ಪ್ರತಿಪಕ್ಷಗಳ ಒಕ್ಕೂಟ ‘ಇಂಡಿಯಾ’ದ ಮೂರನೇ ಸಭೆಯು ಮುಂಬೈನಲ್ಲಿ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ನಡೆಯಲಿದೆ ಎಂದು ಕಾಂಗ್ರೆಸ್ ಮತ್ತು ಶಿವಸೇನಾ ಉದ್ಧವ್ ಠಾಕ್ರೆ ಬಣ ತಿಳಿಸಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸದ ಸ್ಥಾನವನ್ನು ಮರುಸ್ಥಾಪಿಸಲು ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ ಒಂದು ದಿನದ ನಂತರ ಮೂರನೇ ಸಭೆಯ ದಿನಾಂಕ ಘೋಷಿಸಲಾಗಿದೆ. ಈ ಹಿನ್ನೆಲೆ ಸಭೆಯು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ ಎಂದು ವಿಪಕ್ಷಗಳ ನಾಯಕರು ತಿಳಿಸಿದ್ದಾರೆ.
ಮುಂಬೈನಲ್ಲಿ ನಡೆದ ಮಹಾ ವಿಕಾಸ್ ಅಘಾಡಿ ಸಭೆಯ ನಂತರ ಮಾತನಾಡಿದ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್, “ಗ್ರ್ಯಾಂಡ್ ಹಯಾತ್ನಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಸಭೆಯಲ್ಲಿ ಕನಿಷ್ಠ ಐವರು ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ರಾಹುಲ್ ಗಾಂಧಿ ಕೂಡ ಉಪಸ್ಥಿತರಿರುತ್ತಾರೆ. ಸಭೆಯು ಆಗಸ್ಟ್ 31 ರಂದು ಪ್ರಾರಂಭವಾಗಲಿದ್ದು,ಉದ್ಧವ್ ಠಾಕ್ರೆ ಆಯೋಜಿಸುತ್ತಾರೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಿಂದಿ ರಾಷ್ಟ್ರ ಭಾಷೆ: ಪ್ರಕರಣವೊಂದರಲ್ಲಿ ಹಿಂದಿಯಲ್ಲಿ ಸಾಕ್ಷ್ಯ ನುಡಿಯಲು ಹೇಳಿದ ಸುಪ್ರೀಂ ನ್ಯಾಯಾಧೀಶರು
ಸಭೆಯಲ್ಲಿ ಹಲವು ಪ್ರಮುಖ ಪ್ರಸ್ತಾವನೆಗಳನ್ನು ಪರಿಗಣಿಸಲಾಗುವುದು ಎಂದು ಕಾಂಗ್ರೆಸ್ ಮಹಾರಾಷ್ಟ್ರ ಮುಖ್ಯಸ್ಥ ನಾನಾ ಪಟೋಲೆ ತಿಳಿಸಿದ್ದಾರೆ. ಜೂನ್ 23 ರಂದು ಪಾಟ್ನಾದಲ್ಲಿ 16 ವಿರೋಧ ಪಕ್ಷಗಳ ಮೊದಲ ಸಭೆ ನಡೆಯಿತು. ಅದರ ನಂತರ ಜುಲೈ 17-18 ರಂದು ಬೆಂಗಳೂರಿನಲ್ಲಿ 26 ಪಕ್ಷಗಳ ಸಭೆ ನಡೆಯಿತು. ಇಲ್ಲಿ ಒಕ್ಕೂಟಕ್ಕೆ ‘ಇಂಡಿಯಾ’ ಎಂಬ ಹೆಸರು ನೀಡಲಾಯಿತು.
ಬೆಂಗಳೂರು ಸಭೆಯ ನಂತರ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೈತ್ರಿಗಾಗಿ 11 ಸದಸ್ಯರ ಸಮನ್ವಯ ಸಮಿತಿ ರಚನೆ ಹಾಗೂ ಸಂಚಾಲಕರನ್ನು ಹೆಸರಿಸಲಾಗುವುದು ಎಂದು ಹೇಳಿದ್ದರು.