- ದೇಶದಲ್ಲಿ ನಡೆದ ಹೆಚ್ಚಿನ ಆತ್ಮಹತ್ಯೆ, ಕೊಲೆ, ರಸ್ತೆ ಅಪಘಾತ ಪ್ರಕರಣಗಳು ದಿಗ್ಬರ್ಮೆ ಮೂಡಿಸುತ್ತಿವೆ
- ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸದ ಕಾರಣಕ್ಕೆ ರಸ್ತೆ ಅಪಘಾತದ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ
ರಸ್ತೆ ಸುರಕ್ಷತೆ ಸೇರಿದಂತೆ ಸಮಾಜದಲ್ಲಿನ ಅಪರಾಧಗಳ ತಡೆಗೆ ಸಾರ್ವಜನಿಕರು ಕೈಜೋಡಿಸುವಂತೆ ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಕರೆ ನೀಡಿದರು.
ಔರಾದ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ಪೊಲೀಸ್ ಇಲಾಖೆ ಹಮ್ಮಿಕೊಂಡ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, “ಪ್ರತಿ ವರ್ಷ ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಜನರು ಸಾವನಪ್ಪುತ್ತಿದ್ದು, ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸದೇ ಇರುವುದು ಪ್ರಮುಖ ಕಾರಣವಾಗಿದೆ. ಪೊಲೀಸ್ ಇಲಾಖೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಏನೇ ಅಭಿಪ್ರಾಯ ವ್ಯಕ್ತವಾದರೂ ನಮಗೆ ಮಾತ್ರ ಜನಸಾಮಾನ್ಯರ ಪ್ರಾಣ ರಕ್ಷಣೆಯೇ ಮುಖ್ಯ ಟಾರ್ಗೆಟ್ ಆಗಿರುತ್ತದೆ. ಬೀದರ್ ಜಿಲ್ಲೆ ಸೇರಿದಂತೆ ದೇಶಾದ್ಯಂತ ಅಂಕಿ ಅಂಶಗಳ ಪ್ರಕಾರ ಆತ್ಮಹತ್ಯೆ, ಕೊಲೆಯಂತಹ ಪ್ರಕರಣಗಳಿಗಿಂತ ಹೆಚ್ಚು ಸಾವು ರಸ್ತೆ ಅಪಘಾತದಿಂದ ಆಗುತ್ತಿರುವುದು ದಿಗ್ಬರ್ಮೆ ಮೂಡಿಸುತ್ತಿದೆ” ಎಂದು ಹೇಳಿದರು.
“ಜನರಿಗೆ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸುವುದು, ಅವೈಜ್ಞಾನಿಕ ರಸ್ತೆಗಳ ತೆರವು ಅಥವಾ ಸುಧಾರಣೆ, ಸೈನ್ ಬೋರ್ಡ್ ಅಳವಡಿಕೆ ಸೇರಿದಂತೆ ಇನ್ನಿತರ ಸುಧಾರಣೆಯ ಕಾರ್ಯಗಳು ಬೇರೆ ಬೇರೆ ಅಧಿಕಾರಿ ಮತ್ತು ಇಲಾಖೆಗಳ ಸಹಯೋಗದೊಂದಿಗೆ ಮಾಡುತ್ತಿದ್ದೆವೆ. ಇದಕ್ಕೆ ಜನಸಮಾನ್ಯರು ಕೂಡ ಕೈಜೋಡಿಸಬೇಕು” ಎಂದು ಮನವಿ ಮಾಡಿದರು.
“ಪಟ್ಟಣದಲ್ಲಿ ಸಂಚಾರಿ ನಿಯಮಗಳು ಗಾಳಿಗೆ ತೂರಿ ವಾಹನಗಳು ನಿಲ್ಲುತ್ತವೆ, ಸಾರ್ವಜನಿಕ ಶಾಲಾ ಕಾಲೇಜುಗಳು ಆವರಣದಲ್ಲಿ ಸಾರಾಯಿ ಕುಡಿದು ಬಾಟಲಿಗಳು ಒಡೆಯುವುದು, ಮತ್ತೀತರ ಚಟುವಟಿಕೆಗಳ ಕುರಿತು ಗಂಭೀರವಾಗಿ ಪರಿಗಣಿಸುವಂತೆ ಸಾರ್ವಜನಿಕರು ವಿನಂತಿಸಿದರು. ಅಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ ಸಾರಾಯಿ ಮಾರಾಟ, ಮಾಂಜ್ರಾ ನದಿಯಲ್ಲಿ ಶವಗಳು ಪತ್ತೆಯಾಗುವಿಕೆ ಸೇರಿದಂತೆ ನೂರಾರು ವಿಷಯಗಳ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತರುತ್ತಿದ್ದಂತೆ ಅವರು ಇವುಗಳ ಪರಿಹಾರಕ್ಕೆ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ತ್ಯಾಜ್ಯ ವಿಲೇವಾರಿ ಸಮಸ್ಯೆ: ರೋಗ ಭೀತಿಯಲ್ಲಿ ಗ್ರಾಮಸ್ಥರು
ಈ ಸಂದರ್ಭದಲ್ಲಿ ಸಿಪಿಐ ರಘುವೀರಸಿಂಗ್ ಠಾಕೂರ್, ಔರಾದ್ ಪಿಎಸ್ಐ ರೇಣುಕಾ ಭಾಲೇಕರ್, ಚಿಂತಾಕಿ ಪಿಎಸ್ಐ ಸಿದ್ದಲಿಂಗ, ಸಂತಪೂರ್ ಪಿಎಸ್ಐ ಮಹೇಬೂಬ್ ಅಲಿ, ಹೋಕ್ರಾಣಾ ಪಿಎಸ್ಐ ಶೇಕ್ಷಾ ಪಟೇಲ್, ಬಸವರಾಜ ಕೋಟೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ರಾಜಕೀಯ ಮುಖಂಡರು, ಸಮಾಜ ಸೇವಕರು ಉಪಸ್ಥಿತರಿದ್ದರು.