ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಅವರು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ಚುನಾವಣೆಯನ್ನು ಕೇಂದ್ರ ಬಿಜೆಪಿ ಸರ್ಕಾರ “ಉದ್ದೇಶಪೂರ್ವಕವಾಗಿ ಮುಂದೂಡುತ್ತಿದೆ” ಎಂದು ಆರೋಪಿಸಿದ್ದಾರೆ. ಜಮ್ಮು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಅವಧಿಯು ಈ ವರ್ಷ ಕೊನೆಗೊಳ್ಳಬೇಕಿದೆ.
ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಬಿಜೆಪಿಯ ಉದ್ದೇಶಗಳ ಬಗ್ಗೆ ನನಗೆ ಅನುಮಾನವಿದೆ. ದಿನಾಂಕಗಳನ್ನು ಸೂಚಿಸುವ ಮೊದಲೇ ಬಿಜೆಪಿಯು ಕೆಲವು ತಪ್ಪುಗಳನ್ನು ಮಾಡುತ್ತದೆ ಎಂಬ ಬಗ್ಗೆ ನನಗೆ ಆತಂಕವಿದೆ. ಉದ್ಧವ್ ಠಾಕ್ರೆ ಗೆಲ್ಲುತ್ತಾರೆ ಎಂದು ತಿಳಿದಿದ್ದ ಮುಂಬೈನಲ್ಲಿ ಬಿಜೆಪಿ ಮಾಡಿದ ರೀತಿಯಲ್ಲಿಯೇ ಜಮ್ಮು ಕಾಶ್ಮೀರದಲ್ಲಿಯೂ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ವಿಳಂಬಗೊಳಿಸಿದರೆ ಆಶ್ಚರ್ಯಪಡಬೇಡಿ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಭಾರತದ ‘ಹಸಿರು ಕ್ರಾಂತಿ’ಯ ಪಿತಾಮಹ ಎಂ ಎಸ್ ಸ್ವಾಮಿನಾಥನ್ ನಿಧನ
ಜಮ್ಮು ಮತ್ತು ಕಾಶ್ಮೀರದ ಜನರು ಮತದಾನದ ಮೂಲಕ ಶಿಕ್ಷಿಸುತ್ತಾರೆ ಎಂದು ತಿಳಿದಿರುವ ಕಾರಣ ಬಿಜೆಪಿಯು ಚುನಾವಣೆ ನಡೆಸುವ ಮನಸ್ಥಿತಿಯಲ್ಲಿಲ್ಲ. ಕಣಿವೆ ರಾಜ್ಯದಲ್ಲಿ ಈಗ ಶೇ. 80 ರಷ್ಟು ಜನರು ಬಿಜೆಪಿಯನ್ನು ಇಷ್ಟಪಡುವುದಿಲ್ಲ ಎಂಬುದು ವಿಳಂಬಕ್ಕೆ ನಿಜವಾದ ಕಾರಣ. ಜನರ ಕೋಪವನ್ನು ಎದುರಿಸಲು ಬಿಜೆಪಿಗೆ ಇಷ್ಟವಿಲ್ಲ. ಬಿಜೆಪಿ ನಾಯಕತ್ವವು ತನ್ನ ಜನವಿರೋಧಿ ನೀತಿಗಳು ಮತ್ತು ಕಳೆದ ಒಂಬತ್ತು ವರ್ಷಗಳಲ್ಲಿ ಎಲ್ಲ ರಂಗಗಳಲ್ಲಿನ ವೈಫಲ್ಯದಿಂದಾಗಿ ತನ್ನ ನಿರ್ಬಂಧಿತ ದ್ವೇಷ ಮೂಡಿಸುವ ಅಜೆಂಡವನ್ನು ಜನರ ಮನಸ್ಸಿನಲ್ಲಿ ತುಂಬುತ್ತಿದೆ” ಎಂದು ಒಮರ್ ಅಬ್ದುಲ್ಲಾ ಹೇಳಿದರು.
ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸುವ ಕುರಿತು ಬಿಜೆಪಿಯ ನಿಲುವು ವ್ಯತಿರಿಕ್ತವಾಗಿದೆ. ಸುಪ್ರೀಂ ಕೋರ್ಟ್ನಲ್ಲಿ ಕೇಸರಿ ಸರ್ಕಾರವು 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಪರಿಸ್ಥಿತಿ ಸುಧಾರಿಸಿದೆ ಮತ್ತು ಜನರು ಸಂತೋಷವಾಗಿದ್ದಾರೆ ಎಂದು ಹೇಳುತ್ತಾರೆ. ಅದೇ ಸಮಯದಲ್ಲಿ, ಕಣಿವೆ ನಾಡಿನಲ್ಲಿ ಭದ್ರತಾ ಪರಿಸ್ಥಿತಿ ಸರಿಯಾಗಿಲ್ಲ ಮತ್ತು ಚುನಾವಣೆಗಳನ್ನು ನಡೆಸಲಾಗುವುದಿಲ್ಲ ಎಂದು ಸರ್ಕಾರ ಈಗ ಹೇಳುತ್ತದೆ” ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನವದೆಹಲಿಯಲ್ಲಿ ಜಮ್ಮು ಕಾಶ್ಮೀರದ ಬಿಜೆಪಿ ನಾಯಕರನ್ನು ಭೇಟಿ ಮಾಡಿದ ಎರಡು ದಿನಗಳ ನಂತರ ಇಬ್ಬರು ನಾಯಕರು ಹೇಳಿಕೆಗಳು ನೀಡಿದ್ದಾರೆ.
ಹಲವಾರು ಬಿಜೆಪಿ ನಾಯಕರು ಜಮ್ಮು ಕಾಶ್ಮೀರದಲ್ಲಿ ಮತದಾರರ ಮೇಲೆ ದಾಳಿ ಮಾಡಲು ಉಗ್ರಗಾಮಿಗಳು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವಿಳಂಬದ ಬಗ್ಗೆ ಇತ್ತೀಚಿಗೆ ಸುಳಿವು ನೀಡಿದ್ದರು. 2024ಕ್ಕೆ ನಿಗದಿಯಾಗಿರುವ ಲೋಕಸಭೆ ಚುನಾವಣೆಯತ್ತ ಗಮನಹರಿಸುವಂತೆ ಸ್ಥಳೀಯ ನಾಯಕರಿಗೆ ಶಾ ನಿರ್ದೇಶಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ನಗರ ಸ್ಥಳೀಯ ಸಂಸ್ಥೆಗಳ ಐದು ವರ್ಷಗಳ ಅವಧಿಯು ಈ ವರ್ಷದ ನವೆಂಬರ್ನಲ್ಲಿ ಕೊನೆಗೊಳ್ಳಲಿದೆ. ಶ್ರೀನಗರ ಮುನ್ಸಿಪಲ್ ಕಾರ್ಪೊರೇಶನ್ ಮತ್ತು ಜಮ್ಮು ಮುನ್ಸಿಪಲ್ ಕಾರ್ಪೊರೇಶನ್ನ ಅವಧಿಯೂ ನವೆಂಬರ್ನಲ್ಲಿ ಕೊನೆಗೊಳ್ಳುತ್ತಿದೆ. ಕೇಂದ್ರಡಳಿತ ಪ್ರದೇಶದಲ್ಲಿ ಪಂಚಾಯತ್ ಚುನಾವಣೆಗಳು ನವೆಂಬರ್-ಅಕ್ಟೋಬರ್ನಲ್ಲಿ ನಡೆಯಬೇಕಿದೆ.