ನಾನು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವಳು. ನಾನು ದನ ತಿನ್ನುತ್ತೇನೆ, ಹಂದಿ ತಿನ್ನುತ್ತೇನೆ. ನಾನು ನನ್ನ ಜಾತಿ, ನನ್ನ ಧರ್ಮವನ್ನ ಉಡುಗೆಯ ಮೂಲಕ ತೋರಿಸುವುದಿಲ್ಲ. ನಾನು ನನ್ನಿಷ್ಟವಾದುದ್ದನ್ನು ತಿನ್ನುತ್ತೇನೆ, ಉಡುತ್ತೇನೆ, ನನ್ನ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗದು ಎಂದು ಮಣಿಪುರದ ಸಾಮಾಜಿಕ ಹೋರಾಟಗಾರ್ತಿ ಏಂಜೆಲಾ ಅಂಗದ್ ಹೇಳಿದರು.
ಖ್ಯಾತ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ನೆನಪಿನಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮುಸ್ಲಿಂ ಸಹೋದರ, ಸಹೋದರಿಯರ ಮೇಲೆ ದಮನ ನಡೆದಾಗ ಸುಮ್ಮನೆ ನೋಡಲಾಗುವುದಿಲ್ಲ. ಈಶಾನ್ಯ ಭಾರತದಲ್ಲಿ ಶೋಷಿತರನ್ನು ಮತ್ತಷ್ಟು ದಮನ ಮಾಡಲಾಗುತ್ತಿದೆ. ಅಲ್ಲಿನ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ತಮ್ಮ ತನವನ್ನು ಕಳೆದುಕೊಂಡಿರುವ ಜನರು ಬಿಜೆಪಿಯನ್ನು ವಿರೋಧಿಸಿದಾಗಲೂ, ಬಿಜೆಪಿಯವರೇ ಜನರನ್ನು ಆಳುತ್ತಿದ್ದಾರೆ” ಎಂದರು.
“ಪ್ರಧಾನಮಂತ್ರಿ ನಮ್ಮ ಸಮುದಾಯಗಳ ಕೆಲವು ಸಂಕೇತಗಳನ್ನು ತಮ್ಮ ಉಡುಗೆಯಲ್ಲಿ ಬಳಸುತ್ತಾರೆ. ಕತ್ತಿಗೆ, ತಲೆಗೆ ನಮ್ಮ ಬಟ್ಟೆ ಕಟ್ಟಿಕೊಂಡೇ ನಮ್ಮ ಮೇಲಿನ ದಮನದ ನೀತಿ ಮುಂದುವರೆಸುತ್ತಿದ್ದಾರೆ. ಕೆಲವು ನಕಲಿ ಆದರ್ಶಗಳನ್ನು ತೋರಿಸಿಕೊಂಡು ನಮ್ಮನ್ನು ತುಳಿಯುತ್ತಿದ್ದಾರೆ” ಎಂದು ಕಿಡಿಕಾರಿದರು.
“ದೇಶದಲ್ಲಿ ಮಾನವೀಯತೆಯನ್ನು ಒಡೆದು ಹಾಕಲಾಗುತ್ತಿರುವಾಗ, ಅದನ್ನು ಮರುಜೋಡಿಸುವುದು ನಮ್ಮ ಕೆಲಸವಾಗುತ್ತದೆ. ನಮ್ಮ ಆತ್ಮಸಾಕ್ಷಿಗಿಂತ ಕರುಣೆ ಮತ್ತು ಸಹನೆಗಿಂತ ದೊಡ್ಡ ಗುರುವಿರಲು ಸಾಧ್ಯವಿಲ್ಲ. ಖಾಸಗಿ ಬಂಡವಾಳ, ಭ್ರಷ್ಟಾಚಾರಗಳೇ ಆಡಳಿತವಾಗಿರುವಾಗ ಈ ಮಾರ್ಗದರ್ಶಿ ಸೂತ್ರಗಳು ನಮ್ಮನ್ನು ಮುನ್ನಡೆಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಸೌಜನ್ಯ ಪ್ರಕರಣ | ಮರು ತನಿಖೆಗೆ ಆಗ್ರಹಿಸಿ ಬಿಜೆಪಿ ನಿಯೋಗದಿಂದ ರಾಜ್ಯಪಾಲ, ಮುಖ್ಯಮಂತ್ರಿಗೆ ಮನವಿ
“ಇವತ್ತಿನ ಭಾರತ ನಮ್ಮ ಹಣೆಬರಹವಲ್ಲ. ನಾವು ನಮ್ಮ ಹೆಗಲುಗಳನ್ನು ನೋಡಿಕೊಳ್ಳಬೇಕು. ನಾವು ಹೇಗೆ ಎಲ್ಲರೂ ಕೂಡಿಕೊಂಡಿದ್ದೇವೆಂಬುದನ್ನು, ನಮ್ಮ ಆಹಾರಗಳನ್ನು ಹಂಚಿಕೊಂಡು ತಿಂದು ಬದುಕಿದ್ದೆವು ಎಂಬುದನ್ನು ನೆನಪಿಸಿಕೊಳ್ಳಬೇಕು. ರೈತರು ದೆಹಲಿಯ ಗಡಿಗಳಲ್ಲಿ ಸಾಧಿಸಿದ್ದನ್ನು, ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು ತಮ್ಮತನವನ್ನು ಉಳಿಸಿಕೊಂಡಿರುವುದನ್ನು ನೋಡಬೇಕು. ಕಾಶ್ಮೀರದ ಜನರಿಂದ ಧೈರ್ಯವನ್ನು ಕಲಿಯಬೇಕು. ನದಿಯ ಹರಿಯುವಿಕೆಯನ್ನು ನೆನಪಿಟ್ಟುಕೊಳ್ಳಬೇಕು, ಅದೇ ಸಮಯದಲ್ಲಿ ನಾವು ಸೇರಬೇಕಿರುವ ಮಹಾಸಾಗರದ ಕಾಣ್ಕೆಯನ್ನೂ ಕಾಪಾಡಿಕೊಳ್ಳಬೇಕು” ಎಂದು ಕರೆಕೊಟ್ಟರು.