ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು ಬೆಳೆಗಳು ಹಾನಿಗೊಳಗಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸರ್ಕಾರ ಬೆಳೆ ಹಾನಿ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಮಂಡಳಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಸಂಘಟನೆಯ ಪ್ರಮುಖರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತ ಅಧಿಕಾರಿಗೆ ಸಲ್ಲಿಸಿದರು.
ʼರೈತರು ಸಾಲದಲ್ಲಿ ಬದುಕಿ ಸಾಲದಲ್ಲೇ ಮರಣ ಹೊಂದುತ್ತಿರುವ ದುಸ್ಥಿತಿ ತಡೆಯಬೇಕು. ಕೆಲ ಬ್ಯಾಂಕ್ನವರು ರೈತರ ಸಾಲದ ಕುರಿತು ಕೋರ್ಟ್ಗಳಲ್ಲಿ ದಾವೆ ಹೂಡಿ ರೈತರಿಗೆ ಮಾನಸಿಕ ಕಿರುಕುಳ ನೀಡುತ್ತಿರುವುದು ನಿಲ್ಲಿಸಬೇಕು. ಕೃಷಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ರೈತ-ಕೃಷಿಕರ ಕಲ್ಯಾಣ ಮಂಡಳಿ ರಚಿಸಬೇಕುʼ ಎಂದು ಆಗ್ರಹಿಸಿದರು.
ʼರೈತರಿಗೆ ಬರುವ ಸರ್ಕಾರಿ ಸೌಲಭ್ಯ ಹಣವನ್ನು ಕೆಲ ಬ್ಯಾಂಕ್ಗಳು ನೇರವಾಗಿ ಕಡಿತ ಮಾಡುತ್ತಿರುವ ಅಕ್ರಮ ತಡೆಯಬೇಕು. ಜಿಲ್ಲೆಯ ಹಳ್ಳಿಖೇಡ(ಬಿ) ಸಮೀಪದ ಬೀದರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನಾರಂಭಿಸಿ, ಕಾರ್ಮಿಕರ ಬಾಕಿ 35 ಕೋಟಿ ಹಣ ತಕ್ಷಣ ಬಿಡುಗಡೆ ಮಾಡಬೇಕು. ರಸಗೊಬ್ಬರ ವಿತರಣೆಯಲ್ಲಿ ಆಗುತ್ತಿರುವ ಅಕ್ರಮಗಳನ್ನು ತಡೆದು, ರೈತರಿಗೆ ಸಕಾಲದಲ್ಲಿ ಲಭ್ಯವಾಗುವಂತೆ ಕ್ರಮ ವಹಿಸಬೇಕುʼ ಎಂದು ಒತ್ತಾಯಿಸಿದರು.
ರೈತರಿಗೆ ಹಗಲು ವೇಳೆಯಲ್ಲೇ ನಿರಂತರ ವಿದ್ಯುತ್ ಪೂರೈಕೆ ಒದಗಿಸಬೇಕು, ವಿದ್ಯುತ್ ಖಾಸಗೀಕರಣ ಮಸೂದೆ ಹಿಂಪಡೆಯಬೇಕು. ರೈತರ ಮತ್ತು ಕೃಷಿ ಕಾರ್ಮಿಕರ ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕು. ರೈತರು ಮತ್ತು ಕೃಷಿ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ಅಕ್ಟೋಬರ್ ತಿಂಗಳಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗುವುದುʼ ಎಂದು ಎಂದು ಎಚ್ಚರಿಸಿದರು.
ಇದನ್ನೂ ಓದಿ : ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ
ಅಖಿಲ ಭಾರತ ಕಿಸಾನ್ ಸಭೆಯ ಮುಖಂಡರಾದ ಬಾಬುರಾವ ಹೊನ್ನಾ, ಸೂರ್ಯಕಾಂತ ಮದಕಟ್ಟಿ, ನಜೀರ ಅಹ್ಮದ್, ಎಂ.ಡಿ. ಶಫಾಯತ್ ಅಲಿ, ಎಂಡಿ ವಹೀದ್ಮಿಯ್ಯಾ ಸಂತಪೂರ, ಜೈಶೀಲಾ, ಮುನಿರೋದ್ದೀನ್, ಮೋತಿರಾಮ, ಪ್ರಭು ತಗಣಿಕರ್, ರಾಮಣ್ಣಾ, ಶೀಲ ಸಾಗರ, ಸುಜನಾರಾಣಿ ಮತ್ತಿತರರು ಇದ್ದರು.