ಶಿವಮೊಗ್ಗ ಜಿಲ್ಲಾ ಈಡಿಗರ ಸಂಘ ಮತ್ತು ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಿ ಭಕ್ತ ಮಂಡಳಿ ವತಿಯಿಂದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ರವರಿಗೆ ಮನವಿ ಸಲ್ಲಿಸಿದರು.
ಉಸ್ತುವಾರಿ ಸಚಿವರ ಹೇಳಿಕೆಯನ್ನು ತಿರುಚಿ, ಜನರಲ್ಲಿ ಧಾರ್ಮಿಕ ಭಾವನೆ ಕೆರಳಿಸಿ, ಸಮಾಜದಲ್ಲಿ ಅಶಾಂತಿ ಮೂಡಿಸಿ, ಶಾಂತಿಭಂಗ ಮಾಡಲು ಹೊರಟವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.

21ರಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯ ಭೇಟಿಯ ನೀಡಿದ್ದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿರುವಾಗ, ಮಾಧ್ಯಮ ಪ್ರತಿನಿಧಿಗಳು ಸಿಗಂಧೂರು ಸೇತುವೆ ವಿಷಯವಾಗಿ ಕೇಳಿರುವ ಪ್ರಶ್ನೆಗೆ ಪ್ರತಿಕ್ರಿಸುವಾಗ, ಸಿಗಂಧೂರು ದೇವಸ್ಥಾನವನ್ನು ಯಾರು ಹಾಳು ಮಾಡಲು ಪ್ರಯತ್ನಿಸಿದರು ಎಂಬುದನ್ನು ಒಂದು ತಿಂಗಳಲ್ಲಿ ಹೇಳುತ್ತೇನೆ ಎಂದು ಮಾದ್ಯಮದವರ ಮುಂದೆ ನೀಡಿದ ಹೇಳಿಕೆಯನ್ನು ಬಿಜೆಪಿಯ ಸೋಶಿಯಲ್ ಮೀಡಿಯಾ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ಅರ್ದಕ್ಕೆ ಕತ್ತರಿಸಿ, “ಸಿಗಂದೂರು ದೇವಸ್ಥಾನವನ್ನು ಹೇಗೆ ಹಾಳು ಮಾಡಬೇಕೆಂದು ಒಂದು ತಿಂಗಳೊಳಗೆ ನಿಮಗೆ ಡಿಟೈಲ್ ಹೇಳುವೆ ” ಎಂಬ 19 ಸೆಕೆಂಡ್ ವಿಡಿಯೋವನ್ನು ಮಾಡಿ ಅದರ ಕೆಳಗಡೆ ಅಜ್ಞಾನಿ ವಿದ್ಯಾ ಮಂತ್ರಿಗಳೇ ಸಿಗಂದೂರು ಚೌಡೇಶ್ವರಿ ಮಾತೆಯಮಂದಿರ ಹಾಳು ಮಾಡ್ತೀವಿ ಎಂದ ನಾಲಿಗೆಗೆ ತಾಯಿ ಬರೆ ಹಾಕುವುದು ನಿಶ್ಚಿತ, ಎಂದು ದೇವರ ಚಿತ್ರದೊಂದಿಗೆ ಬರೆದ ವಿಡಿಯೋ ವೈರಲ್ ಮಾಡಿದ್ದಾರೆ.
ಈ ರೀತಿ ಹೇಳಿಕೆಯನ್ನು ತಿರುಚಿರುವುರೊಂದಿಗೆ ಜನರಲ್ಲಿ ಧಾರ್ಮಿಕ ಭಾವನೆಯನ್ನು ಕೆರಳಿಸಿ ಮಂತ್ರಿಗಳ ಬಗ್ಗೆ ದ್ವೇಷ ಭಾವನೆ ಮೂಡುವಂತೆ ಪ್ರಚೋದಿಸಿ. ಜನರನ್ನು ಉದ್ರೆಕಗೊಳಿಸಿ ಸಮಾಜದಲ್ಲಿ ಅಶಾಂತಿ ಮೂಡಿಸಿ ಸಂಘರ್ಷ ಏರ್ಪಡಿಸುವ ಉದ್ದೇಶ ಹೊಂದಿರುವ ಬಿಜೆಪಿ ಕಾರ್ಯಕರ್ತರು ಸೋಶಿಯಲ್ ಮೀಡಿಯಾದ ಈ ವಿಡಿಯೋವನ್ನು ವೈರಲ್ ಮಾಡಿದ್ದು, ಮಂತ್ರಿಗಳನ್ನು ಗೌರವಿಸುತ್ತಿದ್ದ ಸಮಾಜದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರಿಂದ ಧಾರ್ಮಿಕ ಭಾವನೆಗೆ ದಕ್ಕೆ ತರುವ ಹೇಳಿಕೆ ನೀಡಿದ್ದಾರೆ ಎಂದು ಜನ ತಪ್ಪು ಭಾವನೆ ಮೂಡುವಂತೆ ಸಾರ್ವಜನಿಕರನ್ನು ಉದ್ರಿಕಿಸುವಂತೆ ಪ್ರಚೋದಿಸುತ್ತಿದ್ದಾರೆ.
ಈ ಹಿಂದಿನ ಸರ್ಕಾರವು ಸಿಗಂಧೂರು ದೇವಸ್ಥಾನವನ್ನು ಮುಜರಾಯಿಗೆ ಸೇರಿಸಲು ಹುನ್ನಾರ ನೆಡೆಸಿದ್ದನ್ನು ಹಾಗೂ ಆಡಳಿತ ಮಂಡಳಿಗೆ ನೀಡಿದ್ದ ಕಿರುಕುಳ, ದೇವಸ್ಥಾನದ ಅಭಿವೃದ್ಧಿಗೆ ಅಡ್ಡಿಪಡಿಸಿರುವುದನ್ನು ಖಂಡಿಸಿ “ಶ್ರೀ ಸಿಗಂಧೂರು ಕ್ಷೇತ್ರ ಹೋರಾಟ ಸಮಿತಿ ರಚಿಸಿ” ಮಧು ಬಂಗಾಪ್ಪನವರು ಹಿಂದಿನ ಸರ್ಕಾರಕ್ಕೆ ಎಚ್ಚರಿಕೆಯನ್ನು, ನೀಡಿ ಸಿಗಂಧೂರು ದೇವಸ್ಥಾನ ಬಹುಸಂಖ್ಯಾತ ಈಡಿಗ ಸಮಾಜದ ಅಸ್ಮಿತೆ, ಪವಿತ್ರ ಧಾರ್ಮಿಕ ಕ್ಷೇತ್ರವಾಗಿದ್ದು ಸರ್ಕಾರ ಮುಜರಾಯಿಗೆ ಸೇರಿಸುವ ಹುನ್ನಾರ ಕೈಬಿಡದಿದ್ದರೆ ಜೇನು ಗೂಡಿಗೆ ಕೈ ಹಾಕಿದಂತೆ ಎಂದು ಎಚ್ಚರಿಸಿ ಹೋರಾಟದ ಎಚ್ಚರಿಕೆಯನ್ನು ನೀಡಿದ್ದರು.

ಅಂದಿನಿಂದ ಪ್ರತಿಹಂತದಲ್ಲು ಶ್ರೀ ಕ್ಷೇತ್ರದ ವಿಷಯವಾಗಿ ಸಲ್ಲದ ಸುಳ್ಳುಸುದ್ದಿ ಹರಡುವ ಕುತಂತ್ರ ರಾಜಕಾರಣ ಮಾಡುತ್ತಿದ್ದು, ಈ ನಕಲಿ ವೀಡಿಯೊ ಸೃಷ್ಠಿ ಇದರ ಭಾಗವಾಗಿದೆ.ಈ ರೀತಿಯ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಮೂಡಿ ಶಾಂತಿಭಂಗವಾಗುವ ಸಾದ್ಯತೆಗಳಿರುವುದರಿಂದ, ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪನವರ ಹೇಳಿಕೆಯನ್ನು ತಿರುಚಿರುವವರ ಮೇಲೆ ಮೊಕದ್ದಮೆ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ಕೋರುತ್ತೇವೆ ಎಂದರು.