ಸಂಶೋಧಕ ಡಾ. ಎಂ.ಎಂ ಕಲ್ಬುರ್ಗಿಯವರನ್ನು ಭೌತಿಕವಾಗಿ ಹತ್ಯೆ ಮಾಡಿರಬಹುದು. ಆದರೆ, ಅವರ ಸಂಶೋಧನೆಗೆ ಯಾವತ್ತು ಸಾವಿಲ್ಲ ಎಂದು ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯ (ಆರ್ಸಿಎಫ್) ರಾಷ್ಟ್ರೀಯ ಮುಖಂಡ, ಪಶ್ಚಿಮ ಬಂಗಾಳದ ಅಸೀಮಗಿರಿ ಹೇಳಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧುನೂರಿನಲ್ಲಿ ಆರ್ಸಿಎಫ್ ಆಯೋಜಿಸಿದ್ದ ಕಲ್ಬುರ್ಗಿಯವರ 8ನೇ ವರ್ಷದ ಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಸತ್ಯದ ಪ್ರತಿಪಾದಕರೆಲ್ಲರನ್ನು ಒಂದೇ ತರನಾಗಿ ಹತ್ಯೆ ಮಾಡಲಾಗಿದೆ. ದಾಭೋಲ್ಕರ್, ಪಾನ್ಸಾರೆ, ಕಲ್ಬುರ್ಗಿ, ಗೌರಿ ಲಂಕೇಶರ ಸಾವುಗಳನ್ನು ಗಮನಿಸಿದರೆ, ಅವರ ವೈಚಾರಿಕ ಸಂಘರ್ಷಗಳಿಗೆ ಬಲಪಂಥೀಯವಾದಿಗಳು ಹೆದರಿದ್ದು, ಅವರನ್ನು ಹತ್ಯೆ ಮಾಡಿದ್ದಾರೆ. ಆದರೆ, ಅವರೆಲ್ಲರನ್ನೂ ಭೌತಿಕವಾಗಿ ಹತ್ಯೆ ಮಾಡಿರಬಹುದು. ಸತ್ಯಕ್ಕೆ ಸಾವಿಲ್ಲಎಂಬುದನ್ನು ಹಂತಕರು ಮರೆತಿದ್ದಾರೆ” ಎಂದು ಹೇಳಿದರು.
“ಜನತೆಗಾಗಿ ಮಡಿದ ಹುತಾತ್ಮರ ಆಶಯಗಳ ಹಾದಿಯಲ್ಲಿ ಮುನ್ನೆಡೆದು, ಕೋಮುವಾದಿಗಳ ಜನದ್ರೋಹಿ ಹುನ್ನಾರಗಳನ್ನು ಬಯಲುಗೊಳಿಸುವ ಕಾರ್ಯಭಾರಗಳಿಗೆ ಹೆಗಲೊಡ್ಡೋಣ” ಎಂದು ಕರೆ ನೀಡಿದರು.
ಬಸವ ಕೇಂದ್ರದ ಮುಖಂಡ ವೀರಭದ್ರಗೌಡ ಅಮರಾಪೂರ ಮಾತನಾಡಿ, “ಲಿಂಗಾಯತ ಧರ್ಮದ ಸತ್ಯಾನ್ವೇಷಣೆ ಕೈಗೊಂಡ ಡಾ. ಎಂ.ಎಂ ಕಲಬುರಗಿಯವರನ್ನು ಲಿಂಗಾಯತ ಧರ್ಮ ಸ್ಥಾಪಕ ಬಸವಣ್ಣ ಅವರನ್ನು ಇನ್ನಿಲ್ಲವಾಗಿಸಿದ್ದಾರೆ. ಅವರು ನಡೆದ ಹಾದಿಯನ್ನು ಸವೆಸಲು, ಅಳಿಸಿ ಹಾಕಲು ಜಗತ್ತಿನ ಯಾವುದೇ ಶಕ್ತಿಗೂ ಸಾದ್ಯವಿಲ್ಲ. ಅದು ನಿತ್ಯ ಅಜರಾಮರವಾಗಿರಲಿದೆ” ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ದಾನಪ್ಪ ನಿಲೋಗಲ್, ಹೆಚ್.ಎನ್.ಬಡಿಗೇರ , ಆರ್.ಸಿ.ಎಫ್ ನ ರಂಜಿತ್ ಮೂಜುಂದಾ ಚಿನ್ನಪ್ಪ ಕೊಟ್ರಿಕಿ, ಅಜೀಜ್ ಜಾಗೀರದಾರ, ಸಂತೋಷ, ಮಾರುತಿ, ಚಿದಾನಂದ, ಸೋಮು, ಮಾಬುಸಾಬ ಬೆಳ್ಳಟ್ಟಿ, ಹೆಚ್.ಆರ್.ಹೊಸಮನಿ, ಉಷಾ ಎಂ.ಜಿ, ರುಕ್ಮೀಣೆಮ್ಮ,ಮುದಿಯಪ್ಪ, ಅಪ್ಪಣ್ಣ,ವೆಂಕಟೇಶ ಸೇರಿದಂತೆ ವಿವಿಧ ಜನಪರ ಸಂಘಟನೆಗಳ ನೂರಾರು ಪ್ರತಿನಿಧಿಗಳು ಇದ್ದರು.