ಬೀದರ್ ತಾಲೂಕಿನ ಕಾಡವಾದ ಗ್ರಾಮದ ಅಂಗನವಾಡಿ ಕೇಂದ್ರ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಯಾವಾಗ ಕುಸಿದು ಬೀಳುತ್ತದೋ ಎಂಬ ಆತಂಕ ಪೋಷಕರಲ್ಲಿ ಮೂಡಿದೆ.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾಡವಾದ ಗ್ರಾಮ ಪಂಚಾಯಿತಿ ಕೇಂದ್ರವಾಗಿದೆ. ಆದರೂ ಇಲ್ಲಿನ ಅಂಗನವಾಡಿ ಕೇಂದ್ರಕ್ಕೆ ಮೂಲ ಸೌಕರ್ಯ ಒದಗಿಸಲು ಗ್ರಾಮ ಪಂಚಾಯಿತಿ ಆಡಳಿತ ಸಂಪೂರ್ಣ ವಿಫಲವಾಗಿದೆ.
“ಸುಮಾರು 25 ವರ್ಷದ ಹಳೆ ಕಟ್ಟಡದಲ್ಲಿ ಕಳೆದ 12 ವರ್ಷಗಳಿಂದ ಅಂಗನವಾಡಿ ನಡೆಯುತ್ತಿದೆ. ಕಟ್ಟಡದ ಮೇಲ್ಛಾವಣಿ ಹಾಗೂ ಗೋಡೆ ಅಲ್ಲಲ್ಲಿ ಬಿರುಕು ಬಿಟ್ಟು ಸೋರುತ್ತಿದೆ. ಕಿಟಕಿ, ಬಾಗಿಲು ಕಿತ್ತು ಬಂದಿವೆ. ಛಾವಣಿ ಹಿಂಬದಿ ಕಿಟಕಿಗಳ ವ್ಯವಸ್ಥೆ ಇಲ್ಲದೆ ಮಳೆ ನೀರು ಒಳಗೆ ನುಗ್ಗಿ ಧಾನ್ಯಗಳು ತೋಯ್ದು ಹೋದ ಘಟನೆ ಜರುಗಿದೆ. ಒಂದೆರಡು ಬಾರಿ ಅಡುಗೆ ಕೋಣೆಗೆ ಹಾವು ಬಂದಿತ್ತು. ಇದರಿಂದ ನಮಗೂ ಸೇರಿದಂತೆ ಮಕ್ಕಳು, ಪೋಷಕರಿಗೆ ಆತಂಕ ಎದುರಾಗಿದೆ” ಎಂದು ಅಂಗನವಾಡಿ ಸಿಬ್ಬಂದಿ ಈ ದಿನ.ಕಾಮ್ಗೆ ತಿಳಿಸಿದರು.
ಅಪಾಯಕ್ಕೆ ಆಹ್ವಾನಿಸುತ್ತಿರುವ ಶೌಚಾಲಯ ಗುಂಡಿ
ಶೌಚಾಲಯಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶಾಲೆ-ಕಾಲೇಜು, ಅಂಗನವಾಡಿ ಕೇಂದ್ರಗಳಿಗೆ ಕೋಟ್ಯಂತರ ರೂ. ವೆಚ್ಚ ಮಾಡುತ್ತವೆ. ಆದರೆ ಈ ಅಂಗನವಾಡಿ ಕೇಂದ್ರದಲ್ಲಿ ಓದುವ 19 ಮಕ್ಕಳಿಗೆ ಬಯಲು ಶೌಚಾಲಯವೇ ಗತಿ ಎಂಬಂತಾಗಿದೆ. ಶೌಚಾಲಯ ನಿರ್ಮಾಣಕ್ಕಾಗಿ ಗುಂಡಿ ತೋಡಿದ ಪಂಚಾಯತ್ ಸದಸ್ಯರೊಬ್ಬರು ಎರಡು ವರ್ಷಗಳಾದರೂ ಶೌಚಾಲಯ ಕಾಮಗಾರಿ ಮುಗಿಸಲಿಲ್ಲ. ತೆರೆದ ಗುಂಡಿ ಹಾಗೇ ಉಳಿದ ಪರಿಣಾಮ ವಿದ್ಯಾರ್ಥಿಗಳು ಆತಂಕದಲ್ಲಿ ಕಲಿಯಬೇಕಾಗಿದೆ.

ಅಂಗನವಾಡಿ ಕೋಣೆ ಮುಂಭಾಗದಲ್ಲಿ ಇರುವ ಸುಮಾರು 5 ಅಡಿ ಆಳದ ಗುಂಡಿಯಲ್ಲಿ ಪುಟ್ಟ ಕಂದಮ್ಮಗಳು ಬೀಳುವ ಸಾಧ್ಯತೆ ಇದೆ. ಈ ಭಯದಿಂದ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಬರೀ 8ರಿಂದ 10 ಮಕ್ಕಳು ಬರುತ್ತಿದ್ದಾರೆ. ಪಂಚಾಯಿತಿ ಪಿಡಿಒ ಹಾಗೂ ಸದಸ್ಯರ ನಿರ್ಲಕ್ಷ್ಯ ಧೋರಣೆಯಿಂದ ಅಂಗನವಾಡಿ ಮಕ್ಕಳು ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ ಎಂಬುದಕ್ಕೆ ಇದು ತಾಜಾ ಉದಾಹರಣೆ.
ಸ್ವಂತ ಖರ್ಚಿನಿಂದ ಅಂಗನವಾಡಿ ರಿಪೇರಿ
ಅಂಗನವಾಡಿ ಕಾರ್ಯಕರ್ತೆ ಸ್ನೇಹಲತಾ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಮಳೆ ನೀರು ಸಂಗ್ರಹವಾಗಿ ಅಂಗನವಾಡಿ ಕೇಂದ್ರದಲ್ಲಿನ ದವಸ ಧಾನ್ಯ ಹಾಳಾಗುತ್ತಿದ್ದು, ರಿಪೇರಿ ಮಾಡಿಸುವಂತೆ ಕೇಳಿದರೆ ಸ್ಪಂದಿಸದ ಸದಸ್ಯರ ನಿರ್ಲಕ್ಷ್ಯಕ್ಕೆ ಬೇಸತ್ತು ತಮ್ಮ ಸ್ವಂತ ಖರ್ಚಿನಿಂದ ಅಂಗನವಾಡಿ ಅಡುಗೆ ಕೋಣೆ ರಿಪೇರಿ ಮಾಡಿಸಿಕೊಂಡಿದ್ದೇವೆ. ಹಲವು ಬಾರಿ ಶೌಚಾಲಯ ಗುಂಡಿ ಮುಚ್ಚುವಂತೆ ವಿನಂತಿಸಿದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಆರೋಪಿಸಿದರು.

“ಏನೂ ಅರಿಯದ ಪುಟ್ಟ ಕಂದಮ್ಮಗಳು ಆಟ ಆಡಲು ಅಥವಾ ಶೌಚಕ್ಕೆ ಹೊರಗಡೆ ಬಂದು ಆಯತಪ್ಪಿದರೆ ಸಾಕು ಶೌಚಾಲಯದ ಗುಂಡಿಯೊಳಗೆ ಬೀಳುವ ದೊಡ್ಡ ಅಪಾಯವಿದೆ. ಇನ್ನು ಮಳೆಯಾದರೆ ಗುಂಡಿ ತುಂಬುತ್ತದೆ. ಕೂಡಲೇ ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಸಿಡಿಪಿಒ ಅಧಿಕಾರಿಗಳು ಎಚ್ಚೆತ್ತುಕೊಂಡು ಅವ್ಯವಸ್ಥೆ ಸರಿಪಡಿಸಬೇಕು. ಇಲ್ಲವಾದಲ್ಲಿ ಮುಂದಿನ ಅನಾಹುತಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆ ಆಗಬೇಕಾಗುತ್ತದೆ” ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾತನಾಡಿ, “ಕೆಲ ವರ್ಷಗಳ ಹಿಂದೆ ನಿರ್ಮಿಸಿದ ಅಂಗನವಾಡಿ ಕಟ್ಟಡ ಚೆನ್ನಾಗಿಯೇ ಇದೆ” ಎಂದು ಹೇಳಿದ್ದಾರೆ.