ಇತ್ತೀಚಿಗಷ್ಟೇ ವಿವಾಹವಾಗಿದ್ದ ಗೃಹಿಣಿಯೊಬ್ಬರ ಅಸಹಜ ಸಾವು ಸಂಭವಿಸಿರುವ ಘಟನೆ ಹುಬ್ಬಳ್ಳಿ ನಗರದ ನಂದಗೋಕುಲ ಬಡಾವಣೆಯಲ್ಲಿ ನಡೆದಿದೆ.
ಮೃತ ಗೃಹಿಣಿ ಜಯಶ್ರೀ ಬಡಿಗೇರ್(31) ಎಂಬುವವರು ಶಿವಾನಂದ್ ಜತೆಗೆ ಮೇ 21ರಂದು ಮದುವೆಯಾಗಿದ್ದರು. 13 ವರ್ಷದ ಪ್ರೀತಿಯನ್ನು ಮುಚ್ಚಿಟ್ಟು ಜಯಶ್ರೀಯನ್ನು ವಿವಾಹವಾಗಿದ್ದ ಎನ್ನಲಾಗಿದ್ದು, ಈ ಬಗ್ಗೆ ಮದುವೆ ನಂತರ ಜಯಶ್ರೀಗೆ ಓರ್ವ ಯುವತಿ ಮಾಹಿತಿ ನೀಡಿದ್ದಾಳೆ. ಇದರಿಂದ ಆಘಾತಗೊಂಡ ಜಯಶ್ರೀ ಎಲ್ಲವನ್ನು ಮರೆತು ಗಂಡನೊಂದಿಗೆ ಇರಲು ಮುಂದಾಗಿದ್ದರು.
ಇದೇ ವಿಷಯದಿಂದ ದಂಪತಿ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಶಿವಾನಂದ್ ತನ್ನ ಪತ್ನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದನೆಂದು ಜಯಶ್ರೀ ಅವರ ಕುಟುಂಬಸ್ಥರು ದೂರಿದ್ದಾರೆ. “ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದು, ಬೆಳಗಾಗುವುದರಲ್ಲಿ ಜಯಶ್ರೀ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆಯಲ್ಲ, ತಮ್ಮ ಮಗಳನ್ನು ಶಿವಾನಂದ ಕೊಲೆ ಮಾಡಿ ನೇಣಿಗೆ ಹಾಕಿದ್ದಾನೆ” ಎಂದು ಜಯಶ್ರೀ ಪೋಷಕರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಿಂದಗಿ | ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್ಗೆ ಹೋಗುವ ದಾರಿ ಕೆಸರುಮಯ
ಈ ಕುರಿತು ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಮಹಿಳೆಯ ಕುಟುಂಬದ ಆರೋಪಗಳನ್ನು ಆಧರಿಸಿ, ಶಿವಾನಂದ್ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪೊಲೀಸರು ಶವಪರೀಕ್ಷೆ ವರದಿ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ತನಿಖೆಯನ್ನು ಮುಂದುವರೆಸಿದ್ದಾರೆ.