ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸದಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಮೈಸೂರಿನ ದಕ್ಷಿಣ ನೀರಾವರಿ ವಲಯ ಮುಖ್ಯ ಅಭಿಯಂತರರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, “ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ನೀರಾವರಿ ಜಲಾಶಯಗಳಿಗೆ ಒಳಹರಿವು ಅತ್ಯಂತ ಕಡಿಮೆಯಾಗಿದೆ. ಅಲ್ಲದೆ ಈವರೆಗೆ ಜಲಾಶಯಗಳ ನೀರಿನ ಶೇಖರಣೆಯೂ ಕಡಿಮೆ ಇರುವುದು ಕಳವಳಕಾರಿಯಾಗಿದೆ. ಉಪಯೋಗಿಸಲು ಸಾಧ್ಯವಿರುವ ನೀರು ಕಡಿಮೆ ಇದ್ದು, ಕಾವೇರಿ ನೀರು ನಿಯಂತ್ರಣ ಸಮಿತಿಯ ನಿರ್ದೇಶನದಂತೆ, ರಾಜ್ಯದ ಜಲಾಶಯಗಳಿಂದ ತಮಿಳುನಾಡಿಗೆ 15 ದಿನಗಳವರೆಗೆ 5 ಸಾವಿರ ಕ್ಯೂಸೆಕ್ ನೀರು ಹರಿಸಿದರೆ ಅಚ್ಚುಕಟ್ಟಿನಲ್ಲಿ ಬೆಳೆದಿರುವ ಫಸಲು ಉಳಿಸುವುದಿರಲಿ, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುತ್ತದೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಬರಪೀಡಿತ ಪ್ರದೇಶ ಘೋಷಣೆಗೆ ರೈತ ಸಂಘ ಆಗ್ರಹ
ಕಾವೇರಿ ನೀರು ನಿಯಂತ್ರಣ ಸಮಿತಿಯ ತೀರ್ಮಾನ ಖಂಡನೀಯವಾಗಿದ್ದು, ರಾಜ್ಯದಿಂದ ತಮಿಳುನಾಡಿಗೆ ನೀರು ಬಿಡದೆ ರಾಜ್ಯದ ರೈತರನ್ನು ರಕ್ಷಿಸಬೇಕು. ತಮಿಳುನಾಡಿಗೆ ನೀರು ಹರಿಸದಿರಲು ಸ್ಪಷ್ಟ ತೀರ್ಮಾನ ಮಾಡಿ, ಕಾನೂನು ಹೋರಾಟಕ್ಕೆ ಮುಂದಾಗಬೇಕು. ಅಗತ್ಯ ಇರುವ ಇತರೆ ಎಲ್ಲ ಕ್ರಮಗಳನ್ನು ಅನುಸರಿಸಿ, ರಾಜ್ಯದ ರೈತರನ್ನು ರಕ್ಷಿಸಲೇಬೇಕು” ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ರೈತ ಯುವಮುಖಂಡ ಪ್ರಸನ್ನ ಎನ್ ಗೌಡ ಸೇರಿದಂತೆ ಹಲವು ಮಂದಿ ರೈತರು ಇದ್ದರು.