- 1300 ಲಕ್ಷ ಮಾನವ ದಿನಗಳನ್ನು 1800 ಲಕ್ಷ ಮಾನವ ದಿನಗಳಿಗೆ ಏರಿಸಲು ಕೋರಿಕೆ
- ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಸಚಿವ ಪ್ರಿಯಾಂಕ್ ಪತ್ರ
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಈಗ ನಿಗದಿ ಪಡಿಸಿರುವ 100 ದಿನಗಳ ಉದ್ಯೋಗ ಅವಧಿಯನ್ನು 150 ದಿನಗಳಿಗೆ ಏರಿಸಬೇಕು ಹಾಗೂ 1300 ಲಕ್ಷ ಮಾನವ ದಿನಗಳನ್ನು 1800 ಲಕ್ಷ ಮಾನವ ದಿನಗಳಿಗೆ ಏರಿಸಲು ಕೋರಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಪತ್ರ ಬರೆದಿರುವ ಪ್ರಿಯಾಂಕ್ ಖರ್ಗೆ, “ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಬರ ಪರಿಸ್ಥಿತಿ ಎದುರಾಗಿದ್ದು, ರಾಜ್ಯ ಸರ್ಕಾರ ಈಗಾಗಲೆ 31 ಜಿಲ್ಲೆಗಳ 195 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಉದ್ಯೋಗದ ಅವಧಿಯನ್ನು ಈಗಾಗಲೇ ಸಲ್ಲಿಸಿರುವ ಪ್ರಸ್ತಾವನೆಯಂತೆ 100 ದಿನಗಳಿಂದ 150 ದಿನಗಳವರೆಗೆ ವಿಸ್ತರಿಸಬೇಕು” ಎಂದು ಕೋರಿದ್ದಾರೆ.
“ಕರ್ನಾಟಕ ರಾಜ್ಯವು ನರೇಗ ಕಾರ್ಯಕ್ರಮದಡಿ ಉದ್ಯೋಗ ಸೃಷ್ಟಿಯಲ್ಲಿ ಮತ್ತು ವೈಯಕ್ತಿಕ ಆಸ್ತಿಗಳ ಸೃಷ್ಟಿಯಲ್ಲಿ ಮುಂದಿದ್ದು, ಪ್ರಸಕ್ತ ಹಣಕಾಸು ವರ್ಷ ರಾಜ್ಯದಲ್ಲಿ13 ಕೋಟಿ ಮಾನವ ದಿನಗಳನ್ನು ನಿರ್ಮಾಣ ಮಾಡುವ ಗುರಿ ಇದ್ದು, ಇದುವರೆವಿಗೆ 8.48 ಕೋಟಿ ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸಲಾಗಿದೆ” ಎಂದು ಪತ್ರದಲ್ಲಿ ಸಚಿವರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚುನಾವಣೆಯಲ್ಲಿ ಸಿದ್ದರಾಮಯ್ಯ ಕುಕ್ಕರ್ ಕೊಟ್ಟಿದ್ದಾರೆ ಎಂಬುದು ಸುಳ್ಳು ಸುದ್ದಿ: ಯತೀಂದ್ರ
“ಬರಗಾಲದ ಪ್ರಚಲಿತ ಪರಿಸ್ಥಿತಿಗಳಿಂದಾಗಿ, ಬರ ಪೀಡಿತ ತಾಲ್ಲೂಕುಗಳಲ್ಲಿ ಪ್ರಸಕ್ತ ಹಣಕಾಸು ವರ್ಷ 1234 ಲಕ್ಷ ಮಾನವ ದಿನಗಳ ಗುರಿಯನ್ನು ಹೊಂದಲಾಗಿದ್ದು, ಉದ್ಯೋಗವನ್ನು 100ರಿಂದ 150 ದಿನಗಳವರೆಗೆ ವಿಸ್ತರಿಸುವುದರಿಂದ ಈ ತಾಲ್ಲೂಕುಗಳ ಕಾರ್ಮಿಕರಿಗೆ ಅನುಕೂಲವಾಗಲಿದೆ” ಎಂದಿದ್ದಾರೆ.
“ಪ್ರಸಕ್ತ ಹಣಕಾಸು ವರ್ಷದ ಮೊದಲ ಐದೂವರೆ ತಿಂಗಳಲ್ಲಿ ರಾಜ್ಯದಲ್ಲಿ ತಿಂಗಳಿಗೆ ಸರಾಸರಿ 1.52 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 1300 ಲಕ್ಷ ಮಾನವ ದಿನಗಳ ಅನುಮೋದಿತ ಕಾರ್ಮಿಕ ಬಜೆಟ್ ಶೀಘ್ರವಾಗಿ ಖಾಲಿಯಾಗಲಿದ್ದು ಇನ್ನೂ 500 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಲಿದೆ” ಎಂದೂ ಪ್ರಿಯಾಂಕ್ ಖರ್ಗೆ ಪತ್ರದಲ್ಲಿ ತಿಳಿಸಿದ್ದಾರೆ.
“ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಪರಿಗಣಿಸಿ ಬರ ಪೀಡಿತ ತಾಲ್ಲೂಕುಗಳಲ್ಲಿ ಉದ್ಯೋಗದ ಅವಧಿಯನ್ನು 100ರಿಂದ 150 ದಿನಗಳವರೆಗೆ ವಿಸ್ತರಿಸಲು ಮತ್ತು 2023-24ನೇ ಹಣಕಾಸು ವರ್ಷದಲ್ಲಿ ಕರ್ನಾಟಕಕ್ಕೆ ನಿಗದಿ ಮಾಡಲಾಗಿರುವ ಕಾರ್ಮಿಕ ಬಜೆಟ್ನ್ನು ಪರಿಷ್ಕರಿಸಿ 1300 ಲಕ್ಷ ಮಾನವ ದಿನಗಳಿಂದ 1800 ಲಕ್ಷ ಮಾನವ ದಿನಗಳಿಗೆ ಹೆಚ್ಚಿಸಬೇಕು” ಎಂದು ಸಚಿವ ಖರ್ಗೆ ಕೋರಿದ್ದಾರೆ.