ಕೈಮಗ್ಗದ ನೇಕಾರಿಕೆಯಲ್ಲಿ ಸಿಹಿ-ಕಹಿ ಅನುಭವ ಅನುಭವಿಸಿದಂತಹ ನೇಕಾರರು ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಸಂಭ್ರಮಿಸುವ ಸ್ಥಿತಿಯಲ್ಲಿ ಇಲ್ಲ. ಈ ಕುರಿತು ಆತ್ಮಾವಲೋಕನ ಮಾಡುವದು ಅಗತ್ಯವಾಗಿದೆ ಎಂದು ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.
ಗದಗದಲ್ಲಿ ಸೋಮವಾರ ನಡೆದ 9ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಒಂದು ಕಾಲದಲ್ಲಿ ಕೈಮಗ್ಗ ನೇಕಾರಿಕೆ ಉತ್ತುಂಗದಲ್ಲಿತ್ತು. ಆ ಸಂದರ್ಭದಲ್ಲಿ ನೇಕಾರಿಕೆ ವೃತ್ತಿ ಒಕ್ಕುಲುತನ ನಂತರ ಹೆಚ್ಚಿನ ಉದ್ಯೋಗವಕಾಶ ನೀಡಿತ್ತು. ಆದರೆ, ದುರದೃಷ್ಟಕರದ ಸಂಗತಿ ಎಂದರೆ ಆಧುನಿಕ ದಿನಮಾನಗಳಲ್ಲಿ ತಾಂತ್ರಿಕತೆ ಬೆಳೆದಂತೆ ಕೈಮಗ್ಗ ನೇಕಾರಿಕೆ ಅಳುವಿನಂಚಿಗೆ ಸರಿದಿದೆ. ಕೈಮಗ್ಗ ನೇಕಾರಿಕೆ ವೃತ್ತಿಯನ್ನು ಅವಲಂಭಿಸಿದಂತಹ ನೇಕಾರರು ಬಡತನದಲ್ಲಿ ತಮ್ಮ ಜೀವನ ಸಾಗಿಸುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
“ಕೈಮಗ್ಗದಲ್ಲಿ ನೈಪುಣ್ಯತೆ ಹೊಂದಿರುವ ಬೆರಳಣಿಕೆಯಷ್ಟು ಜನ ಇಂದಿಗೂ ಅದನ್ನೇ ಅವಲಂಭಿಸಿದ್ದಾರೆ. ವೃತ್ತಿ ನೈಪುಣ್ಯತೆಯೊಂದಿಗೆ ಆಧುನಿಕ, ತಾಂತ್ರಿಕ ಯಂತ್ರೋಪಕರಣಗಳ ಬಳಕೆ ಮಾಡುವುದರ ಮೂಲಕ ವೃತ್ತಿಯಲ್ಲಿ ನಿರಂತರವಾಗಿ ಮುಂದೆ ಸಾಗಬೇಕಿದೆ. ರಾಜ್ಯದಲ್ಲಿ ಅಂದಾಜು 24 ಸಾವಿರದಷ್ಟು ಇದ್ದಂತಹ ಕೈಮಗ್ಗಗಳ ಸಂಖ್ಯೆ ಇಂದು ಕೇವಲ 2,000ಕ್ಕೆ ಕುಸಿದಿದೆ” ಎಂದರು.
“ನೇಕಾರರ ಶ್ರೇಯೋಭಿವೃದ್ಧಿಗಾಗಿ ಜಾರಿಗೆ ತರಲಾದ ಅನೇಕ ಯೋಜನೆಗಳು ಯಶಸ್ವಿಯಾಗುತ್ತಿಲ್ಲ. ಕೈಮಗ್ಗ ನೇಕಾರರ ಧ್ವನಿಯಾಗಿ ಹೋರಾಟ ಮಾಡುವವರಿಗೆ ಧ್ವನಿ ಕೊಡುವುದಿಲ್ಲ. ಅವರ ಶ್ರೇಯೋಭಿವೃದ್ಧಿಗಾಗಿ ಏನೇ ಯೋಜನೆಗಳನ್ನು ಜಾರಿಗೆ ತಂದರು ಅವರ ಆರ್ಥಿಕ ಸ್ಥಿತಿ ಸುಧಾರಿಸಲು ಸಾಧ್ಯವಾಗುತ್ತಿಲ್ಲ. ಆದಾಗ್ಯೂ ಕೂಡ ಇಂತಹ ಪರಿಸ್ಥಿತಿಯಲ್ಲಿಯೂ ನೇಕಾರಿಕೆ ಮುಂದುವರೆಸುತ್ತಿರುವುದು ಸಂತಸದ ಸಂಗತಿ” ಎಂದರು.
“ಬೆಟಗೇರಿಯಲ್ಲಿನ ಕೆಎಚ್ಟಿಐನಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳಿಂದ ಅಧ್ಯಯನ ಜೊತೆಗೆ ಉದ್ಯೋಗಾವಕಾಶಗಳ ಸೃಷ್ಟಿಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುವ ಕಾರ್ಯವಾಗಬೇಕು. ಇಂದು ಸೀರೆ ತೊಡುವವರ ಸಂಖ್ಯೆ ಕಡಿಮೆಯಾದರೂ ಕೂಡಾ ಕೈಮಗ್ಗದಿಂದ ಸೀರೆಯ ಜೊತೆಗೆ ಕಿಟಕಿ ಪರದೆ ಹಾಗೂ ಬೆಡಶೀಟ್ಗಳಿಗೆ ತುಂಬಾ ಬೇಡಿಕೆ ಇದೆ. ಈ ಕುರಿತು ಚಿಂತನೆ ನಡೆಸಬೇಕು” ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ ಸದಸ್ಯ ಎಸ್.ವಿ ಸಂಕನೂರ, ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್ ಇದ್ದರು. ಕೈಮಗ್ಗ ನೇಕಾರರಾದ ತಿಪ್ಪಣ್ಣ ಕೊಂಗತಿ, ಲಕ್ಷ್ಮಣ ಗುರುಲಿಂಗಪ್ಪ ಕಾಳೂರ, ಶರಣಪ್ಪ ಹುಣಚೇರಿ, ಈರಪ್ಪ ಸಂಕನೂರ, ಧರ್ಮಣ್ಣಾ ಬುಳ್ಳಾ, ಮಲ್ಲಪ್ಪ ಚಾವಡಿ, ದೇವೆಂದ್ರಪ್ಪ ಹೊಟ್ಟಿ, ವೆಂಕಟೇಶ ತಟ್ಟೆ ಅವರನ್ನು ಸನ್ಮಾನಿಸಿದರು.