- ‘ರಾಜಕೀಯ ನಿವೃತ್ತಿಯಾದರೂ ಆಗು, ಇಲ್ಲ ಕಾಂಗ್ರೆಸ್ ನಿರ್ನಾಮ ಆದರೂ ಮಾಡು’
- ರಾಜಕೀಯ ನಿವೃತ್ತಿ ಪಡೆಯುವೆ ಎಂದಿರುವ ಡಿಕೆ ಶಿವಕುಮಾರ್ಗೆ ತಿರುಗೇಟು
ಡಿಕೆ ಶಿವಕುಮಾರ್ಗೆ ತಾಕತ್, ಧಮ್ ಇದ್ದರೆ ಅಜ್ಜಯ್ಯನ ಮುಂದೆ ಆಣೆ ಮಾಡಲಿ, ಡಿಕೆಶಿ ಎಲ್ಲದಕ್ಕೂ ಅಜ್ಜಯ್ಯನ ಬಳಿ ಹೋಗುತ್ತಾರೆ ಅಲ್ವಾ? ಈಗ ಹೋಗಪ್ಪ ಅಜ್ಜಯ್ಯನ ಬಳಿ ಹೋಗಿ ಆಣೆ ಮಾಡಪ್ಪ ಎಂದು ಮಾಜಿ ಸಚಿವ ಅಶ್ವತ್ಥನಾರಾಯಣ ಏಕವಚನದಲ್ಲೇ ಕಿಡಿಕಾರಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕಮಿಷನ್ ಆರೋಪ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದಿದ್ದ ಡಿಸಿಎಂ ಡಿಕೆ ಶಿವಕುಮಾರ್ಗೆ ತಿರುಗೇಟು ನೀಡಿದ್ದಾರೆ.
“ನೀನು ರಾಜಕೀಯ ನಿವೃತ್ತಿ ಆದರೂ ಆಗು, ಕಾಂಗ್ರೆಸ್ ಅನ್ನು ನಿರ್ನಾಮ ಆದರೂ ಮಾಡು. ಡಿಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿ ಸಚಿವರಲ್ಲ, ಅವರು ಬೆಂಗಳೂರು ನಿರ್ನಾಮ ಮಂತ್ರಿ, ಕೆಂಪೇಗೌಡ ಕಟ್ಟಿದ ಬೆಂಗಳೂರಿಗೆ ಡಿಕೆ ಶಿವಕುಮಾರ್ ಕಳಂಕ ತರೋದು ಬೇಡ” ಎಂದು ಹರಿಹಾಯ್ದರು.
“ಬೆಂಗಳೂರು ಅಭಿವೃದ್ಧಿ ಸಚಿವ, ಉಪ ಮುಖ್ಯಮಂತ್ರಿಗಳ ಮೇಲೆ ಗುತ್ತಿಗೆದಾರರು ಶೇ.10 ರಿಂದ 15ರಷ್ಟು ಕಮಿಷನ್ ಆರೋಪ ಮಾಡಿದ್ದಾರೆ. ಆಗ ನಿರಾಧಾರವಾಗಿ ಕ್ಯಾಂಪೇನ್ ಮಾಡಿದ್ದರು. ಈಗ ಏನು ಉತ್ತರ ನೀಡುತ್ತಾರೆ? ಇವರು ಇನ್ನೊಬ್ಬರ ಬಗ್ಗೆ, ಗುತ್ತಿಗೆದಾರರ ಕುರಿತು ಮಾತನಾಡುತ್ತಾರೆ. ಡಿಕೆ ಶಿವಕುಮಾರ್ ಟ್ರ್ಯಾಕ್ ರೆಕಾರ್ಡ್ ತೆಗೆದು ನೋಡಿದ್ರೆ ಎಲ್ಲವೂ ಗೊತ್ತಾಗುತ್ತದೆ” ಎಂದರು.
ಗುತ್ತಿಗೆದಾರರ ಪ್ರಕರಣ ಲೋಕಾಯುಕ್ತಕ್ಕೆ ನೀಡಬೇಕು
“ಗುತ್ತಿಗೆದಾರರು ಈಗಲೇ ಸುಸ್ತಾಗಿದ್ದಾರೆ. ಗುತ್ತಿಗೆದಾರರ ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ಕೊಡಬೇಕು. ನಾವು ಸೋಮವಾರ ರಾಜ್ಯಪಾಲರನ್ನು ಭೇಟಿ ಮಾಡಿ ಒತ್ತಾಯ ಮಾಡುತ್ತೇವೆ. ಪ್ರಾಮಾಣಿಕತೆ ಕಿಂಚಿತ್ತಾದರೂ ಇದ್ದರೆ ಲೋಕಾಯುಕ್ತಕ್ಕೆ ತನಿಖೆಗೆ ವಹಿಸಿ. ನಮ್ಮ ಬಗ್ಗೆ ತನಿಖೆ ಯಾರಿಂದಲಾದರೂ ಮಾಡಿಸಲಿ. ವೆಲ್ಕಂ, ಬಹಳ ಸತ್ಯವಂತ, ಪ್ರಾಮಾಣಿಕ ಎನ್ನುವ ಸಿದ್ದರಾಮಯ್ಯನವರು ಲೋಕಾಯುಕ್ತದ ತನಿಖೆ ಮಾಡಿಸಲಿ” ಎಂದು ಅಶ್ವತ್ಥನಾರಾಯಣ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರ ಸುಡದಿರಲಿ ಬಿಲ್ ಬಾಕಿ ಬೆಂಕಿ ಕಿಡಿ
ಕಾಂಗ್ರೆಸ್ ಎಟಿಎಂ ಸರ್ಕಾರ
“ಕಾಂಗ್ರೆಸ್ನಲ್ಲಿ ಸಿಎಂ, ಸೂಪರ್ ಸಿಎಂ, ಶ್ಯಾಡೋ ಸಿಎಂ ಇದ್ದಾರೆ, ಕಾಂಗ್ರೆಸ್ ಸರ್ಕಾರ ಎಟಿಎಂ ಸರ್ಕಾರ. ಕಾಂಗ್ರೆಸ್ನಲ್ಲಿ ವೈಎಸ್ಟಿ, ಜಿಎಸ್ಟಿ ಇದೆ, ಸುರ್ಜೇವಾಲಾ ಬರ್ತಾರೆ, ಟಾರ್ಗೆಟ್ ಕೊಡುತ್ತಾರೆ. ಕಲೆಕ್ಷನ್ ಮಾಡುತ್ತಾರೆ. ಕಾಂಗ್ರೆಸ್ನವರು ಹವಾಲಾ ಮಾಡುತ್ತಾರೆ ಎಂಬ ಆರೋಪ ಇದೆ. ಲೋಕಸಭೆ ಚುನಾವಣೆಗೆ ಇಲ್ಲಿಂದ ಹಣ ಕ್ರೋಡೀಕರಣ ಮಾಡಲಾಗುತ್ತಿದೆ” ಎಂದು ದೂರಿದರು.
ಚಲುವರಾಯಸ್ವಾಮಿ ಅವರ ಮೇಲಿನ ಲಂಚ ಕೇಳಿದ ಆಪಾದನೆ ಆಧರಿತವಾಗಿ ರಾಜ್ಯಪಾಲರು ಪತ್ರವನ್ನು ಮುಖ್ಯ ಕಾರ್ಯದರ್ಶಿಗಳಿಗೆ ಕಳಿಸಿದ್ದಾರೆ. ಅಧಿಕಾರಿಗಳ ಮೂಲಕ ಹಣ ಸಂಗ್ರಹ ನಡೆದಿದೆ. ಪೇ ಸಿಎಂ, ಪೇ ಡಿಸಿಎಂ, ಪೇ ಚಲುವರಾಯಸ್ವಾಮಿ ಆಗಿದೆ. ಪೇ ಪೇ ಆಗಿದೆ. ಸಿಎಂ ಇದನ್ನು ನಕಲಿ ಎಂದಿದ್ದಾರೆ. ಇವರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಸಿಐಡಿಗೆ ತನಿಖೆ ವಹಿಸಿದರೆ ನ್ಯಾಯ ಸಿಗುವುದೇ? ಇವರಿಬ್ಬರನ್ನು ವಜಾ ಮಾಡಿ ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವರಾದ ಕೆ ಗೋಪಾಲಯ್ಯ, ಬಿಡಿಎ ಮಾಜಿ ಅಧ್ಯಕ್ಷ ಮತ್ತು ಶಾಸಕ ಎಸ್.ಆರ್. ವಿಶ್ವನಾಥ್, ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಹೇಮಲತಾ ಗೋಪಾಲಯ್ಯ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.