ಧರ್ಮಸ್ಥಳದಲ್ಲಿ ನಿನ್ನೆ ಪತ್ರಕರ್ತರ ಮೇಲೆ ಯೂಟ್ಯೂಬರ್ ಗಳ ಮೇಲೆ ನಡೆದ ದಾಳಿ ಖಂಡನೀಯ ಮತ್ತು ಅಕ್ಷಮ್ಯ. ಸ್ಥಳೀಯ ಸ್ಥಳದ ಧರ್ಮ ಕಾಪಾಡಬೇಕಾದವರೇ ಗೂಂಡಾಗಿರಿ ಮಾಡಿ ಅಧರ್ಮ ಕಾಪಾಡಿದರೇ ? ಒಂದು ಸಂವಿಧಾನ ಬದ್ದ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಾಗರೀಕರ ಮೇಲೆ, ಪತ್ರಕರ್ತರ ಹಲ್ಲೆ, ದಾಳಿ, ಗೂಂಡಾಗಿರಿ ನಡೆಸುವುದು ಶಿಕ್ಷಾರ್ಹ ಅಪರಾಧ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅದನ್ನು ಕಣ್ಣಾರೆ ಕಂಡೂ ಮೌನವಹಿಸುವುದು ಪರೋಕ್ಷವಾಗಿ ಹಲ್ಲೆಗೆ ನಾವು ಪ್ರೇರೇಪಿಸಿದಂತೆಯೇ ಸರಿ. ಸರಿ ತಪ್ಪುಗಳು ತನಿಖೆಯ ನಂತರವಷ್ಟೇ ಗೊತ್ತಾಗಬೇಕಿದೆ. ಅಂತೂ ಅಳೆದು ತೂಗಿ ನೋಡಿ ಕೊನೆಗೂ ಸರಕಾರ ಎಸ್ ಐ ಟಿ ತನಿಖೆಗೆ ಆದೇಶಿಸಿದೆ. ತನಿಖೆ ಬರದಿಂದ ಸಾಗುತ್ತಿದೆ. ಯಾರೇ ಸುಳ್ಳು ಮಾಹಿತಿ ಕೊಟ್ಟರೂ ಅದನ್ನು ಪ್ರಶ್ನಿಸಲು ಕೋರ್ಟಿದೆ ಕಾನೂನಿದೆ, ಅದು ಬಿಟ್ಟು ಗೂಂಡಾಗಿರಿ ನಡೆಸುವುದು, ಅಥವಾ ಗೂಂಡಾಗಳನ್ನು ಬಳಸಿ ಅಸಹಜ ಹೆಣ್ಣು ಮಕ್ಕಳ ಸಾವಿನ ವಿರುದ್ಧದ ಧ್ವನಿಯನ್ನೇ ಅಡಗಿಸಲು ಮುಂದಾಗುವುದು ಧರ್ಮಸ್ಥಳದ ಹೆಸರಿಗೆ ತರುವ ಕಳಂಕವಷ್ಟೇ ಅಲ್ಲಾ, ಕೆಲವೊಂದು ಅನುಮಾನಗಳಿಗೂ ಎಡೆಮಾಡಿಕೊಡುತ್ತದೆ. ಯೂಟ್ಯೂಬರ್ ಗಳು ಅಪಪ್ರಚಾರ ಮಾಡಿದ್ರೇ ಅವರ ಮೇಲೆ ಕೇಸು ದಾಖಲಿಸಿ. ಹಾಗೆಯೇ ಧರ್ಮಸ್ಥಳದ ಪರವಾಗಿಯೂ ಸಹ ಒಂದಷ್ಟು ಬಕೆಟ್ ಭಕ್ತರು, ವಸೂಲೀ ಪತ್ರಕರ್ತರು ಪುಂಕಾನುಪುಂಕವಾಗಿ ತಮ್ಮ ವಾದ ಸರಣಿಯನ್ನು ತಾವೇ ಸರ್ವಜ್ಞರು ಎನ್ನುವ ತರಹ ವಾದಿಸುತ್ತಿರುವುದೂ ಕಂಡುಬರುತ್ತಿದೆ. ತಮಗೂ ಅಕ್ಕ ತಂಗಿಯರು ಇರುವ ಈ ದೇವಮಾನವರ ಅನುಯಾಯಿಗಳಿಗೆ ಅಷ್ಟೊಂದು ಉರಿ ಹತ್ತಲು ಕಾರಣವಾದರೂ ಏನು ? ಎಷ್ಟೇ ಅಪಪ್ರಚಾರ ಮಾಡಿದರೂ ಸತ್ಯ ಯಾವೋತ್ತಿದ್ದರೂ ಸತ್ಯವೇ. ಸೌಜನ್ಯ ಪರ ಹೋರಾಟ ಆರಂಭವಾದ ಮೇಲೆ ಧರ್ಮದ ನಾಡಲ್ಲಿ ಹೆಣ್ಣು ಮಕ್ಕಳ ಶವ ಸಿಗುವುದು ಕಡಿಮೆಯಾಯ್ತು.
ದೇವಮಾನವರ ಬಕೆಟ್ ಪತ್ರಕರ್ತರು, ವಾದದಲ್ಲಿ, ಬೆದರಿಕೆಯಲ್ಲಿ ಕ್ಷಣಿಕ ಯಶಸ್ಸುಗಳಿಸಬಹುದೇ ಹೊರತು. ನಿಜ ಯಾವೋತ್ತಿದ್ದರೂ ನಿಜವಾಗಿರುತ್ತದೆ ಎಂದು ಹೇಳಿದರು.
ಎಸ್ ಐ ಟಿ ತನಿಖೆಯಲ್ಲೂ ಸಾಕ್ಷಾಧಾರಗಳ ಕೊರತೆಯಿಂದ ಆರೋಪ ಸಾಬೀತಾಗದಿದ್ದರೂ, ಆರೋಪಿಗೆ ಪಾಪಪ್ರಜ್ಞೆ, ತನ್ನ ಒಳಮನಸ್ಸಲ್ಲಿ ಕಾಡುತ್ತಿರುವುದಂತೂ ಸತ್ಯಾ. ಉದಾಹರಣೆಗೆ ಸೌಜನ್ಯ ಕೇಸಲ್ಲಿ ಆರೋಪಿ ನಿರಪರಾಧಿ ಎಂದು ಖುಲಾಸೆಗೊಂಡಿರುವುದರಿಂದ, ಹಾಗಿದ್ರೆ ಸೌಜನ್ಯ ಸತ್ತಿದ್ದು ಸುಳ್ಳೇ ? ಅತ್ಯಾಚಾರ ನಡೆದಿದ್ದು ಸುಳ್ಳೇ ? ಈ ಕ್ರತ್ಯ ನಡೆಸಿದವರು ಯಾರು ? ಆರೋಪಿಗಳಿಗೆ ಏನು ಶಿಕ್ಷೆ ಆಯ್ತು.
ಇದೇ ರೀತಿ ಹಲವಾರು ನಮ್ಮ ಅಕ್ಕ ತಂಗಿಯರಿಗೆ ನಡೆದಿರುವಾಗ ಒಬ್ಬ ನಾಗರೀಕರಾಗಿ , ಪ್ರಜೆಯಾಗಿ ಪ್ರಶ್ನಿಸದೇ, ಮೌನವಾಗಿರುವುದು ಎಷ್ಟು ಸರಿ. ಸ್ಥಳೀಯ ರಾಜ್ಯ ಸಭಾ ಸದಸ್ಯರ ಮೌನವೇಕೆ ? ಜನರಿಗೆ ಅವರು ಉತ್ತರ ದಾಯಿ ಅಲ್ವಾ ? ಒಂದು ಸ್ಥಳ ಅದು ಧರ್ಮಸ್ಥಳವೋ ಅಥವಾ ಅಧರ್ಮಸ್ಥಳವೋ ಎಂದು ಅಲ್ಲಿ ನಡೆಯುವ ಘಟನೆ, ಕ್ರತ್ಯ , ವಾಸ್ತವಾಂಶದ ಮೇಲೆ ನಿರ್ಧಾರವಾಗಬೇಕೇ ಹೊರತು, ಅಪ್ಪ ನೆಟ್ಟ ಗೋಳಿ ಮರಕ್ಕೆ ಸುತ್ತು ಬಂದ ಕೂಡಲೆ ಆಗೋದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.