ದೇಶದಲ್ಲಿ ಹಿಂಸೆಯ ವಾತಾವರಣ ರೂಪುಗೊಂಡಿದ್ದು, ಗೌರಿ ಲಂಕೇಶ್ ಕೂಡಾ ಇದಕ್ಕೆ ಬಲಿಯಾದರು. ಈ ರೀತಿಯ ಕೃತ್ಯಗಳು ಹಲವು ವರ್ಷಗಳಿಂದಲೇ ನಡೆಯುತ್ತಿವೆ. 2015ರಲ್ಲಿ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಗಲಭೆಯಾಯಿತು. 2017ರಲ್ಲಿ ಗೌರಿ ಬಲಿಯಾದರು. ಇದು ಈಗಲೂ ಮುಂದುವರೆದಿದೆ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಹೇಳಿದರು.
ಬೆಂಗಳೂರಿನಲ್ಲಿ ನಡೆದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ನೆನಪಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಕೆಲವು ದಿನಗಳ ಹಿಂದೆ ಕಬ್ಬು ಬೆಳೆವ ರೈತರಿಂದ ದಾಳಿ ಮಾಡಿಸಿದರು. ಕರ್ನಾಟಕದಲ್ಲೂ ಇದನ್ನೇ ಮಾಡಲು ಪ್ರಯತ್ನ ಮಾಡಿದರು. ಇಲ್ಲಿ ರಾಮನ ಹೆಸರು ನಡೆಯದಿದ್ದಾಗ ಹನುಮಂತನ ಹೆಸರು ಹೇಳಿದರು. ಆದರೆ, ಅದೂ ಕೆಲಸ ಮಾಡಲಿಲ್ಲ” ಎಂದು ಆರ್ಎಸ್ಎಸ್, ಬಿಜೆಪಿ ವಿರುದ್ಧ ಹರಿಹಾಯ್ದರು.
“ನಾಗಪುರ ನಿರ್ಧಾರ ಮಾಡುತ್ತದೆ-ಯಾವ ದೇವರು ಯಾವತ್ತು ಎಲ್ಲಿಗೆ ಹೋಗಬೇಕು. ಯಾರ ಪಾಲಿನ ಊಟ ಎಲ್ಲಿ ಸಿಗುತ್ತದೆ ಎಂದು ಅವರು ಹೇಳುತ್ತಾರೆ. ಇಂದು ನಾನು ಈ ಮಾತನಾಡಿದ್ದಕ್ಕೆ ಅವರ ಬೆಂಬಲಿಗರು ನನ್ನ ವಿರುದ್ಧವೂ ಮಾತನಾಡುತ್ತಾರೆ” ಎಂದರು.
“ನಾವೂ ಹಿಂದುಗಳೇ, ಅವರಿಗಿಂತಲೂ ಉತ್ತಮ ಹಿಂದುಗಳು. ನಮ್ಮ ಧರ್ಮ ಪಾಲಿಸಲು ನಮಗೆ ಸಂವಿಧಾನ ಅವಕಾಶ ನೀಡಿದೆ. ನಾವು ಹಿಂದೂ ಎಂದು ಹೇಳಿಕೊಳ್ಳಲು ನಮಗೇನೂ ಭಯವಿಲ್ಲ. ಆದರೆ, ನಾವು ಭಾರತೀಯ ಹಿಂದೂಗಳೂ, ಭಾರತೀಯ ಮುಸಲ್ಮಾನರೂ ಆಗಿದ್ದೇವೆ. ನಾಗಪುರದವರಿಗೆ ಹೆದರಬೇಕಾದ ಅಗತ್ಯವಿಲ್ಲ” ಎಂದರು.
“ಕರ್ನಾಟಕದ ಜನರು ದೇಶಕ್ಕೆ ದೊಡ್ಡ ಸಂದೇಶ ಕೊಟ್ಟಿದ್ದೀರಿ, ಅಭಿನಂದನೆಗಳು. ಈಗ ಬೇರೆ ರಾಜ್ಯಗಳಲ್ಲೂ ಇದೇ ಪುನರಾವರ್ತನೆಯಾಗಬೇಕು. ನಮ್ಮನ್ನು ಆಳುತ್ತಿರುವವರು ಹೊರದೇಶಗಳಲ್ಲಿ ಗಾಂಧಿಯ ಹೆಸರು ಹೇಳುತ್ತಾರೆ. ಆದರೆ, ಅವರನ್ನು ಕೊಂದವರು ಯಾರು? ಗೌರಿಯನ್ನು ಹತ್ಯೆ ಮಾಡಿದವರು ಯಾರು? ದೆಹಲಿಯಲ್ಲಿ 770 ರೈತರು ಸತ್ತಾಗ ಆಧಿಕಾರ ಯಾರದಿತ್ತು. ರೈತರನ್ನು 13 ತಿಂಗಳು ಬೀದಿಯಲ್ಲಿ ಇಟ್ಟವರು ಯಾರು? ಇದೆಲ್ಲವನ್ನೂ ಮಾಡಿದ್ದು ಯಾರೆಂದು ಆಳುವವರು ಹೇಳಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಅಸಹಿಷ್ಣುತೆ ದೇಶವನ್ನು ಆಳುತ್ತಿದೆ: ಶೈಲಜಾ ಟೀಚರ್
“ಸಂಘರ್ಷ ಇನ್ನೂ ಜಾರಿಯಲ್ಲಿದೆ. ರೈತರ ಹೋರಾಟ, ಆದಿವಾಸಿಗಳ ಹೋರಾಟ, ಯುವಜನರ ಹೋರಾಟ ಹೀಗೆ ಅನೇಕ ದಿಕ್ಕುಗಳಲ್ಲಿ ವೇದಿಕೆಗಳಲ್ಲಿ ಸಂಘರ್ಷ ನಡೆಯುತ್ತಿದೆ” ಎಂದರು.
“ಮಣಿಪುರದಲ್ಲಿ ಪರಸ್ಪರ ಗಲಭೆ ಮಾಡಿಸುತ್ತಾರೆ. ಅಲ್ಲಿ, ಇಡೀ ಜಗಳ ಗಣಿಗಾರಿಕೆಗಾಗಿ ನಡೆಯುತ್ತಿದೆ. ಅದನ್ನು ಅದಾನಿಗೆ ಕೊಡಲು ಯತ್ನಿಸುತ್ತಿದ್ದಾರೆ. ಕಾಶ್ಮೀರದ ಪ್ರವಾಸೋದ್ಯಮ ನಷ್ಟದಲ್ಲಿದೆ. ₹50,000 ಲಾಭ ಗಳಿಸುತ್ತಿದ್ದವರು ಇಂದು ₹2,000ಕ್ಕೆ ಇಳಿದಿದ್ದಾರೆ. ಅದಾನಿಗೆ ಇದರ ಲಾಭವೂ ಸಿಗುತ್ತದೆ” ಎಂದು ಆರೋಪಿಸಿದರು.