- 5000 ಕ್ಯೂಸೆಕ್ ಕಾವೇರಿ ನೀರು 15 ದಿನ ಹರಿಸಲು ರಾಜ್ಯ ಸರ್ಕಾರಕ್ಕೆ ಆದೇಶ
- ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಮೊದಲಿನಿಂದಲೂ ಎಡವುತ್ತಿದೆ: ಟೀಕೆ
ರಾಜ್ಯ ಸರ್ಕಾರ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಕಾವೇರಿ ನೀರು ಬಿಡುವುದಿಲ್ಲ ಎಂದು ಗಟ್ಟಿಯಾಗಿ ನಿಂತರೆ ನಾವೂ ಸರ್ಕಾರದ ಜೊತೆಗೆ ನಿಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸಿಡಬ್ಲುಆರ್ಸಿ ಪ್ರತಿ ದಿನ 5000 ಕ್ಯೂಸೆಕ್ನಂತೆ ತಮಿಳುನಾಡಿಗೆ ಮತ್ತೆ 15 ದಿನ ಕಾವೇರಿ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ಮಾಡಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ವಸ್ತುಸ್ಥಿತಿ ನೋಡಿದರೆ, ಕಾವೇರಿಯಲ್ಲಿ ಕುಡಿಯಲಿಕ್ಕೂ ನೀರಿಲ್ಲ. ಮತ್ತೆ 7 ಟಿಎಂಸಿ ನೀರು ಬಿಡಲು ಹೇಳಿದ್ದಾರೆ. ಮಂಡ್ಯ ಜಿಲ್ಲೆ ಒಂದಕ್ಕೆ 32 ಟಿಎಂಸಿ ನೀರು ಬೇಕು. ಭತ್ತ ಕಬ್ಬು, ಮೆಕ್ಕೆಜೋಳ ಎಲ್ಲವೂ ಒಣಗುತ್ತಿವೆ” ಎಂದರು.
“ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಮೊದಲಿನಿಂದಲೂ ಎಡವುತ್ತಿದೆ. ನಾಳೆ ಈ ಕುರಿತು ಸಭೆ ಇದೆ. ಅಲ್ಲಿ ರಾಜ್ಯ ಸರ್ಕಾರ ವಾಸ್ತವ ಹೇಳಬೇಕು. ಸಭೆಯಿಂದ ಹೊರಬರುತ್ತಾರೋ ಏನು ಮಾಡುತ್ತಾರೊ ಅವರಿಗೆ ಬಿಟ್ಟಿದ್ದು, ಮುಂದಿನ ವಾರ ಸುಪ್ರೀಂಕೊರ್ಟ್ನಲ್ಲಿ ವಿಚಾರಣೆ ಇದೆ. ಅಲ್ಲಿಯೂ ಸರ್ಕಾರ ಬಲವಾಗಿ ವಾದ ಮಾಡಲಿ” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಾವೇರಿ ವಿವಾದ | ತಮಿಳುನಾಡಿಗೆ ನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚನೆ; ‘ಆಗಲ್ಲ’ ಎಂದ ಕರ್ನಾಟಕ
“ನಮ್ಮ ಕಾವೇರಿ ಮಕ್ಕಳ ಹಿತ ಬಲಿ ಕೊಟ್ಟು ನೀರು ಬಿಡಬೇಡಿ. ಕಾನೂನು ತಂಡ ಮರು ಚಿಂತನೆ ಮಾಡಬೇಕು. ನಾವು ಇದರಲ್ಲಿ ರಾಜಕಾರಣ ಮಾಡುತ್ತಿಲ್ಲ. ಇವರು ಗಟ್ಟಿಯಾಗಿ ನಿಲ್ಲಬೇಕು. ಅಂದರೆ ನಾವು ಸರ್ಕಾರದ ಜೊತೆ ನಿಲ್ಲುತ್ತೇವೆ. ಇವರು ಕೇಂದ್ರಕ್ಕೆ ಪತ್ರ ಬರೆದಿರುವುದಾಗಿ ಹೇಳುತ್ತಾರೆ. ಅದನ್ನು ಬಿಟ್ಟು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಮನವೊಲಿಕೆ ಮಾಡಬೇಕು” ಎಂದು ಹೇಳಿದರು.