುನಾಥ್ ಭೇಟಿ
ಆದಿಮ ಅಧ್ಯಕ್ಷ ಎನ್ ಮುನಿಸ್ವಾಮಿ, “ಎಲ್ಲರ ಮಾತುಗಳಂತೆ ತಮ್ಮ ಕಲಿಕೆ ಕ್ರಮಬದ್ಧವಾಗಿ, ಕ್ರಿಯಾಶೀಲವಾಗಿ ಸಾಗಲಿ. ಜಗತ್ತಿನಲ್ಲಿ ಕಲೆ ಮತ್ತು ಪ್ರೀತಿ ಒಂದಾಗಬೇಕಿದೆ. 84 ಕೋಟಿ ಜೀವರಾಶಿಗಳಲ್ಲಿ ಮನುಷ್ಯನಿಗೆ ಮಾತ್ರ ದುಃಖ, ನೋವು, ಸಂಕಟ ಇದೆ. ಅದಕ್ಕಾಗಿ ಕಲೆ ಮತ್ತು ಪ್ರೀತಿ ಒಂದಾಗಬೇಕಿದೆ” ಎಂದರು.
ನೀಲಕಂಠೇಗೌಡ, ಪ್ರಾಂಶುಪಾಲ ಜಗದೀಶ್ ಆರ್ ಜಾಣಿ, ಎನ್ಎಸ್ಡಿ ಬಿ ಎಂ ಶ್ರೀನಿವಾಸ್, ಡಿ ಆರ್ ರಾಜಪ್ಪ, ಅಗ್ರಹಾರ ರಮೇಶ್, ಗ ನಾ ಅಶ್ವತ್, ಶ್ರೀನಿವಾಸ್ ತುರಂಡಹಳ್ಳಿ ಇದ್ದರು.