ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ ಇರಲಿದೆ ಶಿವಮೊಗ್ಗದ ಹಿಂದೂ ಸಂಘಟನಾ ಮಹಾಮಂಡಳಿಯ ವತಿಯಿಂದ ಈ ಬಾರಿ 81ನೇ ವರ್ಷದ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ಗಣೇಶೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಶಿವಮೊಗ್ಗದ ಅತಿ ದೊಡ್ಡ ಗಣಪತಿ ಉತ್ಸವ ಇದಾಗಿದ್ದು, ಈ ಬಾರಿ 11 ದಿನಗಳ ಕಾಲ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಇದೀಗ ಸಮಿತಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 11 ದಿನಗಳ ಕಾಲ ನಡೆಯುವ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಗಣಪತಿಯ ಪ್ರತಿಷ್ಠಾಪನೆಯು ಆಗಸ್ಟ್ 27, 2025 ರ ಬುಧವಾರ ಬೆಳಿಗ್ಗೆ 11:30ಕ್ಕೆ ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ನೆರವೇರಲಿದೆ.
ಗಣೇಶೋತ್ಸವದ ಪ್ರಯುಕ್ತ ಪ್ರತಿದಿನ ಸಂಜೆ 7 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಆಗಸ್ಟ್ 28 ರಂದು ‘ಹೊಂಗಿರಣ’ ತಂಡದವರಿಂದ “ಹಗ್ಗದ ಕೊನೆ” ಹಾಸ್ಯನಾಟಕ ಪ್ರದರ್ಶನ ಇರಲಿದೆ. ಆಗಸ್ಟ್ 29 ರಂದು ಚಂದ್ರಶೇಖರ ಭಟ್ ಮತ್ತು ತಂಡದಿಂದ “ಸಪ್ತಸ್ವರ ಗಾನ” ಕಾರ್ಯಕ್ರಮ ನಡೆಯಲಿದೆ. ಆಗಸ್ಟ್ 30 ರಂದು ದಾವಣಗೆರೆಯ ವಿದುಷಿ ಸಂಗೀತ ರಾಘವೇಂದ್ರ ಅವರಿಂದ “ಸುಗಮ ಸಂಗೀತ” ಹಾಗೂ ಆಗಸ್ಟ್ 31 ರಂದು ಕೆಳಕುಂಜಾಲು-ನೀಲಾವರದ ಯಕ್ಷಸಮೂಹ ಯಕ್ಷ ಕಲಾ ಪ್ರತಿಷ್ಠಾನದಿಂದ “ಯಕ್ಷಗಾನ” ಪ್ರದರ್ಶನ ಏರ್ಪಡಿಸಲಾಗಿದೆ.
ಸೆಪ್ಟೆಂಬರ್ 1 ರಂದು ‘ಕಲಾರೋಹಣ’ ತಂಡದ ಹಾಸ್ಯ ನಾಟಕ “ಅದ್ರೇಶಿ ಪರದೇಶಿಯಾದ” ಮತ್ತು ಸೆಪ್ಟೆಂಬರ್ 2 ರಂದು ಶಿವಮೊಗ್ಗದ ಶ್ರೀ ಸುಮುಖ ಕಲಾ ಕೇಂದ್ರ ಮಹಿಳಾ ಯಕ್ಷಗಾನ ಮಂಡಳಿಯಿಂದ “ನರಕಾಸುರ ವಧೆ” ಯಕ್ಷಗಾನ ಪ್ರಸಂಗ ನಡೆಯಲಿದೆ. ಸೆಪ್ಟೆಂಬರ್ 3 ರಂದು ಕೋಣಂದೂರು-ತೀರ್ಥಹಳ್ಳಿಯ ಕೆ.ಜಿ. ಶಶಿಕುಮಾರ್ ಕಾರಂತ ಮತ್ತು ವೃಂದದಿಂದ “ಗಾನಾಂಜಲಿ” ಹಾಗೂ ಸೆಪ್ಟೆಂಬರ್ 4 ರಂದು ಕೇಡಲಸರ ಶ್ರೀ ಮಹಾಗಣಪತಿ ವೀರಾಂಜನೇಯ ಕಲಾ ಪ್ರತಿಷ್ಠಾನದಿಂದ “ಸುದರ್ಶನ ವಿಜಯ” ಯಕ್ಷಗಾನ ಪ್ರಸಂಗ ಇರಲಿದೆ.
ಸೆಪ್ಟೆಂಬರ್ 5 ರಂದು ವೀರ ಶಿವಮೂರ್ತಿಯವರ ಪುಣ್ಯ ಸ್ಮರಣೆ, ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಜರುಗಲಿವೆ.
ಅಂತಿಮವಾಗಿ, ಸೆಪ್ಟೆಂಬರ್ 6, 2025 ರ ಶನಿವಾರ ಬೆಳಗ್ಗೆ 9:30ಕ್ಕೆ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ರಾಜಬೀದಿ ಉತ್ಸವ ಮತ್ತು ವಿಸರ್ಜನೆ ನಡೆಯಲಿದೆ.