- ಶರಣರ ತತ್ವ ಸಿದ್ಧಾಂತಗಳ ಕೆಲವರ್ಗದ ಜನರಲ್ಲಿ ಆತ್ಮಭಿಮಾನ ತುಂಬಿವೆ.
- ಪಾವಗಡ ಪಟ್ಟಣದ ತಾಲೂಕಾಡಳಿತದಿಂದ ಜರುಗಿದ ನೂಲಿಯ್ಯ ಚಂದಯ್ಯನವರ ಜಯಂತಿ
ಶತ-ಶತಮಾನಗಳಿಂದ ಉಳ್ಳವರ ಬಂಧನದಲ್ಲಿದ್ದು ಜನಾಂಗದ ಶೋಚನೀಯ ಬದುಕು ಸಾಗುಸುತ್ತಿದ್ದ ಜನ ಸಮುದಾಯಕ್ಕೆ ಜೀವ ಜಲವಾಗಿ ಬಂದವರು ಬಸವವಾದಿ ಶರಣರು. ಅವರೆಲ್ಲರೂ ತಮ್ಮ ತತ್ವ ಸಿದ್ಧಾಂತಗಳ ಮುಖಾಂತರ ಕೆಲವರ್ಗದ ಜನರಲ್ಲಿ ಆತ್ಮಭಿಮಾನ ತುಂಬಿ ಸಮಾಜದಲ್ಲಿ ಗೌರವಯುತವಾಗಿ ತಲೆಯೆತ್ತಿ ಬದುಕುವಂತೆ ಮಾಡಿದ್ದಾರೆ ಎಂದು ಪಾವಗಡ ತಾಲೂಕು ಕುಳುವ ಸಮುದಾಯ ಅಧ್ಯಕ್ಷ ಕೆ ಗಂಗಪ್ಪ ಅಭಿಪ್ತಾಯಟ್ಟರು.
ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಡೆದ ನುಲಿಯ ಚಂದಯ್ಯ ಅವರ 916ನೇ ಜಯಂತಿ ಕಾರ್ಯಕ್ರಮದಲ್ಲಿ ಗಂಗಪ್ಪ ಮಾತನಾಡಿದರು. “ಶರಣ ನುಲಿಯ ಚಂದಯ್ಯ ಅವರು ಸುಮಾರು 1130 ರಲ್ಲಿ ಇಂದಿನ ವಿಜಯಪುರ ಜಿಲ್ಲೆಯ ಶಿವಣಿಗೆ ಗ್ರಾಮದಲ್ಲಿ ಜನಿಸಿದರು, ನಂತರ ಬಸವಣ್ಣನ ಕಾರ್ಯಕ್ಷೇತ್ರ ಕಲ್ಯಾಣಕ್ಕೆ ಬಂದು, ಕಲ್ಯಾಣದ ಕೆರೆಗಳಲ್ಲಿ ಸಿಗುವ ಹೊಡಿಕೆ, ಚೀಣಿ, ಮುಂತಾದ ನಾರುಗಳಿಂದ ಹಗ್ಗ ಹೊಸೆದು ಮಾರಾಟ ಮಾಡುತ್ತಿದ್ದರು. ಅದರಿಂದ ಬಂದ ಹಣದಿಂದ ಜಂಗಮ ದಾಸೋಹ ಕಾರ್ಯ ನಡೆಸುತ್ತಿದ್ದರು. ಸತ್ಯ ಪ್ರಾಮಾಣಿಕತೆ ಮತ್ತು ನಿಷ್ಠೆಯ ಬದುಕಿನಿಂದ ನೂಲಿಯ ಚಂದಯ್ಯ ಸೇರಿದಂತೆ ಎಲ್ಲಾ ವಚನಕಾರರ ಚಿಂತನೆ ಇಂದಿಗೂ ಪ್ರಸ್ತುತ ಎನಿಸುತ್ತದೆ” ಎಂದರು.
ಉಪ ತಹಸಿಲ್ದಾರ್ ನರಸಿಂಹಮೂರ್ತಿ ಮಾತನಾಡಿ, “ಕ್ರಿಸ್ತಪೂರ್ವ 1160ರ ವೇಳೆಯಲ್ಲಿ ನಡೆಯುತ್ತಿದ್ದ ಅನುಭವ ಗೋಷ್ಠಿಗಳಲ್ಲಿ ನೂಲಿಯ ಚಂದಯ್ಯನವರು ಭಾಗವಹಿಸಿರುವ ದಾಖಲೆಗಳು ಲಭ್ಯವಿವೆ, ಹಗ್ಗ ಮಾರುವ ಕಾಯಕವನ್ನು ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತಾ ಬಸವಣ್ಣನವರ ಹಾದಿಯಲ್ಲಿ ನಡೆದು ಅವರಿಗೆ ಪ್ರೀತಿ ಪಾತ್ರರಾದರು. ನುಲಿಯ ಚಂದಯ್ಯರು ಒಮ್ಮೆ ಕೆರೆಯ ನೀರಿನಲ್ಲಿ ಹುಲ್ಲು ಕೊಯ್ಯುತ್ತಿದ್ದಾಗ ತನ್ನ ಕೊರಳಲ್ಲಿದ್ದ ಇಷ್ಟಲಿಂಗ ಜಾರಿ ನೀರಿನಲ್ಲಿ ಬಿದ್ದಿತ್ತು, ಆದರೂ ಕಾಯಕದಲ್ಲಿ ಮೈ ಮೆರೆತ ಚಂದಯ್ಯರನ್ನು ಇಷ್ಟಲಿಂಗವೇ ಹಿಂಬಾಲಿಸಿ ಬಂದರೂ ಸ್ವೀಕರಿಸಲು ನಿರಾಕರಿಸಿರುವ ಬಗ್ಗೆ ಚರಿತ್ರೆಯ ಪುಟಗಳು ಹೇಳುತ್ತಿವೆ” ಎಂದು ಹೇಳಿದರು.
ಇದೇ ವೇಳೆಯಲ್ಲಿ ಅಖಿಲ ಕರ್ನಾಟಕ ಕುಳುವ ಮಹಾಸಂಘ ಮತ್ತು ಪಾವಗಡ ತಾಲೂಕು ಕುಳುವ ಮಹಾಸಂಘ ತಾಲೂಕಿನಾದ್ಯಂತ ಉಳುವ ಸಮುದಾಯದ ಜನಸಾಮಾನ್ಯರಿಗೆ ವಸತಿ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಮನವಿ ಪತ್ರ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ ? ಹೊಸ ಐಷಾರಾಮಿ ಕಾರು ಪಡೆಯಲಿರುವ 33 ಸಚಿವರು: ₹9.90 ಕೋಟಿ ಹಣ ಬಿಡುಗಡೆ
ಕಾರ್ಯಕ್ರಮದಲ್ಲಿ ಸಮಾಜದ ತಾಲ್ಲೂಕು ಕಾರ್ಯದರ್ಶಿ ವೀರಭದ್ರಪ್ಪ, ಅರಸೀಕೆರೆ ಬಂಡೆಪ್ಪ, ಶಿಕ್ಷಕ ಹನುಮಂತರಾಯಪ್ಪ, ತಿರುಮಣಿ ಗಂಗಾಧರ, ಕಂದಾಯ ಅಧಿಕಾರಿಗಳಾದ ರಾಜಗೋಪಾಲ, ರಾಜೇಶ್, ತಾಲೂಕು ಆಡಳಿತ ಸಿಬ್ಬಂದಿ ವರ್ಗದವರು, ಹಲುವ ಕುಳುವ ಮತಸ್ಥರು ಉಪಸ್ಥಿತರಿದ್ದರು.