ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮತ್ತು ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು, ಈವರೆಗೆ 2.81 ಲಕ್ಷ ಹೆಕ್ಟೇ ರ್ ಪ್ರದೇಶದ ಬಿತ್ತನೆ ಗುರಿಗೆ 2.91 ಲಕ್ಷ ಹೆಕ್ಟೇರ್ ಪ್ರದೇಶ (ಶೇ. 103.46ದಲ್ಲಿ) ಬಿತ್ತನೆಯಾಗಿದೆ. ಸಮಪರ್ಕವಾಗಿ ಬಿತ್ತನೆ ಬೀಜ, ರಸಗೊಬ್ಬರಗಳನ್ನು ರೈತರಿಗೆ ವಿತರಿಸಲಾಗಿದೆ. ಜಿಲ್ಲೆಯಲ್ಲಿ ನ್ಯಾನೊ ರಸಗೊಬ್ಬರ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಇದು ರೈತ ಸ್ನೇಹಿಯಾಗಿದೆ. ಕಾಳುಗೊಬ್ಬರವನ್ನು ಮಿತವಾಗಿ ಬಳಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.
ಕೃಷಿ ಇಲಾಖೆಯಿಂದ ಆಗಸ್ಟ್ 2ರಂದು ಮರೆವಾಡ ಗ್ರಾಮದ ರೈತ ರಾಯಣ್ಣ ಹುರಳಿಯವರ ತೋಟದಲ್ಲಿ ಬೆಳೆಗಳಿಗೆ ನ್ಯಾನೊ ಯೂರಿಯಾ ರಸಗೊಬ್ಬರ ಸಿಂಪಡಣೆ ಪ್ರಾತ್ಯಕ್ಷಿಕೆ ಮತ್ತು ಬೆಳೆ ಸಮೀಕ್ಷೆಯ ಪ್ರಾತ್ಯಕ್ಷಿಕೆಯನ್ನು ರೈತರೊಂದಿಗೆ ಪರಿಶೀಲಿಸಿ ಮಾತನಾಡಿದರು.
“ಜಿಲ್ಲೆಯಲ್ಲಿ ಒಟ್ಟು 2,91,182 ಪ್ರದೇಶಗಳಲ್ಲಿ ಮುಂಗಾರು ಹಂಗಾಮಿಗಾಗಿ ಬೆಳೆ ಸಮೀಕ್ಷೆ ಕೈಗೊಳ್ಳಬೇಕಾಗಿದೆ. ಈವರೆಗೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ 390 ಖಾಸಗಿ ನಿವಾಸಿಗಳ ಮೂಲಕ 2,06,754 ಪ್ರದೇಶಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಸ್ವತಃ ರೈತರೇ 5029 ಪ್ಲಾಟ್ಗಳಲ್ಲಿ ತಮ್ಮ ಜಮೀನಿನಲ್ಲಿ ಬೆಳೆದಂತಹ ಬೆಳೆಗಳ ಮಾಹಿತಿಯನ್ನು ದಾಖಲಿಸಿದ್ದಾರೆ. ಬೆಳೆ ಸಮೀಕ್ಷೆಯು ಸರ್ಕಾರವು ನೀಡಿರುವ ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಪಾರದರ್ಶಕವಾಗಿ ನಡೆಯುತ್ತಿದೆ” ಎಂದರು.
“ಮಣ್ಣಿನ ರಸವತ್ತತೆ ಹಾಗೂ ಫಲವತ್ತತೆ ಹಾಳಾಗದಂತೆ ಬೆಳೆಗಳಿಗೆ ಗೊಬ್ಬರಗಳನ್ನು ಬಳಸಬೇಕು. ಅನಗತ್ಯವಾಗಿ ಹೆಚ್ಚುವರಿ ರಸಗೊಬ್ಬರಗಳನ್ನು, ರಾಸಾಯನಿಕಗಳನ್ನು ಬೆಳೆಗಳಿಗೆ, ಭೂಮಿಗೆ ಬಳಸುವದರಿಂದ ಆಹಾರ, ವಾತಾವರಣ ಮತ್ತು ಜಲ ಮಲೀನವಾಗುತ್ತದೆ. ಬೆಳೆಗಳಿಗೆ ಅಗತ್ಯಕ್ಕೆ ಅನುಗುಣವಾಗಿ ನ್ಯಾನೊ ರಸಗೊಬ್ಬರ ಬಳಸುವದರಿಂದ ಪರಿಸರ ಮಾಲಿನ್ಯ ಮತ್ತು ಹೆಚ್ಚು ಖರ್ಚನ್ನು ತಡೆಯಬಹುದಾಗಿದೆ. ಜಿಲ್ಲೆಯಲ್ಲಿ 2024-25 ನೇ ಸಾಲಿನ ಜುಲೈ ಅಂತ್ಯಕ್ಕೆ 6500 ಲೀಟರ್ ಅಂದರೆ 13 ಸಾವಿರ ಬಾಟಲ್ ನ್ಯಾನೊ ಯೂರಿಯಾ ಮಾರಾಟವಾಗಿದೆ. ಪ್ರಸಕ್ತ ವರ್ಷ 14,400 ಲೀಟರ್ ಅಂತೆ 28,800 ಬಾಟಲ್ ನ್ಯಾನೊ ಯೂರಿಯಾ ಮಾರಾಟವಾಗಿದೆ. ಇದು ಸಾಂಪ್ರಾದಿಯಿಕ ಯೂರಿಯಾಗಿಂತ 8 ರಿಂದ 10 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದ್ದು, ಬೆಳೆಗಳಿಗೆ ತ್ವರಿತವಾಗಿ ಪೋಷಕಾಂಶಗಳನ್ನು ನೀಡುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ಒಳಮೀಸಲಾತಿಗೆ ಒತ್ತಾಯಿಸಿ ಮಾದಿಗ ದಂಡೋರದಿಂದ ಕೇಶ ಮುಂಡನೆ, ಅರೆಬೆತ್ತಲೆ ಪ್ರತಿಭಟನೆ
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು ಕೃಷಿ ಇಲಾಖೆ ವಿವಿಧ ಯೋಜನೆಗಳ ಕುರಿತು ಹಾಗೂ ನ್ಯಾನೊ ರಸಗೊಬ್ಬರ ಪ್ರಾತ್ಯಕ್ಷಿಕೆ ಮತ್ತು ಬೆಳೆ ಸಮೀಕ್ಷೆ ಆ್ಯಪ್ ಬಳಕೆ ಕುರಿತು ರೈತರಿಗೆ ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಉಪನಿರ್ದೇಶಕಿ ಜಯಶ್ರೀ ಹಿರೇಮಠ, ಜಿಲ್ಲಾ ಸಂಖ್ಯಾ ಮತ್ತು ಆರ್ಥಿಕ ಅಧಿಕಾರಿ ವೀರಣ್ಣಗೌಡ ಪಾಟೀಲ, ಸಹಾಯಕ ನಿರ್ದೇಶಕ ರಾಜಶೇಖರ ಆನಗೌಡರ, ಧಾರವಾಡ ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಮಲ್ಲಿನಗೌಡ ಪಾಟೀಲ, ಮಾಜಿ ಅಧ್ಯಕ್ಷ ಬಸವರಾಜ ಕುಂದಗೋಳ, ಬಸವರಾಜ ಬಂಡಿವಾಡ, ತಮ್ಮಣ್ಣ ಗುಂಡಗೋವಿ, ಬೀಮಣ್ಣ ಕಸಾಯಿ, ಕೃಷಿ ಅಧಿಕಾರಿ ರೇಖಾ ಬೆಳ್ಳಟ್ಟಿ, ಮಹಾದೇವ ಸರಶಟ್ಟಿ ಸೇರಿದಂತೆ ವಿವಿಧ ಪ್ರಗತಿಪರ ರೈತರು, ಗ್ರಾಮಸ್ಥರು, ಮರೆವಾಡ, ಅಮ್ಮಿನಭಾವಿ ಗ್ರಾಮಗಳ ಪ್ರಮುಖರು ಇದ್ದರು.