ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಹಟ್ಟಿ ಸಮೀಪದ ಕಡ್ಡೋಣ, ತವಗ ಹಾಗೂ ರೋಡಲಬಂಡಾ ಗ್ರಾಮ ಪಂಚಾಯಿತಿಯ ಇತರೆ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಶನಿವಾರ ಸದರಿ ಗ್ರಾಮಗಳಿಗೆ ಭೇಟಿ ನೀಡಿದರು.
ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್ಎಫ್ಐ), ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ), ಕರ್ನಾಟಕ ಪ್ರಾಂತ ರೈತ ಸಂಘಟನೆ (ಕೆಪಿಆರ್ಎಸ್) ಕರ್ನಾಟಕ ಪ್ರಾಂತ ಕೂಲಿಕಾರ ಸಂಘಟನೆ ಸಂಘಟನೆಗಳ ನೇತೃತ್ವದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಎಸಿ ಕಚೇರಿ ಎದುರು ನಡೆದ ಪ್ರತಿಭಟನೆಗೆ ಮಣಿದು ತಾಲೂಕಿನ ಹಲವು ಅಧಿಕಾರಿಗಳು ಕಡ್ಡೋಣ, ತವಗ, ರೋಡಲಬಂಡಾ ಗ್ರಾಮಗಳಿಗೆ ಭೇಟಿ ಸಭೆ ನಡೆಸಿ ಸಮಸ್ಯೆಗಳನ್ನು ಪರಿಶೀಲಿಸಿ ನಿಗದಿತ ಸಮಯದಲ್ಲಿ ಪರಿಹರಿಸುವ ಬಗ್ಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ್ ವೀರಾಪುರ್ ಮಾತನಾಡಿ, “ಪ್ರತಿಭಟನೆ ಮುಗಿದು 15 ದಿನಗಳು ಕಳೆಯುತ್ತಾ ಬಂದರೂ ನೀವು ಹೋರಾಟದ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾ ಬಂದಿದ್ದೀರಿ” ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ರಸ್ತೆ ಸಂಚಾರಕ್ಕೆ ಅಡ್ಡವಾಗಿರುವ ವಿದ್ಯುತ್ ಕಂಬವನ್ನು ಇಂದೇ ತೆರವುಗೊಳಿಸುವ ಬಗ್ಗೆ ಮಾಹಿತಿ ನೀಡಿದರು.
ರೋಡಲಬಂಡ, ಯಲಗಟ್ಟ ಗ್ರಾಮಗಳ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿದ್ದು, ದುರಸ್ಥಿಗೊಳಿಸಲು ಇಒ ಸೂಚಿಸಿದರು. ಈ ಮೂರು ಗ್ರಾಮಗಳಿಗೆ ಸಿಸಿ ರಸ್ತೆ, ನೀರು, ಶಾಲೆಯ ಇತರೆ ಸಮಸ್ಯೆಗಳನ್ನು ಪರಿಶೀಲಿಸಿ ಹಂತ ಹಂತವಾಗಿ ಪರಿಹರಿಸುವುದಾಗಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಾಲಾ ಕಟ್ಟಡ ನಿರ್ಮಾಣಕ್ಕೆ ನಿವೇಶನ ಕಲ್ಪಿಸುವಂತೆ ಒತ್ತಾಯ
ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಅಮರೇಶ ಯಾದವ್, ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಜೆಸ್ಕಾಂನ ವಿಭಾಗೀಯ ಅಧಿಕಾರಿ ಬನ್ನೆಪ್ಪ, ಸಾರಿಗೆ ಇಲಾಖೆಯ ಕಂಟ್ರೋಲರ್ ದೇವಪ್ಪ, ಜಿಲ್ಲಾ ಪಂಚಾಯತ್ ಜೆಇ ತಿಪ್ಪಣ್ಣ, ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ, ಗ್ರಾ ಪಂ ಪಿಡಿಒ ಸಂಗನಗೌಡ, ಪಂಚಾಯಿತಿಯ ಸಿಬ್ಬಂದಿ, ತವಗ ಕೆಪಿಆರ್ಎಸ್ ಘಟಕದ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಬಸವರಾಜ, ಉಪಾಧ್ಯಕ್ಷ ಮಲ್ಲಣ್ಣ ಪರಸರಡ್ಡಿ, ಡಿವೈಎಫ್ಐ ಮುಖಂಡರುಗಳಾದ ಕಾಶಿಪತಿ, ಶಂಕರ್, ಸಿದ್ದಣ್ಣ, ಸಂತೋಷ್ ಕಡ್ಡೋಣಿ, ದುರುಗಪ್ಪ, ರಂಗಪ್ಪ, ದವಲ್ ಸಾಬ್ ಸೇರಿದಂತೆ ಇತರರು ಇದ್ದರು.