ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯರಾದ ಪಾಟೀಲ್ ನಾಗಲಿಂಗನಗೌಡ ಅವರಿಂದಲೇ ಮೋಟಾರು ವಾಹನ ಕಾಯ್ದೆ ಉಲ್ಲಂಘನೆಯಾಗಿದೆ. ಇವರು ಕರ್ನಾಟಕ ಸರ್ಕಾರದ ಲಾಂಛನ ಮತ್ತು ಫಲಕವನ್ನು ಕಬಳಿಕೆ ಮಾಡಿರುವುದರಿಂದ ತಕ್ಷಣ ಅವರನ್ನು ನ್ಯಾಯಿಕ ಸದಸ್ಯತ್ವದಿಂದ ವಜಾಗೊಳಿಸಬೇಕು ಎಂದು ನೈಜ ಹೋರಾಟಗಾರರ ವೇದಿಕೆ ಒತ್ತಾಯಿಸಿದೆ.
ಈ ಬಗ್ಗೆ ನೈಜ ಹೋರಾಟಗಾರರ ವೇದಿಕೆಯ ಎಚ್.ಎಂ.ವೆಂಕಟೇಶ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪತ್ರದಲ್ಲೇನಿದೆ?
ಕರ್ನಾಟಕ ಸರ್ಕಾರದ ಭೂಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಿಕ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಾಧೀಶರಾದ ಪಾಟೀಲ್ ನಾಗಲಿಂಗನಗೌಡ ರವರಿಗೆ ಸರ್ಕಾರವು ಸಂಚರಿಸಲು ಇನ್ನೋವಾ ಕಾರನ್ನು (KA 01 GA 0414) ನೀಡಿದೆ. ಆದರೆ, ಅವರು ಸ್ವಂತ ಖರೀದಿಸಿರುವ WHITE PEARL CRYSTAL CAR (KA 01 MV 8009) ಕಾರಿಗೆ ಸರ್ಕಾರದ ಲಾಂಛನ ಮತ್ತು ಕರ್ನಾಟಕ ಸರ್ಕಾರ ಎಂಬ ನಾಮಫಲಕವನ್ನು ಅಳವಡಿಸಲಾಗಿದೆ. ಇದೇ ವಾಹನದಲ್ಲಿ ನ್ಯಾಯಾಧೀಶರು ಮತ್ತು ಅವರ ಕುಟುಂಬದ ಸದಸ್ಯರು ಸಂಚರಿಸುತ್ತಿದ್ದಾರೆ” ಎಂದು ಉಲ್ಲೇಖಿಸಿದ್ದಾರೆ.
ಈ ಬಗ್ಗೆ ನಮ್ಮ ವೇದಿಕೆ ಗಮನಕ್ಕೆ ಬಂದ ತಕ್ಷಣ ಕರ್ನಾಟಕ ಸರ್ಕಾರದ ಆರ್. ಟಿ. ಓ. ಸೆಂಟ್ರಲ್ ಎಚ್.ಎಸ್.ಆರ್ ಲೇಔಟ್ ಅವರಿಗೆ ಈ ಕಾರಿನ ಸಂಖ್ಯೆಗೆ ಮತ್ತು ಮಾಲೀಕರಿಗೆ ಕರ್ನಾಟಕ ಸರ್ಕಾರದ ಲಾಂಛನವನ್ನು ಮತ್ತು ಕರ್ನಾಟಕ ಸರ್ಕಾರ ಎಂಬ ಫಲಕವನ್ನು ಅಳವಡಿಸಿ ಸಂಚರಿಸಲು ಅನುಮತಿ ನೀಡಿದ್ದೀರಾ? ನೀಡಿದ್ದಲ್ಲಿ ಅದರ ಅನುಮತಿ ಪತ್ರವನ್ನು ನೀಡುವಂತೆ ಕೇಳಲಾಗಿತ್ತು. ಇದಕ್ಕೆ ಆರ್.ಟಿ.ಓ ಸೆಂಟ್ರಲ್ ಎಚ್.ಎಸ್.ಆರ್ ಲೇಔಟ್ನಿಂದ ಮಾಹಿತಿ ನೀಡಿದ್ದು, “ಯಾವುದೇ ರೀತಿಯ ಅನುಮತಿಯನ್ನು ನೀಡಿಲ್ಲ” ಎಂದು ತಿಳಿಸಿದ್ದಾರೆ.
“ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆ ಇಂತಹ ನಾಮಫಲಕಗಳನ್ನು ಹಾಕಿಕೊಂಡು ಸಂಚರಿಸುತ್ತಿರುವ ಕಾರಿನ ಮಾಲೀಕರಿಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯವಾಗಿದೆ. ಸಾಮಾನ್ಯವಾಗಿ ಕಾನೂನಿನ ಅರಿವು ಇಲ್ಲದ ವ್ಯಕ್ತಿಗಳು ಈ ರೀತಿ ಸರ್ಕಾರದ ಲಾಂಛನವನ್ನು ಬಳಸಿಕೊಂಡರೆ, ಅವರಿಗೆ ತಿಳಿವಳಿಕೆಯನ್ನು ನೀಡಬಹುದು. ಆದರೆ, ಕರ್ನಾಟಕದ ನ್ಯಾಯಾಂಗದಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ನಂತರ ಕರ್ನಾಟಕ ಸರ್ಕಾರವು ಅವರನ್ನು ಭೂಕಬಳಿಕೆ ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯರನ್ನಾಗಿ ನೇಮಿಸಿ ಭೂಕಬಳಿಕೆ ಮಾಡಿರುವವರ ವಿರುದ್ಧ ವಿಚಾರಣೆಯನ್ನು ನಡೆಸಿ ತೀರ್ಪನ್ನು ನೀಡುವ ಈ ನ್ಯಾಯಾಧೀಶರೇ ಕಾನೂನು ಬಾಹಿರವಾಗಿ ಸಾರಿಗೆ ಕಾಯ್ದೆಗಳನ್ನು ಉಲ್ಲಂಘಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಬ್ಬೆದ್ದು ನಾರುತ್ತಿರುವ ಪಾರಂಪರಿಕ ರಸೆಲ್ ಮಾರುಕಟ್ಟೆ: ಕ್ರಮ ಕೈಗೊಳ್ಳದ ಬಿಬಿಎಂಪಿ
“ಕರ್ನಾಟಕ ಸರ್ಕಾರ ನ್ಯಾಯಾಧೀಶರಿಗೆ ಸಂಚರಿಸಲು ಸರ್ಕಾರದ ವತಿಯಿಂದ ಇನ್ನೋವಾ ಕಾರು ನೀಡಿದರು, ಅವರು ಸದರಿ ಕಾರನ್ನು ಕುಟುಂಬದವರ ಸಂಚಾರಕ್ಕೆ ಬಳಸುತ್ತಿದ್ದಾರೆ. ಹಾಗೂ ಅವರು ಸ್ವಂತ ಕಾರನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಬರುತ್ತಿದ್ದಾರೆ. ಒಮ್ಮೆ ಸರ್ಕಾರದ ಲಾಂಛನ ಮತ್ತು ನಾಮಫಲಕವಿರುವ ಅವರ ಸ್ವಂತ ಕಾರನ್ನು ಅವರ ಕುಟುಂಬದವರು ಬಳಸುತ್ತಿದ್ದು ಸಾರ್ವಜನಿಕರು ಈ ಕಾರನ್ನು ನೋಡಿ ಗೊಂದಲಕ್ಕೆ ಒಳಗಾಗಿದ್ದಾರೆ” ಎಂದು ಬರೆದಿದ್ದಾರೆ.
“ಸರ್ಕಾರದ ಲಾಂಛನ ಮತ್ತು ಸರ್ಕಾರದ ನಾಮಫಲಕವನ್ನೇ ಕಬಳಿಸಿರುವ ಇವರನ್ನು ಭೂಕಬಳಿಕ ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯತ್ವದಿಂದ ತಕ್ಷಣ ಬಿಡುಗಡೆಗೊಳಿಸಿ, ಸದರಿ ನ್ಯಾಯಿಕ ಸದಸ್ಯ ಸ್ಥಾನಕ್ಕೆ (ಅಯೋಗ್ಯರನ್ನು ಹೊರತುಪಡಿಸಿ) ಯೋಗ್ಯರನ್ನು ಆಯ್ಕೆ ಮಾಡಬೇಕೆಂದು” ನೈಜ ಹೋರಾಟಗಾರರ ವೇದಿಕೆ ಮನವಿ ಮಾಡಿದೆ.
“ಪಾಟೀಲ್ ನಾಗಲಿಂಗನಗೌಡರು ಸರ್ಕಾರದ ಲಾಂಛನ ಮತ್ತು ಸರ್ಕಾರದ ನಾಮಫಲಕವನ್ನು ಕಾನೂನುಬಾಹಿರವಾಗಿ ದುರುಪಯೋಗ ಪಡಿಸಿಕೊಂಡಿದ್ದು, ಅವರ ಮೇಲೆ ಕಾನೂನಿನ ಕ್ರಮ ಕೈಗೊಂಡು, ಈ ನೆಲದ ಕಾನೂನು ಪ್ರತಿಯೊಬ್ಬರಿಗೂ ಒಂದೇ ಎಂಬುದನ್ನು ಸಾಬೀತು ಪಡಿಸಬೇಕು” ಎಂದು ಹೇಳಿದ್ದಾರೆ.