ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ “ಸಂಚಾರಯುಕ್ತ ಬೆಂಗಳೂರು” ವಿಷಯಕ್ಕೆ ಸಂಬಂಧಿಸಿದಂತೆ 10,479 ಸಲಹೆಗಳು ಬಂದಿವೆ. ಅಧ್ಯಯನ ನಡೆಸಿ ಒಂದೇ ರೀತಿಯ ಸಲಹೆಗಳನ್ನು ವಿಂಗಡಿಸಿ ಬಳಿಕ ಎಲ್ಲವನ್ನೂ ಕ್ರೋಡೀಕರಿಸಿ ವರದಿ ಸಿದ್ದಪಡಿಸಲಾಗುವುದು ಎಂದು ಬಿಬಿಎಂಪಿ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಬಿ.ಎಸ್. ಪ್ರಹ್ಲಾದ್ ಹೇಳಿದರು.
ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಸಂಚಾರಯುಕ್ತ/ಸಾರಿಗೆ ಬೆಂಗಳೂರು ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಭಾಂಗಣದಲ್ಲಿ ವಿಚಾರ ಸಂಕಿರಣ ನಡೆಯಿತು.
“ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ 7 ನಾನಾ ವಿಷಯಗಳಲ್ಲಿ ನಾಗರಿಕರಿಂದ ಬಂದಿರುವ ಸಲಹೆ ಬೇರ್ಪಡಿಸಿ ಪಾಲುದಾರಿಕೆಯ ಶೈಕ್ಷಣಿಕ ಸಂಸ್ಥೆಯಿಂದ ಕ್ರೋಡೀಕರಿಸಿ ವರದಿಯನ್ನು ತಯಾರಿಸಲಾಗುತ್ತದೆ. ಈ ಸಂಬಂಧ ಸಂಚಾರಯುಕ್ತ ಬೆಂಗಳೂರು ವಿಷಯವಾಗಿಯೂ ಸಾಕಷ್ಟು ಸಲಹೆಗಳು ಬಂದಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಯೋಜನೆ ರೂಪಿಸಲಾಗುವುದು” ಎಂದರು.
“ಟ್ರಾಫಿಕ್ ಇಂಡೆಕ್ಸ್ 2022ರ ಶ್ರೇಯಾಂಕ ಪ್ರಕಾರ ಬೆಂಗಳೂರನ್ನು ವಿಶ್ವದ ಎರಡನೇ ಅತಿ ಹೆಚ್ಚು ದಟ್ಟಣೆಯ ನಗರ ಎಂದು ಪರಿಗಣಿಸಿದ್ದು, 1985ರಲ್ಲಿ ಕೇವಲ 1.7 ಲಕ್ಷ ಇದ್ದ ವಾಹನ ಸಂಖ್ಯೆಯು 2022ರ ಅಂತ್ಯದ ವೇಳೆಗೆ 1.09 ಕೋಟಿಗೆ ತಲುಪಿದೆ. 2022ರಲ್ಲಿ ಬೆಂಗಳೂರಿನಲ್ಲಿ ರಸ್ತೆ ಅಪಘಾತದಿಂದಾಗಿ 247 ಪಾದಚಾರಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಇದೆಲ್ಲವನ್ನೂ ತಡೆಯಬೇಕಿದೆ” ಎಂದು ಹೇಳಿದರು.
“ಸುರಕ್ಷಿತ ಪಾದಚಾರಿ ಮಾರ್ಗಗಳ ನಿರ್ಮಾಣ, ಜಂಕ್ಷನ್ಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವುದು, ಪಾದಚಾರಿಗಳಿಗೆ ವಿಶಿಷ್ಟವಾದ ಒತ್ತು ನೀಡುವುದು ನಾಗರಿಕ ಕರ್ತವ್ಯ ಮಾತ್ರವಲ್ಲದೆ ಮೂಲಭೂತ ಮಾನವ ಹಕ್ಕು ಕೂಡ ಆಗಿದೆ. ಈ ನಿಟ್ಟಿನಲ್ಲಿ ಪಾದಚಾರಿ ಮಾರ್ಗಗಳನ್ನು ಮರು ವಿನ್ಯಾಸಗೊಳಿಸಿ ಸುರಕ್ಷಿತ ಪಾದಚಾರಿ ಮಾರ್ಗಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಜನಸಂಖ್ಯೆಗೆ ತಕ್ಕಂತೆ ಬೆಂಗಳೂರಿನಲ್ಲಿ ಶೌಚಾಲಯಗಳಿಲ್ಲ: ಹೈಕೋರ್ಟ್
ಸಂಚಾರಯುಕ್ತ ಬೆಂಗಳೂರಿಗೆ ವಿಚಾರ ಸಂಕಿರಣದಲ್ಲಿ ಬಂದ ಸಲಹೆಗಳು
• ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸೆ ಕಲ್ಪಿಸುವುದು.
• ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಜಾರಿ ತರುವುದು.
• ರಸ್ತೆ ಸಂಪರ್ಕ ಸರಿಯಾಗಿರುವಂತೆ ಮಾಸ್ಟರ್ ಪ್ಲ್ಯಾನ್ ಮಾಡಬೇಕು.
• ನಗರದ ರಸ್ತೆಗಳಲ್ಲಿ ಅನಧಿಕೃತವಾಗಿ ಪಾರ್ಕಿಂಗ್ ಮಾಡುವುದನ್ನು ತಡೆಯುವುದು.
• ನಗರದಾದ್ಯಂತ ನಾಗರಿಕರ ಅನುಕೂಲಕ್ಕಾಗಿ ಸೈನೇಜ್ಗಳನ್ನು ಅಳವಡಿಸಬೇಕು.
• ನಗರದಾದ್ಯಂತ ಪಾದಚಾರಿ ಮಾರ್ಗಗಳಲ್ಲಿ ಪ್ರತ್ಯೆಕವಾಗಿ ಸೈಕಲ್ ಲೈನ್ಗಳನ್ನು ನಿರ್ಮಿಸುವುದು.
• ಟನಲ್ ರಸ್ತೆಗಳನ್ನು ನಿರ್ಮಿಸುವುದು.
• ಮುಂದಿನ ಪೀಳಿಗೆಗೆ ಅನುಕೂಲವಾಗುವ ನಿಟ್ಟಿನಲ್ಲಿ ನೀಲನಕ್ಷೆ ರಚಿಸಿ ಅದನ್ನು ಕಾರ್ಯರೂಪಕ್ಕೆ ತರುವುದು.
• ನಗರದಲ್ಲಿ ಮೆಟ್ರೋ ಮಾರ್ಗವನ್ನು ಹೆಚ್ಚಿಸುವ ಜೊತೆಗೆ ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವುದು.
• ನಾಗರಿಕರು ಸ್ವಂತ ವಾಹನಗಳನ್ನು ಬಳಸುವ ಬದಲು ಸಾರ್ವಜನಿಕ ಸಾರಿಗೆ ಬಳಸುವುದು.
• ಸಮಗ್ರ ಮೊಬಿಲಿಟಿ ಯೋಜನೆ ಜಾರಿಗೊಳಿಸುವುದು.
• ನಗರದಲ್ಲಿರುವ ರಸ್ತೆ ಜಾಲ, ಜಂಕ್ಷನ್ಗಳು, ತಿರುವು ರಸ್ತೆ, ರಸ್ತೆ ಹುಬ್ಬುಗಳು, ಯು-ಟರ್ನ್, ರಸ್ತೆ ಮಧ್ಯಭಾಗ ಡಿವೈಡರ್ ಅಳವಡಿಕೆ ಸೇರಿದಂತೆ ಇನ್ನಿತರೆ ಅಗತ್ಯ ಮೂಲಸೌಕರ್ಯಗಳ ಜತೆಗೆ ಅದನ್ನು ಸರಿಯಾಗಿ ನಿರ್ವಹಣೆ ಮಾಡುವುದು.
• ರಸ್ತೆ ಬದಿಗಳಲ್ಲಿ ನಿರ್ಮಿಸಿರುವ ಚರಂಡಿಗಳು/ಕಾಲುವೆಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು.
• ಇಡೀ ಬೆಂಗಳೂರನ್ನು ನಡೆಯಲು ಅರ್ಹವಾದ ನಗರವನ್ನಾಗಿ ಬದಲಾಯಿಸಬೇಕು ಹಾಗೂ ಪಾದಚಾರಿ ವಿನ್ಯಾಸಗಳನ್ನು ಒಂದೇ ಮಾದರಿಯಲ್ಲಿ ಮಾಡುವುದು.
• ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿ ತೆರವು, ಪಾರ್ಕಿಂಗ್ ಮಾಡದಂತೆ ಕ್ರಮವಹಿಸುವುದು.
ಈ ವೇಳೆ ನಗರ ಭೂ ಸಾರಿಗೆ ನಿರ್ದೇಶನಾಲಯದ ಐಟಿ ಮುಖ್ಯಸ್ಥ ಶಮಂತ್, ಟಿಇಸಿ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಬಾಲಾಜಿ, ಮೆಟ್ರೊ, ಬಿಎಂಟಿಸಿ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.