ಇಂಡಿಯಾ ಹೆಸರು ಬದಲಾಯಿಸಲು ಹೊರಟಿರುವ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ನವದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ನಾಲ್ಕು ಓಟು ಕಡಿಮೆ ಆಗುತ್ತದೆ ಎಂದರೆ, ದೇಶದ ಹೆಸರನ್ನು ಬದಲಿಸಬಹುದೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಂಡಿಯಾ’ ಒಕ್ಕೂಟ ರಚನೆಯಾಗಿದೆ. ಇನ್ನು ಬಿಜೆಪಿಯವರು ಮತಗಳ ಚಿಂತೆಯಿಂದ ಈ ರೀತಿ ಮಾಡುತ್ತಿದ್ದಾರೆ. ನಾಲ್ಕು ಓಟು ಕಡಿಮೆ ಆಗುತ್ತದೆ ಎಂದರೆ, ದೇಶದ ಹೆಸರನ್ನು ಬದಲಿಸಬಹುದೇ? ಕೇವಲ ಮತಕ್ಕಾಗಿ ಇದನ್ನೆಲ್ಲಾ ಮಾಡುತ್ತಿದ್ದಾರೆ. ಇದು ದೇಶಕ್ಕೆ ಮಾಡಿದ ದ್ರೋಹ ಎಂದು ಬಿಜೆಪಿ ಸರ್ಕಾರದ ವಿರುದ್ಧ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.
ಯಾರಾದ್ರೂ ಹೆಸರಿಟ್ಟು ಪಕ್ಷ ಕಟ್ಟಿದರೆ ದೇಶದ ಹೆಸರನ್ನೇ ಬದಲಾಯಿಸುತ್ತಾರಾ? ಇದು 140 ಕೋಟಿ ಜನಸಂಖ್ಯೆಯ ದೇಶ. ನಾಳೆ ಸಭೆ ನಡೆಸಿದ ನಂತರ ಇಂಡಿಯಾ ಒಕ್ಕೂಟ ತನ್ನ ಹೆಸರನ್ನು ಭಾರತ್ ಎಂದು ಬದಲಾಯಿಸಲು ನಿರ್ಧರಿಸಿದರೆ ಏನು? ಹಾಗಾದರೆ ಅವರು ಭಾರತ್ ಹೆಸರನ್ನು ಬಿಜೆಪಿ ಎಂದು ಬದಲಾಯಿಸುತ್ತಾರೆಯೇ? ಎಂದು ದೆಹಲಿ ಸಿಎಂ ಹೇಳಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಾವು ಇಂಗ್ಲಿಷ್ನಲ್ಲಿ ಇಂಡಿಯಾ ಮತ್ತು ಹಿಂದಿಯಲ್ಲಿ ಭಾರತ್ ಎಂದು ಹೇಳುತ್ತೇವೆ. ಆದರೆ ಜಗತ್ತಿಗೆ ಇಂಡಿಯಾ ಎಂಬ ಹೆಸರಿನಿಂದ ದೇಶ ಪರಿಚಿತವಾಗಿದೆ. ಭಾರತ ಎಂದು, ದೇಶದ ಹೆಸರನ್ನು ಬದಲಾಯಿಸಲು ಏಕಾಏಕಿ ಏನಾಗಿದೆ? ಕವಿ ರವೀಂದ್ರನಾಥ ಟ್ಯಾಗೋರ್ ಹೆಸರನ್ನು ಸಹ ಬದಲಾಯಿಸಲಾಗುತ್ತದೆಯೇ? ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಭಾರತ್ ಮಾತಾ ಕೀ ಜೈ’ ಎಂದ ಅಮಿತಾಭ್ ಬಚ್ಚನ್; ನೆಟ್ಟಿಗರಿಂದ ತರಾಟೆ
ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ದೇಶದ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರವನ್ನು ಟೀಕಿಸಿದರು.
“ಫ್ಯಾಸಿಸ್ಟ್ ಬಿಜೆಪಿ ಆಡಳಿತವನ್ನು ಕಿತ್ತೊಗೆಯಲು ಬಿಜೆಪಿಯೇತರ ಶಕ್ತಿಗಳು ಒಂದಾದ ನಂತರ ಮತ್ತು ಈ ಮೈತ್ರಿಗೆ ಸೂಕ್ತವಾಗಿ ‘ಇಂಡಿಯಾ’ ಎಂದು ಹೆಸರಿಸಿದ ನಂತರ, ಈಗ ಬಿಜೆಪಿ ‘ಇಂಡಿಯಾ’ವನ್ನು ‘ಭಾರತ್’ ಎಂದು ಬದಲಾಯಿಸಲು ಬಯಸಿದೆ. ದೇಶವನ್ನು ರೂಪಾಂತರಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ ನಮಗೆ ಸಿಕ್ಕಿದ್ದು 9 ವರ್ಷಗಳ ನಂತರ ಹೆಸರು ಬದಲಾವಣೆ! ಪ್ರತಿಪಕ್ಷಗಳ ಒಗ್ಗಟ್ಟಿನ ಬಲವನ್ನು ಗುರುತಿಸಿದ ನಂತರ ಬಿಜೆಪಿಯವರು ಭಯಗೊಂಡಿದ್ದು ಅದಕ್ಕಾಗಿ ದೇಶದ ಹೆಸರನ್ನು ಬದಲಿಸಲು ಹೊರಟಿದ್ದಾರೆ” ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ”ದೇಶಕ್ಕೆ ಸಂಬಂಧಿಸಿದ ಹೆಸರಿನ ಬಗ್ಗೆ ಆಡಳಿತ ಪಕ್ಷವು ಏಕೆ ಗೊಂದಲಕ್ಕೀಡಾಗಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ದೇಶದ ಹೆಸರನ್ನು ಬದಲಾಯಿಸುವ ಹಕ್ಕು ಯಾರಿಗೂ ಇಲ್ಲ. ಯಾರೂ ಹೆಸರನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಇಂಡಿಯಾ ಒಕ್ಕೂಟಗಳ ರಾಜ್ಯ: ಕಾಂಗ್ರೆಸ್
ಇಂಡಿಯಾ ಹೆಸರನ್ನು ಬದಲಾವಣೆ ಮಾಡಲು ಹೊರಟಿರುವುದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಜಿ20 ಔತಣಕೂಟಕ್ಕೆ ಸಾಮಾನ್ಯವಾಗಿ ‘President of India’ ಎಂದು ಕಳುಹಿಸುತ್ತಿದ್ದ ಬದಲಿಗೆ ‘President of Bharat’ ಎಂಬ ಹೆಸರಿನಲ್ಲಿ ಆಹ್ವಾನಗಳನ್ನು ಕಳುಹಿಸಿದೆ. ಸಂವಿಧಾನದ 1 ನೇ ವಿಧಿಯಲ್ಲಿ ‘ಇಂಡಿಯಾ, ಎಂದು ಕರೆಯಲ್ಪಡುವ ಭಾರತ, ರಾಜ್ಯಗಳ ಒಕ್ಕೂಟವಾಗಿರುತ್ತದೆ’ ಎಂದು ಬರೆಯಲಾಗಿದೆ. ಆದರೆ ಈಗ ಈ ‘ರಾಜ್ಯಗಳ ಗುಂಪು’ಗಳ ಮೇಲೂ ದಾಳಿ ನಡೆಯುತ್ತಿದೆ ಎಂದಿದ್ದಾರೆ.