“ಅರ್ಥವ್ಯವಸ್ಥೆಯ ಕುರಿತು ಭಾವುಕವಾಗಿ ಮಾತನಾಡಲು ಸಾಧ್ಯವಿಲ್ಲ. ಆದರೆ ನಮ್ಮ ಮಾಧ್ಯಮಗಳು ಗ್ಯಾರಂಟಿಗಳ ಬಗ್ಗೆ ಎಮೋಷನಲ್ ಆಗಿ ವರ್ತಿಸುತ್ತಿವೆ” ಎಂದು ರಾಜಕೀಯ ವಿಶ್ಲೇಷಕರಾದ ಡಾ.ಬಿ.ಸಿ.ಬಸವರಾಜು ವಿಷಾದಿಸಿದರು.
ಜಾಗೃತ ಕರ್ನಾಟಕದ ವತಿಯಿಂದ ಬೆಂಗಳೂರಿನ ಸ್ಕೌಟ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ನಡೆದ ’ನಮ್ಮ ಕರ್ನಾಟಕ ನಮ್ಮ ಮಾದರಿ’ ಚಿಂತನಾ ಸಮಾವೇಶದ ಗೋಷ್ಠಿ-1ರಲ್ಲಿ ಅವರು ಮಾತನಾಡಿದರು.
’ಕಲ್ಯಾಣ ಕಾರ್ಯಕ್ರಮಗಳ ಆರ್ಥಿಕತೆ’ ವಿಷಯ ಕುರಿತು ಬೆಳಕು ಚೆಲ್ಲಿದ ಅವರು, “ಅರ್ಥಶಾಸ್ತ್ರವು ಅಂಕಿ-ಅಂಶಗಳ ಮೂಲಕ ಮಾತನಾಡುತ್ತದೆಯೇ ಹೊರತು ಭಾವನಾತ್ಮಕವಾಗಿ ಅಲ್ಲ. ಆದರೆ, ನಮ್ಮ ಮಾಧ್ಯಮಗಳು ಭಾವುಕವಾಗಿವೆ’ ಎಂದು ಟೀಕಿಸಿದರು.
“ಮಾಧ್ಯಮಗಳು ಆರ್ಥಿಕ ತಜ್ಞರನ್ನು ಕೂರಿಸಿ ಮಾತನಾಡುವುದನ್ನು ಬಿಟ್ಟು ತಮ್ಮ ಆಲೋಚನೆಗೆ ತಕ್ಕಂತೆ ಕಾರ್ಯಕ್ರಮ ರೂಪಿಸುತ್ತಿವೆ. ರಾಜ್ಯ ದಿವಾಳಿಯಾಗುತ್ತದೆ, ಗ್ಯಾರಂಟಿಗಳಿಂದ ಜನರು ಸೋಮಾರಿಗಳಾಗುತ್ತಾರೆ ಎಂದು ಬಿಂಬಿಸುತ್ತಿರುವುದರಿಂದ ನಾವಿಂದು ಮಾತನಾಡಬೇಕಾಗಿದೆ. ಗ್ಯಾರಂಟಿ ಕಾರ್ಯಕ್ರಮಗಳಿಂದ ಜನರ ಕೊಳ್ಳುವ ಶಕ್ತಿ ವೃದ್ಧಿಸುತ್ತದೆ. ಇದರಿಂದ ಆರ್ಥಿಕತೆ ಬೆಳೆಯುತ್ತದೆ” ಎಂದು ಅವರು ಮನದಟ್ಟು ಮಾಡಿದರು.
ಈ ಸುದ್ದಿ ಓದಿದ್ದೀರಾ: ದೇವರಾಜ ಅರಸು ನನ್ನ ಹೃದಯವನ್ನು ಗಾಢವಾಗಿ ತಟ್ಟಿದ ನಾಯಕ – ಪ್ರೊ. ಜೇಮ್ಸ್ ಮ್ಯಾನರ್, ಲಂಡನ್
“ಕಳೆದ ಕೆಲವು ವರ್ಷಗಳಲ್ಲಿ ಮೇಲ್ಮಧ್ಯಮ ಮತ್ತು ಶ್ರೀಮಂತರ ಖರೀದಿ ಶಕ್ತಿ ವೃದ್ಧಿಸಿದೆ. ದುಬಾರಿ ಕಾರುಗಳು, ದುಬಾರಿ ಮೊಬೈಲ್ಗಳ ಮಾರಾಟ ಹೆಚ್ಚಿದ್ದರೆ ಬಡವರು ಮತ್ತು ಮಧ್ಯಮ ವರ್ಗದ ಜನರು ತಮ್ಮ ಅಗತ್ಯಕ್ಕನುಗುಣವಾದ ಮೊಬೈಲ್, ದ್ವಿಚಕ್ರ ವಾಹನಗಳ ಖರೀದಿಯನ್ನು ಕಡಿಮೆ ಮಾಡಿದ್ದಾರೆ ಎಂಬುದನ್ನು ಅಂಕಿ ಅಂಶಗಳು ಹೇಳುತ್ತಿವೆ. ಎಫ್ಎಂಸಿಜಿ ಕಂಪನಿಗಳ ವಹಿವಾಟು ಕುಸಿದಿದೆ. ಅಂದರೆ ಬಡ, ಮಧ್ಯಮ ವರ್ಗದವರ ಸಂಪಾದನೆ ಕಡಿಮೆಯಾಗಿದೆ ಎಂದರ್ಥ. ಇಂತಹ ಸಂದರ್ಭದಲ್ಲಿ ಕಲ್ಯಾಣ ಕಾರ್ಯಕ್ರಮಗಳು ಜನರಲ್ಲಿ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತವೆ” ಎಂದು ಅವರು ವಿವರಿಸಿದರು.
“ಗ್ಯಾರಂಟಿಗಳಿಂದ ಜನರು ಸೋಮಾರಿಗಳಾಗುತ್ತಾರೆ ಎಂಬುದು ಸುಳ್ಳು. ಜನರ ಕೈಗೆ ಹಣವನ್ನು ನೀಡಿದರೆ ಅವರು ತಮ್ಮ ಅಗತ್ಯಗಳಿಗೆ ಖರ್ಚು ಮಾಡುತ್ತಾರೆ. ಖರ್ಚು ಮಾಡದೆ ಕೂಡಿಟ್ಟರೆ ಮಾತ್ರ ರಾಜ್ಯ ದಿವಾಳಿಯಾಗುತ್ತವೆ. ಆದರೆ ಈವರೆಗಿನ ಅಧ್ಯಯನಗಳು ಹೇಳುವ ಪ್ರಕಾರ ಒಬ್ಬ ವ್ಯಕ್ತಿಯ ಸಂಪಾದನೆ 25 ರೂ ಹೆಚ್ಚಾದರೆ ಅದರಲ್ಲಿ ಕನಿಷ್ಠ 18 ರೂಪಾಯಿ ಖರ್ಚು ಮಾಡುತ್ತಾನೆ” ಎಂದು ಅವರು ತಿಳಿಸಿದರು.
“ಬಹುಸಂಖ್ಯಾತರ ಕೈಗೆ ಕೊಡುವ ಹಣ ಅದು ಖರ್ಚಾಗಿ ಮತ್ತೆ ಆರ್ಥಿಕತೆ ವೃದ್ಧಿಯಾಗುತ್ತದೆ. ಕಲ್ಯಾಣ ಕಾರ್ಯಕ್ರಮಗಳಿಂದ ದಿವಾಳಿಯಾಗುವಂತಿದ್ದರೆ ಅತಿಹೆಚ್ಚು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದ ತಮಿಳುನಾಡು ಈಗಾಗಲೇ ದಿವಾಳಿಯಾಗುತ್ತಿತ್ತು. ಹಾಗೆ ಆಗಿಲ್ಲ. ಬದಲಾಗಿ ಮಹಿಳೆಯರು ಉದ್ಯೋಗದಲ್ಲಿ ಭಾಗಿಯಾಗಿರುವುದು ಹೆಚ್ಚಿದೆ. ದೇಶದ ಅಂಕಿ-ಅಂಶಗಳಿಗೆ ಹೋಲಿಸಿದರೆ ತಮಿಳುನಾಡಿನಲ್ಲಿ ಮಹಿಳೆಯರ ಉದ್ಯೋಗಶೀಲತೆ ಹೆಚ್ಚಿದೆ. ನಿಜವಾದ ಬಿಟ್ಟಿ ಭಾಗ್ಯವನ್ನು ಅನುಭವಿಸುತ್ತಿರುವುದು ಬಂಡವಾಳಶಾಹಿಗಳು. ಸರ್ಕಾರ ಮಾಡಬೇಕಾಗಿರುವ ಸರ್ಕಾರ ಬಡವರ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕು. ಒಂದು ಕೈಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವಂತಹದ್ದು ಆಗಬಾರದು” ಎಂದು ಅವರು ಆಶಿಸಿದರು.
“ಶ್ರೀಮಂತರು, ಮೇಲ್ಮಧ್ಯಮ ವರ್ಗದವರು ಅಭಿವೃದ್ಧಿ ಹೊಂದಿದ್ದಾರೆಂದರೆ ಅದಕ್ಕೆ ಕಾರಣ ಅವರು ಬುದ್ಧಿವಂತರು ಎಂದಲ್ಲ. ದೇಶದ ಆರ್ಥಿಕ ನೀತಿಗಳು ಅವರ ಪರವಾಗಿವೆ, ಅಷ್ಟೇ. ಗ್ಯಾರಂಟಿಗಳಿಗೆ ₹50 ಸಾವಿರ ಕೋಟಿ ನೀಡಬೇಕಾಗಿರುವುದು ದೊಡ್ಡ ಮೊತ್ತವಾಗಿ ಕಂಡಿದೆ. ಕರ್ನಾಟಕ ಸರ್ಕಾರದ ಕಾರ್ಯಕ್ರಮಗಳನ್ನು ಟೀಕಿಸಿರುವ ಪ್ರಧಾನಿ ಮೋದಿಯವರು ತಮ್ಮದೇ ಪಕ್ಷ ಅಧಿಕಾರದಲ್ಲಿರುವ ಮಧ್ಯಪ್ರದೇಶದಲ್ಲಿ ಮಹಿಳೆಯರಿಗೆ ಮಾಸಿಕವಾಗಿ ಒಂದೂವರೆ ಸಾವಿರ ರೂ. ನೀಡುವ ಯೋಜನೆಯನ್ನು ಉದ್ಘಾಟಿಸಿದ್ದಾರೆ. ಇಲ್ಲಿ ಮೋಹನ್ ದಾಸ್ ಪೈ ಅಂಥವರು ಗ್ಯಾರಂಟಿಗಳನ್ನು ವಿರೋಧಿಸುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
‘ಕರ್ನಾಟಕ ಮಾದರಿಯಲ್ಲಿ ಪ್ರಾದೇಶಿಕ ಅಸಮಾನತೆಯ ಸಮಸ್ಯೆ’ ವಿಷಯ ಕುರಿತು ಮಾತನಾಡಿದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ನ ಸಹಾಯಕ ಪ್ರಾಧ್ಯಾಪಕಿ ಡಾ.ಸ್ವಾತಿ ಶಿವಾನಂದ್, “ಹೈದ್ರಾಬಾದ್ ಕರ್ನಾಟಕ ಹಿಂದುಳಿಯಲು ಈ ಹಿಂದೆ ನಿಜಾಮರ ಆಳ್ವಿಕೆ ಮಾಡಿದ್ದೇ ಕಾರಣ ಎಂಬ ಮಾತುಗಳನ್ನಾಡುತ್ತಾರೆ. ಆದರೆ ಮೈಸೂರು ಪ್ರಾಂತ್ಯದಲ್ಲಿ ಜಾರಿಗೆ ತಂದ ಕಾರ್ಯಕ್ರಮಗಳು ಹೈದ್ರಾಬಾದ್ ಪ್ರಾಂತ್ಯದಲ್ಲೂ ಜಾರಿಗೆ ಬಂದಿದ್ದವು” ಎಂದ ಅವರು ಕರ್ನಾಟಕ ಏಕೀಕರಣ ಇತಿಹಾಸದ ಏಳುಬೀಳುಗಳನ್ನು, ಚರ್ಚೆಗಳನ್ನು ಪ್ರಸ್ತಾಪಿಸಿದರು.
“ಎಪ್ಪತ್ತರ ದಶಕದ ಆರಂಭದಲ್ಲಿ ಉತ್ತರ ಕರ್ನಾಟಕದಲ್ಲಿ ಹುಟ್ಟಿಕೊಂಡ ಸಂಘಟನೆಗಳು ಮೈಸೂರು ಪ್ರಾಂತ್ಯದೊಂದಿಗೆ ಸೇರುವುದನ್ನು ವಿರೋಧಿಸಿದ್ದವು. ತಮಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕೆಂಬ ಆಗ್ರಹ ಮಾಡಿದ್ದವು. ಮೈಸೂರು ಸಂಸ್ಥಾನವು ಶೇಷಾದ್ರಿ ಅಯ್ಯರ್ ನೇತೃತ್ವದಲ್ಲಿ ನಡೆಸಿದ ಸಮೀಕ್ಷೆಯು ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂಬುದನ್ನು ಪ್ರಸ್ತಾಪಿಸಿತ್ತು. ಹಿಂದುಳಿದ ಪ್ರದೇಶಗಳು ನಮ್ಮೊಂದಿಗೆ ಸೇರಿಕೊಂಡರೆ ನಮಗೆ ತೊಂದರೆಯಾಗುತ್ತದೆ ಎಂಬ ವಾದವನ್ನು ಮಾಡಲಾಗುತ್ತಿತ್ತು. ಆದರೆ ಉತ್ತರ ಕರ್ನಾಟಕದ ಕೆಲವು ಭಾಗಗಳು ಕೆಲವು ವಿಚಾರಗಳಲ್ಲಿ ಮೈಸೂರಿಗಿಂತ ಹೆಚ್ಚಿನ ಅಭಿವೃದ್ಧಿಯನ್ನು ಕಂಡಿದ್ದವು” ಎಂದು ಇತಿಹಾಸವನ್ನು ತೆರೆದಿಟ್ಟರು. ಏಕೀಕರಣದ ಸಂದರ್ಭದಲ್ಲಿ ಆದ ಚರ್ಚೆಗಳನ್ನು ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
ಸಾಮಾಜಿಕ ನ್ಯಾಯದಲ್ಲಿ ಕರ್ನಾಟಕ ಮುಂದಿದೆ: ಡಾ.ಪ್ರದೀಪ್ ರಮಾವತ್
ಗುವಾಹಟಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನಸ್ಸ್ ಸಹ ಪ್ರಾಧ್ಯಾಪಕ ಡಾ.ಪ್ರದೀಪ್ ರಮಾವತ್ ಅವರು ’ಕರ್ನಾಟಕ ಸಾಮಾಜಿಕ ನ್ಯಾಯ: ಸವಾಲು ಮತ್ತು ಸಾಧ್ಯತೆಗಳು’ ವಿಷಯದ ಕುರಿತು ಮಾತನಾಡಿ, “ಬೇರೆ ರಾಜ್ಯಗಳಿಗೆ ಹೋಲಿಸಿದರೆ ಸಾಮಾಜಿಕ ನ್ಯಾಯದಲ್ಲಿ ಕರ್ನಾಟಕ ಮುಂದೆ ಇದೆ. ಏರುಗತಿಯ ಪ್ರಗತಿ ಸಾಧಿಸಿದೆ” ಎಂದು ಶ್ಲಾಘಿಸಿದರು.
“ಮೈಸೂರು ಒಡೆಯರ ಕಾಲದಲ್ಲಿ ಮಿಲ್ಲರ್ ಆಯೋಗದ ಮೂಲಕ ಬ್ರಾಹ್ಮಣೇತರರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲಾಯಿತು, ದೇವರಾಜ ಅರಸು ಮತ್ತು ಬಸವಲಿಂಗಪ್ಪನಂಥವರ ಅಧಿಕಾರದಿಂದಾಗಿ ದಲಿತರಿಗೆ ಭೂಮಿ ದೊರಕಿತು. ಅಂದು ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರಿಂದಾಗಿ ಕಡಿಮೆ ವ್ಯಾಸಂಗ ಮಾಡಿದವರೂ ಸರ್ಕಾರಿ ಉದ್ಯೋಗ ಪಡೆಯಲು ಸಾಧ್ಯವಾಯಿತು” ಎಂದು ಅವರು ಸ್ಮರಿಸಿದರು.
ಈ ಸುದ್ದಿ ಓದಿದ್ದೀರಾ: ಮೇಲ್ಮಟ್ಟದ ಮಹಿಳಾ ರಾಜಕೀಯ ಪ್ರಾತಿನಿಧ್ಯ ಕರ್ನಾಟಕದ ಮಾದರಿಯಾಗಲಿ: ಡಾ.ಸಬೀಹಾ ಭೂಮಿಗೌಡ
“ಮಂಡಲ್ ವರದಿಗೆ ಬುನಾದಿ ಹಾಕಿಕೊಟ್ಟಿದ್ದೇ ಕರ್ನಾಟಕ ಮಾದರಿ. ಮಂಡಲ್ ವರದಿಯ ವೇಳೆಗಾಗಲೇ ಕರ್ನಾಟಕದಲ್ಲಿ ಹಾವನೂರು ವರದಿಯ ಅನ್ವಯ ಒಬಿಸಿಗಳಿಗೆ ರಾಜಕೀಯ ಮೀಸಲಾತಿಯನ್ನು ನೀಡಲಾಗಿತ್ತು. ಜೊತೆಗೆ ಹಾವನೂರರು ಮಂಡಲ್ ವರದಿಯ ಸದಸ್ಯರೂ ಆಗಿದ್ದರು” ಎಂದರು.
“ತನ್ನಂತೆ ಪರರ ಬಗೆವ ನಾಡು” ವಿಷಯ ಕುರಿತು ಸಂಸ್ಕೃತಿ ಚಿಂತಕರಾದ ಪ್ರೊ.ರಹಮತ್ ತರೀಕೆರೆ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಬಸವರಾಜ್ ಎಂ.ಬಿರಾದಾರ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.