ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸಂಯುಕ್ತಾಶ್ರಯದಲ್ಲಿ ಚಿತ್ತರಗಿ ಇಳಕಲ್ ಶ್ರೀ ವಿಜಯಮಹಂತೇಶ್ವರ ಸಂಸ್ಥಾನದ ಶ್ರೀ ಮ.ನಿ.ಪ್ರ.ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಮಾದಕವ್ಯಸನ ಮುಕ್ತ ದಿನಾಚರಣೆ ಆಚರಿಸಲಾಯಿತು.
ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ “ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಯುವ ಜನತೆಯು ದುಶ್ವಟಗಳಿಂದ ದೂರವಿದ್ದು, ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪಣತೊಡಬೇಕು” ಎಂದು ಯುವ ಸಮುದಾಯಕ್ಕೆ ಮನವಿ ಮಾಡಿದರು.
“ದುಶ್ಚಟಗಳ ಭಿಕ್ಷೆ ಬೇಡಿದ ಮಹಾಂತ ಶಿವಯೋಗಿಗಳು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಯುವ ಜನತೆಯು ದುಶ್ಚಟಗಳನ್ನು ಬಿಟ್ಟು ಸುಸಂಸ್ಕೃತರಾಗಿ ಬದುಕಬೇಕು. ಪಠ್ಯಪುಸ್ತಕಗಳಲ್ಲಿ ಮದ್ಯ ಮತ್ತು ಮಾದಕ ವ್ಯವಸನಗಳ ದುಷ್ಪಾರಿಣಾಮಗಳ ಕುರಿತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು” ಎಂದು ಹೇಳಿದರು.

ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಮಾತನಾಡಿ, “ಯುವ ಜನತೆ ಮದ್ಯ, ಮಾದಕ ವ್ಯಸನಗಳಿಂದ ದೂರವಿದ್ದು, ವ್ಯಸನಮುಕ್ತ, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ದುಶ್ಚಟಗಳು ಸಮಾಜ, ಕುಟುಂಬಕ್ಕೆ ಮಾರಕವಾಗಿವೆ. ಇದರ ಜೊತೆಗೆ ಯುವ ಜನತೆ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದು, ಮೊಬೈಲ್ ಚಟ ಅಂಟಿಸಿಕೊಂಡಿರುವುದು ತುಂಬಾ ಆಘಾತಕಾರಿಯಾಗಿದ್ದು, ಇದರಿಂದಾಗಿ ತಲೆನೋವು, ನಿದ್ರಾಹೀನತೆ, ಆಲಸ್ಯ, ಓದಿನಲ್ಲಿ ನಿರಾಸಕ್ತಿ, ಚಟುವಟಿಕೆ ರಹಿತ ಬದುಕು ಸೇರಿದಂತೆ ಹಲವಾರು ರೀತಿಯ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡಲಿವೆ” ಎಂದು ಎಚ್ಚರಿಸಿದರು.
“ದೇಶ ವಿದೇಶಗಳಲ್ಲಿ ಸಂಚರಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಅವಿರತವಾಗಿ ಶ್ರಮಿಸಿದವರು ಡಾ.ಮಹಾಂತ ಶಿವಯೋಗಿಗಳು. ಪ್ರಮುಖವಾಗಿ ಸ್ವಾಮೀಜಿಯವರು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಗೊಂಡ ಮಹಾಂತ ಜೋಳಿಗೆ ಕಾರ್ಯಕ್ರಮ ಅತ್ಯಂತ ವಿಶಿಷ್ಟವಾದುದು. ಜನರು ವ್ಯಸನ ಮುಕ್ತರಾದರೆ ಸಮಾಜ ಸುಧಾರಣೆಯಾಗಲಿದೆ” ಎಂದು ಅಭಿಪ್ರಾಯಪಟ್ಟರು.
ಮಾನಸಿಕ ಆರೋಗ್ಯ ತಜ್ಞ ವೈದ್ಯರಾದ ಡಾ.ಮಂಜುನಾಥ್ ಅವರು ಉಪನ್ಯಾಸ ನೀಡಿ, “ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಚಟಗಳಿಂದ ದೂರವಿರಬೇಕು. ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ವ್ಯಸನಗಳಿಗೆ ಬಲಿಯಾದರೆ ಪ್ರಜ್ಞಾವಂತಿಕೆ ಕಡಿಮೆಯಾಗಿ ಅಪರಾಧಿಗಳಾಗಿ ಬದಲಾಗುತ್ತಾರೆ. ವಿವಿಧ ಅಪರಾಧಗಳನ್ನು ಮಾಡಿ ಜೈಲುಪಾಲಾಗುವ ಬಹುಪಾಲು ಜನ ವಿವಿಧ ಬಗೆಯ ವ್ಯಸನಿಗಳೇ ಆಗಿರುತ್ತಾರೆ. ಸಮಾಜದಲ್ಲಿ ಚಟಗಳು ಜಾಸ್ತಿಯಾದರೆ ಕ್ರಿಮಿನಲ್ ಪ್ರಕರಣಗಳು ಸಹ ಹೆಚ್ಚಳವಾಗುತ್ತವೆ” ಎಂದು ಕಳವಳ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕಳಪೆ ಬೀಜ-ನಕಲಿ ಗೊಬ್ಬರದ ಹಾವಳಿ; ರೈತರ ನೆರವಿಗೆ ನಿಲ್ಲದ ಇಲಾಖೆ
ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಚಿತ್ತರಗಿ ಇಳಕಲ್ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನದ ಭಕ್ತರು ಹಾಗೂ ಮಹಾಂತ ಶಿವಯೋಗಿಗಳ ಆಪ್ತರಾದ ಕೆ. ಚಂದ್ರಪ್ಪ, ಸರ್ಕಾರಿ ವಿಜ್ಞಾನ ಕಾಲೇಜು ಪ್ರಾಂಶುಪಾಲ ಎಂ.ಎನ್.ರವಿಕಾಂತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿಬ್ಬಂದಿಗಳು, ರಂಗಕರ್ಮಿ ಕೆಪಿಎಂ ಗಣೇಶಯ್ಯ, ಆಕಾಶವಾಣಿಯ ನವೀನ್ ಮಸ್ಕಲ್, ಸರ್ಕಾರಿ ವಿಜ್ಞಾನ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.