ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಇ-ಸ್ವತ್ತು ಮತ್ತು ಮನರೇಗಾ ಯೋಜನೆಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿರುವವರ ವಿರುದ್ಧ ಶಿಸ್ತು ಕ್ರಮ ಹಾಗೂ ತಾಲೂಕು ಪಂಚಾಯಿತಿಯ ವಾಣಿಜ್ಯ ಸಂಕಿರಣಗಳನ್ನು ಬಹಿರಂಗ ಹರಾಜು ಪ್ರಕ್ರಿಯೆಯನ್ನು ಕ್ರಮಬದ್ಧವಾಗಿ ನಡೆಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಾ.ಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಅಧಿನಿಯಮ ಬಾಹಿರವಾಗಿ ನಡೆದಿರುವ ಕಾಮಗಾರಿಗಳು ಮತ್ತು ಸರ್ಕಾರದ ಹಣ ದುರುಪಯೋಗವಾಗಿರುವುದನ್ನು ತನಿಖೆ ನಡೆಸಿ ತಪ್ಪಿಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಸುಷ್ಮಾ ಅವರಿಗೆ ಮನವಿ ಸಲ್ಲಿಸಿದರು.
ಕರವೇ ಜಿಲ್ಲಾಧ್ಯಕ್ಷ ವೇಣು ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, “ಪಟ್ಟಣದ ತಾ.ಪಂ ಕಾರ್ಯಾಲಯ ಪ್ರಾಂಗಣದಲ್ಲಿ ಸುಮಾರು 45ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ಇದ್ದು, ಕಳೆದ ಬಾರಿ ನಿಯಮ ಬಾಹಿರವಾಗಿ ಬಹಿರಂಗ ಹರಾಜು ಮಾಡದೇ 3 ತಿಂಗಳು ಬಾಡಿಗೆ ಮನ್ನಾ ಮಾಡಿ, ಸಭೆಯಲ್ಲಿ ನಿಯಮವನ್ನು ಉಲ್ಲಂಘಿಸಿ ಮೊದಲಿನಿಂದ ಬಾಡಿಗೆ ಇದ್ದವರ ಅನುಸಾರವಾಗಿಯೇ ನಡೆದುಕೊಂಡು ಬಂದಿದೆ. ಈ ವಿಚಾರವಾಗಿ 4 ಬಾರಿ ದೂರು ಕೊಟ್ಟರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ” ಎಂದು ಆರೋಪಿಸಿದರು.
“ಕಾನೂನು ಮುಖಾಂತರ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಪಂಚಾಯತ್ ರಾಜ್ ಅಧಿನಿಯಮದ ಪ್ರಕಾರವಾಗಿ ಬಹಿರಂಗ ಹರಾಜಿನ ಬಗ್ಗೆ ಪ್ರತಿಯೊಬ್ಬ ಜನಸಾಮಾನ್ಯರಿಗೆ ಮಾಹಿತಿ ನೀಡಿ ಕರಪತ್ರಗಳನ್ನು ಹಂಚಿ, ಬಹಿರಂಗಗೊಳಿಸಿದ ಬಳಿಕ ಹರಾಜು ಪ್ರಕ್ರಿಯೆ ನಡೆಸಬೇಕು. ಆದರೆ ಹಲವು ವರ್ಷಗಳಿಂದ “ತಾಲೂಕು ಪಂಚಾಯಿತಿ ಅಧಿಕಾರಿಗಳೂ ಕೂಡ ಉಳ್ಳವರಿಗೆ ಕೈ ಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದ್ದೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ತಾಲೂಕಿನ ಕೆಲ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸನ್ನು ದುರುಪಯೋಗ ಪಡಿಸಿಕೊಂಡು ಕಳಪೆ ಗುಣಮಟ್ಟದ ಸಾಮಾಗ್ರಿಗಳನ್ನು ಖರೀದಿಸಿರುವುದು ಮತ್ತು ಕಾಮಗಾರಿಗಳನ್ನು ನಡೆಸಿ ಮನರೇಗಾ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಿದ ಕಾರ್ಮಿಕರಿಗೆ ಹಣ ಬಿಡುಗಡೆ ಮಾಡದೇ ಅವರಿಗೆ ಬೇಕಾದ ಜಾಬ್ ಕಾರ್ಡ್ಗಳಿಗೆ ಹಣ ಬಿಡುಗಡೆ ಮಾಡಿ, ಕಳಪೆ ಗುಣಮಟ್ಟದ ಕಾಮಗಾರಿಗಳನ್ನು ನಿಯಮಬಾಹಿರವಾಗಿ ನಿರ್ವಹಿಸಿದ್ದಾರೆ. ಪಂಚಾಯತ್ ರಾಜ್ ಅಧಿನಿಯಮಗಳನ್ನು ಉಲ್ಲಂಘನೆ ಮಾಡಿ ಹಲವಾರು ಇ-ಸ್ವತ್ತುಗಳನ್ನು ಮಾಡಿರುವ ಮುರುಕನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಮತ್ತು ಬಿಲ್ ಕಲೆಕ್ಟರ್ ರೈತನಿಂದ ಹಣ ಪಡೆಯುವಾಗಲೇ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಇವರ ಬಗ್ಗೆ ಇಲಾಖೆಯು ತನಿಖೆ ನಡೆಸಿ ಪಿಡಿಒಗೆ ಲೋಕಾಯುಕ್ತ ನ್ಯಾಯಾಲಯದಿಂದ ತೀರ್ಪು ನೀಡುವ ತನಕ ತಮ್ಮ ಇಲಾಖೆಯಲ್ಲಿ ಯಾವುದೇ ರೀತಿಯ ಹುದ್ದೆಗಳನ್ನು ನೀಡಬಾರದು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನೆ
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಅಗ್ರಹಾರಬಾಚಳ್ಳಿ ಶ್ರೀನಿವಾಸ್, ಪದವಿ ಘಟಕದ ಅಧ್ಯಕ್ಷ ಚೇತನ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಶಿವಪ್ರಸಾದ್, ಯುವ ಘಟಕದ ಅಧ್ಯಕ್ಷ ಆನಂದ್, ಹೊನ್ನೇನಹಳ್ಳಿ ಸ್ವಾಮಿಗೌಡ, ಕಿಕ್ಕೇರಿ ಹೋಬಳಿ ಅಧ್ಯಕ್ಷ ಪದ್ಮನಾಭ, ಕಸಬಾ ಹೋಬಳಿ ಅಧ್ಯಕ್ಷ ಅನಿಲ್ ಗೌಡ, ಕಾಮನಹಳ್ಳಿ ತಿಮ್ಮೇಗೌಡ, ಹೊಸಹೊಳಲು ಸಂಜೀವ್, ಅಜಯ್, ಯುವ ಘಟಕ ಕಾರ್ಯದರ್ಶಿ ಮನು, ಸಂಚಾಲಕ ಜಹಿರ್, ಮಂಜು, ಹರೀಶ್, ನಂಜುಂಡ, ಚೇತನ್, ನಜೀರ್, ಸಮೀರ್ ಸೇರಿದಂತೆ ಇತರರು ಇದ್ದರು.