ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅವರ ಕಾರ್ಯವೈಖರಿ ವಿರೋಧಿಸಿ ಬೀದರ್ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಬೆಂಗಳೂರಿನಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.
ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ರಾಜಶೇಖರ ಪಾಟೀಲ ಹುಮನಾಬಾದ್, ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ, ಕೆ. ಪುಂಡಲೀಕರಾವ್ ನೇತೃತ್ವದಲ್ಲಿ ಜಿಲ್ಲೆಯ ಹಲವು ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಜಿಲ್ಲಾ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ವಿವರಿಸಿದರು.
ʼಬೀದರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಉಳಿಯಬೇಕಾದರೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅವರನ್ನು ಬದಲಿಸಬೇಕು. ಸಮಸ್ಯೆ ಪರಿಹಾರ ಆಗುವವರೆಗೆ ನಿಗಮ-ಮಂಡಳಿ ನಾಮ ನಿರ್ದೇಶನ ಮಾಡಬಾರದು, ಈಗಾಗಲೇ ನಾಮನಿರ್ದೇಶನ ಮಾಡಿದವರ ಹೆಸರುಗಳನ್ನು ಮರು ಪರಿಶೀಲಿಸಿ, ಪಕ್ಷದ ನಿಷ್ಠಾವಂತರನ್ನು ನೇಮಕ ಮಾಡಬೇಕುʼ ಎಂದು ಆಗ್ರಹಿಸಿದರು.
ʼಜಿಲ್ಲೆಯಲ್ಲಿ ‘ಡಿ’ ಗ್ರುಪ್ ನೌಕರರ ನೇಮಕಾತಿಯಲ್ಲಿ ಯಾವುದೇ ರೋಸ್ಟರ್ ಪಾಲಿಸುತ್ತಿಲ್ಲ. ರಾಜ್ಯ ಸರ್ಕಾರ ಹೊರಡಿಸಿದ ಸುತ್ತೋಲೆಗೂ ಬೆಲೆ ಇಲ್ಲ. ತಾನು ಸೂಚಿಸಿದವರನ್ನೇ ನೇಮಕ ಮಾಡಿಕೊಳ್ಳಬೇಕೆಂದು ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಗಳು ಬಿಜೆಪಿ ಮನಸ್ಥಿತಿ ಹೊಂದಿದ್ದಾರೆ. ಇದರಿಂದ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಬಹಳ ಸಮಸ್ಯೆಯಾಗುತ್ತಿದೆ. ಯಾವುದೇ ಕೆಲಸಗಳಾಗುತ್ತಿಲ್ಲ. ಬಿಜೆಪಿ ಶಾಸಕರು, ನಾಯಕರು ಹೇಳಿದ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಉಸ್ತುವಾರಿ ಸಚಿವರು ಸೂಚಿಸಿದ್ದಾರೆʼ ಎಂದು ದೂರಿದ್ದಾರೆ.
ಕಳೆದ ಹಲವು ವರ್ಷಗಳಿಂದ ಜಿಲ್ಲಾಧ್ಯಕ್ಷರು ಯಾವುದೇ ಬ್ಲಾಕ್ ಕಾರ್ಯಕಾರಿಣಿ ಅಥವಾ ಬ್ಲಾಕ್ ಸಭೆಗಳನ್ನು ನಡೆಸಿಲ್ಲ. ಜಿಲ್ಲಾ ಕಾಂಗ್ರೆಸ್ ಸಮಿತಿ ಬಲಪಡಿಸಲು ವಿಫಲರಾಗಿದ್ದಾರೆ. ಜಿಲ್ಲಾಧ್ಯಕ್ಷರು, ಉಸ್ತುವಾರಿ ಸಚಿವರು ಹಾಗೂ ನಾಯಕರ ನಡುವೆ ಸಮನ್ವಯ ಇಲ್ಲ. ಪಕ್ಷದ ಗೆಲುವಿಗೆ ಕಾರಣರಾದ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪಕ್ಷ ಇದನ್ನೆಲ್ಲ ಗಂಭೀರವಾಗಿ ಮನಗಂಡು ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾವಣೆ ಮಾಡಿ, ಪಕ್ಷವನ್ನು ಉಳಿಸಬೇಕು. ಪಕ್ಷದಲ್ಲಿನ ಸಮಸ್ಯೆ ಇತ್ಯರ್ಥವಾಗುವವರೆಗೆ ಯಾವುದೇ ನಿಗಮ, ಮಂಡಳಿಗಳಿಗೆ ನೇಮಕಾತಿ ಮಾಡಬಾರದು ಎಂದು ಕೋರಿದ್ದಾರೆ.
ʼಕಳೆದ ಆರು ತಿಂಗಳಲ್ಲಿ ಜಿಲ್ಲೆಯಲ್ಲಿ ಹನ್ನೊಂದು ಜಾತಿ ನಿಂದನೆ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಹತ್ತು ಪ್ರಕರಣಗಳು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರ ಕ್ಷೇತ್ರದಲ್ಲೇ ನಡೆದಿವೆ. ಎಲ್ಲ ಪ್ರಕರಣಗಳಲ್ಲಿ ಕೌಂಟರ್ ಕೇಸ್ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ದಲಿತ ಸಮುದಾಯದವರು ಪ್ರತಿಭಟಿಸಿದರೆ ಅವರ ವಿರುದ್ಧ ಗೂಂಡಾ ಪ್ರಕರಣ ದಾಖಲಿಸಿ, ರೌಡಿಶೀಟ್ ಹಾಕಿಸಲು ಉಸ್ತುವಾರಿ ಸಚಿವರು ಆದೇಶಿಸಿದ್ದಾರೆ ಎಂದು ಪೊಲೀಸ್ ಇಲಾಖೆ ಹೇಳಿದೆʼ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ 9 ವರ್ಷಗಳ ಕಾಲ ವಿಶ್ವ ಹಿಂದೂ ಪರಿಷತ್ ಮೂಲ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರು ಎಂಟು ವರ್ಷಗಳಿಂದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಅವರು ವಿಶ್ವ ಹಿಂದೂ ಪರಿಷತ್ ಮನಃಸ್ಥಿತಿಯಿಂದ ಹೊರಬಂದಿಲ್ಲʼ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ : ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ
ಈ ಸಂದರ್ಭದಲ್ಲಿ ಕೆಪಿಸಿಸಿ ಸಹಕಾರ ವಿಭಾಗದ ಅಧ್ಯಕ್ಷ ಧನರಾಜ ತಾಳಂಪಳ್ಳಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮನ್ನಾನ್ ಸೇಠ್, ಪಕ್ಷದ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಶಂಕರರೆಡ್ಡಿ ಚಿಟ್ಟಾ,ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ನಾಸೀರ ಖಾನ್, ಮುಖಂಡರಾದ ವಿದ್ಯಾಸಾಗರ ಶಿಂಧೆ, ಪಂಡಿತರಾವ್ ಚಿದ್ರಿ, ಗುಂಡು ರೆಡ್ಡಿ, ಅಜ್ಮತ್ ಪಟೇಲ್, ಪ್ರದೀಪ ವಿ. ಕುಶನೂರ, ಶೇಕ್ ಹಾಜಿ ಮನಿಯಾರ, ವೈಜಿನಾಥ ಯಾನಗುಂದೆ, ಬಸಿರೊದ್ದೀನ್ ಹಾಲಹಿಪ್ಪರ್ಗಾ, ಬಸವರಾಜ ದೇಶಮುಖ ಚಿಟಗುಪ್ಪ, ಲಕ್ಷ್ಮಣರಾವ್ ಬುಳ್ಳಾ ಮತ್ತಿತರರು ಇದ್ದರು.
https://shorturl.fm/ouWOZ