ಮದ್ಯ ಮಾರಾಟಕ್ಕೆ ಸರ್ಕಾರ ಎಂಎಸ್ಐಎಲ್ಗೆ ಅನುಮತಿ ನೀಡಿರುವುದನ್ನು ಹಾಗೂ ಅಕ್ರಮ ಮದ್ಯ ಮಾರಾಟವನ್ನು ಖಂಡಿಸಿ ಮದ್ಯಪಾನ ವಿರೋಧಿ ಆಂದೋಲನದ ಕಾರ್ಯಕರ್ತರು ಮತ್ತು ಹಲವು ಗ್ರಾಮಸ್ಥರು ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
“ಜಿಲ್ಲೆಯ ಕೊಪ್ಪ ತಾಲೂಕು ಮೇಗುಂದಾ ಹೋಬಳಿಯ ಅಗಳಗಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಾರು, ಮೇಗೂರು ಹೆಗ್ಗಾರುಕೊಡಿಗೆ, ಎತ್ತಿನಟ್ಟಿ ಸುತ್ತ ಮುತ್ತಲ ಗ್ರಾಮಗಳ ಬಹುತೇಕ ಕಡೆ ಆಕ್ರಮ ಸರಾಯಿ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಈ ಗ್ರಾಮಗಳಲ್ಲಿ ವಾಸಿಸುವ ಜನರು ಕೂಲಿ ಕಾರ್ಮಿಕರು ಬಡವರು ಹಾಗೂ ಪ್ರಸ್ತುತ ಯುವಕರು ಸಾರಾಯಿಗೆ ದಾಸರಾಗುತ್ತಿದ್ದಾರೆ. ಕುಡಿತದ ಚಟದಿಂದ ಚಿಕ್ಕ ವಯಸ್ಸಿನಲ್ಲೇ ಅನಾರೋಗ್ಯ ಪೀಡಿತರಾಗಿ ಸಾಯುತ್ತಿದ್ದಾರೆ. ಈ ಹಿಂದೆ ಮೇಗೂರಿನ ಸಮೀಪದ ಕಿತ್ತೆಗೂಳಿ ಗ್ರಾಮದಲ್ಲಿ ಒಂದೇ ಕುಟುಂಬದ ಮೂರು ಮಂದಿ ಕುಡಿತದಿಂದ ಮೃತಪಟ್ಟಿದ್ದರು. ಈ ಘಟನೆಯನ್ನು ಮುಂದಿಟ್ಟುಕೊಂಡು ಗ್ರಾಮದ ನೂರಾರು ಮಹಿಳೆಯರು ಅಕ್ರಮ ಸಾರಾಯಿ ಮಾರಾಟ ವಿರೋಧಿಸಿ ಈ ಹಿಂದೆಯೇ ಪ್ರತಿಭಟನೆ ಮಾಡಿದ್ದೆವು. ಆದರೆ, ಯಾವುದೇ ಪ್ರಯೋಜನವಾಗಿಲ್ಲ” ಎಂದು ಆರೋಪಿಸಿದರು.

“ಆಕ್ರಮವಾಗಿ ಸಾರಾಯಿ ಮಾರಾಟ ಮಾಡುವವರ ಮೇಲೆ ಈವರೆಗೆ ಯಾವುದೇ ಕಠಿಣ ಕಾನೂನು ಕ್ರಮ ಕೈಗೊಂಡಿಲ್ಲ. ಅಕ್ರಮ ಸಾರಾಯಿ ಮಾರಾಟದ ನಡುವೆ ಈಗ ಅಗಳಗಂಡಿಯ ಸಮೀಪ ಕಟ್ಟಿಗೆ ಎಂಬಲ್ಲಿ ಎಂಎಸ್ಐಎಲ್ ಪ್ರಾರಂಭಿಸುವ ಪ್ರಯತ್ನ ನಡೆಯುತ್ತಿರುವುದು ಖಂಡನೀಯ” ಎಂದು ಗ್ರಾಮದ ಮಹಿಳೆಯರು ಸೇರಿದಂತೆ ಸಾರ್ವಜನಿಕರು, ಸಂಘ ಸಂಸ್ಥೆಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
“ಸರ್ಕಾರಿ ಮದ್ಯ ಮಾರಾಟ ಕೇಂದ್ರವನ್ನು ಪ್ರಾರಂಭಿಸುವ ಜಾಗವು ಶೃಂಗೇರಿ-ಜಯಪುರ-ಚಿಕ್ಕಮಗಳೂರು ಹೆದ್ದಾರಿಯ ಕೆಲವೇ ಅಂಗಡಿಗಳ ದೂರದಲ್ಲಿದೆ. ಪಕ್ಕದಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಬಾವಿ, ಅಂಗನವಾಡಿ, ಬಸ್ ನಿಲ್ದಾಣವಿದೆ. ನಿತ್ಯ ಶಾಲಾ ಮಕ್ಕಳು ಸೇರಿದಂತೆ ಮಹಿಳೆಯರು ಬಸ್ಗಾಗಿ ಕಾಯುತ್ತಾರೆ. ಪಕ್ಕದಲ್ಲೇ ಸರ್ಕಾರಿ ಪ್ರೌಢಶಾಲೆ ಇದೆ. ಅದೇ ಮಾರ್ಗದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಾಲೆಗೆ ಹೋಗಲು ಅದೇ ದಾರಿಯಲ್ಲಿ ಓಡಾಡಬೇಕಿದೆ. ಈ ಜಾಗದಲ್ಲಿ ಮದ್ಯ ಮಾರಾಟ ಪ್ರಾರಂಭ ಮಾಡಿದರೆ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ, ಮಹಿಳೆಯರಿಗೆ ತೀವ್ರ ಹಿಂಸೆಯಾಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಕ್ರಮ ಸಾರಾಯಿ ಮಾರಾಟದಿಂದ ಹಲವು ಕುಟುಂಬಗಳು ಬೀದಿ ಪಾಲಾಗುತ್ತವೆ. ಕಡಿಮೆ ಬೆಲೆಗೆ ಸರ್ಕಾರಿ ಮದ್ಯ ಮಾರಾಟ ಪ್ರಾರಂಭವಾದರೆ ಈ ಭಾಗದಲ್ಲಿ ಅಕ್ರಮ ಚಟುವಟಿಕೆ, ಕುಡುಕರ ಹಾವಳಿ ಹೆಚ್ಚಾಗಿ ಕಾನೂನು ಸುವ್ಯವಸ್ಥೆ ಹದಗೆಡಲಿದೆ. ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ, ನಿವೇಶನ, ವಸತಿ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಜನ ಪ್ರತಿನಿಧಿಗಳು ಶಾಸಕರು ಅಧಿಕಾರಿಗಳು ಜನರ ಸಮಸ್ಯೆಗಳನ್ನು ಪರಿಹರಿಸಬೇಕು, ಸ್ಥಳೀಯರನ್ನು ಕುಡಿತದ ದಾಸರನ್ನಾಗಿಸುವ ಬದಲು ಜನರ ಬದುಕಿಗೆ ಬೇಕಾಗಿರುವ ಅಗತ್ಯ ಮೂಲ ಸೌಕರ್ಯ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸಮರ್ಪಕ ವಿದ್ಯುತ್ ಪೂರೈಸುವಂತೆ ರೈತಸಂಘ ಒತ್ತಾಯ
“ಅಕ್ರಮ ಸಾರಾಯಿ ಮಾರಾಟ ನಿಯಂತ್ರಿಸಬೇಕು. ಸರ್ಕಾರಿ ಮದ್ಯ ಮಾರಾಟ ಕೇಂದ್ರಕ್ಕೆ ಅನುಮತಿ
ನೀಡಬಾರದು. ಗ್ರಾಮಗಳಲ್ಲಿ ಮೂಲ ಸೌಲಭ್ಯ ಒದಗಿಸಬೇಕು. ಇಲ್ಲವಾದಲ್ಲಿ ಈ ಎಲ್ಲ ಗ್ರಾಮಗಳ
ಮಹಿಳೆಯರು ಪ್ರಗತಿಪರ ಸಂಘಟನೆಗಳೊಂದಿಗೆ ಒಗ್ಗೂಡಿ ತೀವ್ರ ಹೋರಾಟ ಮಾಡುತ್ತೇವೆ. ಮುಂದಿನ ದಿನದಲ್ಲಿ ಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.