- ‘ಕುತಂತ್ರದ ಹಿಂದೆ ಯಾರಿದ್ದಾರೆ ಎಂಬುದು ಜನರಿಗೂ ಗೊತ್ತು’
- ‘ಸತ್ಯಕ್ಕೆ ದೂರವಾದ ಯಾವ ಕುತಂತ್ರಗಳು ಫಲ ನೀಡುವುದಿಲ್ಲ’
ಹೇಗಾದರೂ ಮಾಡಿ ನನ್ನನ್ನು ರಾಜಕೀಯವಾಗಿ ತುಳಿಯುವ ಉದ್ದೇಶದಿಂದ ವ್ಯವಸ್ಥಿತವಾಗಿ ಷಡ್ಯಂತ್ರ ಮತ್ತು ಪಿತೂರಿ ನಡೆಯುತ್ತಿದೆ. ನನ್ನನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಕುತಂತ್ರದ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆ ಹೆಸರು ಹೇಳುವ ಅವಶ್ಯಕತೆಯಿಲ್ಲ ಎಂದು ಕೃಷಿ ಸಚಿವ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ತಮ್ಮ ಮೇಲಿನ ಆರೋಪದ ಬಗ್ಗೆ ಮಂಗಳವಾರ ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿರುವ ಅವರು, “ನನ್ನ ವಿರುದ್ಧ ವಿರೋಧಿಗಳು ನಡೆಸುತ್ತಿರುವ ಷಡ್ಯಂತ್ರಗಳು ಫಲ ನೀಡುವುದಿಲ್ಲ. ಜನರು ರಾಜಕೀಯವಾಗಿ ಪ್ರಬುದ್ಧರಿದ್ದು ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವುದು ಯಾರೆಂದು ಅವರೇ ನಿರ್ಧರಿಸುತ್ತಾರೆ” ಎಂದಿದ್ದಾರೆ.
“ಸರ್ಕಾರ ಬದಲಾವಣೆ ಆದಾಗ ಸರ್ಕಾರಿ ನೌಕರರ ವರ್ಗಾವಣೆ ಒಂದು ಸಾಮಾನ್ಯ ಪ್ರಕ್ರಿಯೆ. ಇದು ಎಲ್ಲ ಹೊಸ ಸರ್ಕಾರಗಳು ಬಂದಾಗಲೂ ಸಹಜವಾಗಿ ನಡೆದಿವೆ. ಆದರೆ ನಾನು ಮೊದಲಿನಿಂದಲೂ ಈ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಗಮನ ಕೊಟ್ಟಿಲ್ಲ. ನನ್ನ ಬಗ್ಗೆ ಬಹಳ ದ್ವೇಷ ಹೊಂದಿರುವ ಜನ ಹೇಗಾದರೂ ಸರಿ ನನ್ನ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರುವ ಪ್ರಯತ್ನದ ಭಾಗವಾಗಿ ನಕಲಿ ಪತ್ರಗಳನ್ನು ಸೃಷ್ಟಿಸಿ ಸದರಿ ನಕಲಿ ಪತ್ರಗಳ ಆಧಾರದ ಮೇಲೆ ನೌಕರರನ್ನು ನೆಪವಾಗಿಸಿ ಷಡ್ಯಂತ್ರ ರೂಪಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಕಟ್ಟುನಿಟ್ಟಿನ ಕಾನೂನು ಕ್ರಮ
“ಈ ಷಡ್ಯಂತ್ರದ ಹಿಂದಿರುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಲಿದೆ. ಈಗಾಗಲೇ ರಾಜ್ಯದ ಜನತೆಗೆ ನನ್ನ ವಿರುದ್ಧ ಯಾರೆಲ್ಲ ಏನೇನು ರಾಜಕೀಯ ಮಸಲತ್ತು ನಡೆಸಿದ್ದಾರೆಂದು ತಿಳಿದಿದೆ. ಇದು ಸಹ ಅಂತಹುದೇ ಮುಂದುವರಿದ ಭಾಗ ಅಷ್ಟೇ. ನೇರವಾಗಿ ನನ್ನನ್ನು ಎದುರಿಸಲಾಗದೆ ನನ್ನ ವಿರುದ್ಧ ಈ ರೀತಿಯ ಕ್ಷುಲ್ಲಕ ರಾಜಕೀಯ ಮಾಡಲಾಗುತ್ತಿದೆ” ಎಂದು ಹರಿಹಾಯ್ದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಲಂಚ ಆರೋಪ; ತನಿಖೆಗೆ ಸಚಿವ ಚಲುವರಾಯಸ್ವಾಮಿ ಒತ್ತಾಯ
“ಕೃಷಿ ಖಾತೆಯ ಸಚಿವನಾಗಿ ರಾಜ್ಯದಲ್ಲಿ ಮಾಡಬಹುದಾದ ಬಹಳಷ್ಟು ಕೆಲಸವಿದ್ದು, ಆ ಬಗ್ಗೆ ನನಗೆ ನನ್ನದೇ ಆದ ಕನಸುಗಳಿವೆ. ನನ್ನ ಖಾತೆಯ ಇತಿ ಮಿತಿಯೊಳಗೆ ನಾನು ರೈತರಿಗೆ ನೆರವಾಗಬಹುದಾದ ಅನೇಕ ಕಾರ್ಯಕ್ರಮಗಳನ್ನು ಮಾಡಲು ಯೋಜಿಸಲಾಗಿದೆ. ಇಂತಹ ಸಂದರ್ಭದಲ್ಲಿ ನನಗೆ ಮತ್ತಷ್ಟು ಹೆಸರು ಬರುವುದೆಂಬ ಭಯ ಮತ್ತು ಹತಾಶೆಯಿಂದ ಕೆಲವರು ಈ ಷಡ್ಯಂತ್ರದ ರಾಜಕಾರಣ ನಡೆಸುತ್ತಿದ್ದಾರೆ. ಸತ್ಯಕ್ಕೆ ದೂರವಾಗಿರುವ ಅವರ ಈ ಯಾವ ಕುತಂತ್ರಗಳು ಫಲ ನೀಡುವುದಿಲ್ಲ” ಎಂದು ಹೇಳಿದ್ದಾರೆ.
ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಕೃಷಿಯನ್ನೇ ನಂಬಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶೇ.70 ರಷ್ಟು ಜನರು ಜೀವನ ನಡೆಸುತ್ತಿದ್ದಾರೆ. ಇಂತಹ ಮಹತ್ವದ ಕ್ಷೇತ್ರದಲ್ಲಿ ಒಂದಷ್ಟು ಸೇವೆ ಮಾಡುವ ಅವಕಾಶ ನನಗೆ ರಾಜಕೀಯವಾಗಿ ದೊರೆತಿದೆ. ನಾನೂ ಸಹ ಕೃಷಿಕ ಕುಟುಂಬದಿಂದಲೇ ಬಂದವನಾಗಿದ್ದು, ನನಗೆ ಲಭಿಸಿರುವ ಉತ್ತಮ ಅವಕಾಶ ಬಳಸಿಕೊಂಡು ಕರ್ನಾಟಕದ ರೈತರಿಗೆ ಕೃಷಿ ಮಂತ್ರಿಯಾಗಿ ಏನೆಲ್ಲಾ ಸೇವೆ ಮಾಡಲು ಸಾಧ್ಯವಿದೆಯೋ ಆ ಎಲ್ಲ ಸೇವೆ ಸಲ್ಲಿಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವೆ” ಎಂದು ತಿಳಿಸಿದ್ದಾರೆ.