ಪ್ರಸ್ತುತ ಸಮಾಜ ಮತ್ತು ಸರ್ಕಾರಗಳು ಮಹಾತ್ಮ ಗಾಂಧೀಜಿಯವರ ಎಲ್ಲ ಆಶಯಗಳಿಗೂ ತದ್ವಿರುದ್ಧವಾಗಿವೆ. ಸಮಾಜದಲ್ಲಿ ನಿತ್ಯವೂ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರಗಳು, ಅದರ ಭೀಕರತೆ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿವೆ ಎಂದು ಮಹಿಳಾ ಮುನ್ನಡೆ ಮತ್ತು ಅತ್ಯಾಚಾರ ವಿರೋಧಿ ಆಂದೋಲನದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಹೊಸ ಮದ್ಯದಂಗಡಿ ತೆರೆಯಲು ಪರವಾನಗಿ ನೀಡುವ ಪ್ರಸ್ತಾಪ ವಿರೋಧಿಸಿ ಮಂಡ್ಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
“ಇಡೀ ಸಮಾಜ ಮತ್ತು ನಮ್ಮನ್ನು ಆಳುತ್ತಿರುವ ಸರ್ಕಾರಗಳು ಅಕ್ಟೋಬರ್ 2ರಂದು ಗಾಂಧಿ ಜಯಂತಿ ಆಚರಿಸುತ್ತಾ ಗಾಂಧೀಜಿಯವರ ಆದರ್ಶ ಮತ್ತು ತತ್ವಗಳ ಬಗ್ಗೆ ಮಾತನಾಡುತ್ತವೆ. ಅವರ ದಿಕ್ಕಿಗೆ ನಾವು ಸಾಗಬೇಕೆಂದು ಗಾಂಧೀಜಿಯವರನ್ನು ಸ್ಮರಿಸುತ್ತಲೇ ಬರಲಾಗುತ್ತಿದೆ. ಆದರೆ, ಅವರ ಆದರ್ಶಗಳನ್ನು ಮರೆಯುತ್ತಿದ್ದಾರೆ” ಎಂದು ಪ್ರತಿಭಟನಾಕಾರರು ಹೇಳಿದರು.
“ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧೀಜಿಯವರ ಪಾತ್ರ ಪ್ರಮುಖವಾಗಿದ್ದು, ಸದಾಕಾಲ ಸತ್ಯ ಮತ್ತು ಅಹಿಂಸೆಯನ್ನು ಸಮಾಜಕ್ಕೆ ಸಾರಿದರು. ಹಾಗೂ ಈ ದೇಶ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಹೊಂದುವುದು, ಒಬ್ಬ ಹೆಣ್ಣುಮಗಳು ಮಧ್ಯರಾತ್ರಿ 12 ಗಂಟೆಗೆ ನಿರ್ಭೀತಿಯಿಂದ ಓಡಾಡಿದಾಗ ಮಾತ್ರ ಎಂದು ಗಾಂಧಿ ನಂಬಿದ್ದರು” ಎಂದು ತಿಳಿಸಿದರು.
“ಸಮಾಜದ ಬಗ್ಗೆ ಅತಿ ಹೆಚ್ಚು ಕಾಳಜಿ ಹೊಂದಿದ್ದ ಬಾಪೂರವರು ಸಮಾಜದ ಸ್ವಾಸ್ಥ್ಯದ ಬಗ್ಗೆ ಸಂದೇಶವನ್ನು ಸಾರುತ್ತಾ, ಮದ್ಯಪಾನವನ್ನು ನಿಷೇಧ ಮಾಡಬೇಕೆಂದು ಪಣತೊಟ್ಟಿದ್ದರು. ಕುಡಿತದ ಚಟದಿಂದ ಬಿಡುಗಡೆ ಎಂದರೆ ಆತ್ಮ ಶುದ್ಧಿಯ ಒಂದು ಕ್ರಮ. ನೈತಿಕ ಉತ್ಥಾನ ಮತ್ತು ಆರ್ಥಿಕ ಸಂಕಷ್ಟದಿಂದ ವಿಮೋಚನೆ, ಸ್ವಚ್ಛ ಮತ್ತು ಆರೋಗ್ಯಕರ ಜೀವನ ಮಾರ್ಗಕ್ಕೆ ಪುನರಾಗಮನವೆಂದು ನಂಬಿದ್ದರು” ಎಂದು ಅವರು ಹೇಳಿದರು.
“ಪ್ರಸ್ತುತದಲ್ಲಿ ಮಧ್ಯಪ್ರದೇಶದಲ್ಲಿ 12 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ರಕ್ತಸಿಕ್ತ ದೇಹದೊಂದಿಗೆ ಅರೆಬೆತ್ತಲೆಯಾಗಿ ಬೀದಿಯಲ್ಲಿ ನಡೆದಾಡುತ್ತಾ ಬಾಲಕಿ ಸಹಾಯಕ್ಕಾಗಿ ಅಂಗಲಾಚಿದರೂ ಸ್ಪಂದಿಸಲಾಗದ ಮಟ್ಟಿಗೆ ಸಮಾಜ ಕಲ್ಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮದ್ಯದಂಗಡಿ ತೆರೆಯಲು ಪರವಾನಗಿ ನೀಡದಂತೆ ಗ್ರಾಮೀಣ ಕೂಲಿಕಾರರ ಸಂಘಟನೆ ಆಗ್ರಹ
“ಸೆಪ್ಟೆಂಬರ್ 9ರಂದು ಅಸ್ಸಾಂನಲ್ಲಿ 15 ವರ್ಷದ ಯುವತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ಶವದ ಮೇಲೆ ಮೂವರು ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ. ಸೌಜನ್ಯ ಪ್ರಕರಣ ನಡೆದು 11 ವರ್ಷಗಳೇ ಕಳೆದರೂ ಇನ್ನೂ ನ್ಯಾಯ ದೊರಕಿಲ್ಲ. ಬದಲಿಗೆ ಪ್ರಕರಣವನ್ನೇ ಹಳ್ಳ ಹಿಡಿಸಿ ಅಪರಾಧಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಮಣಿಪುರದಲ್ಲಿ ಹಾಡು ಹಗಲೇ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಕ್ರೌರ್ಯ ಮೆರೆದ ಸಮಾಜ ಮಣಿಪುರದ ಹಿಂಸಾಚಾರಕ್ಕೆ ಅಂತ್ಯವಾಡಿಲ್ಲ” ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಜನಶಕ್ತಿಯ ಸಿದ್ದರಾಜು, ಪೂರ್ಣಿಮಾ, ನಗರಕೆರೆ ಜಗದೀಶ್, ಲಾಯರ್ ಅಸೋಷಿಯಲ್ನ ಬಿ ಟಿ ವಿಶ್ವನಾಥ್, ಕಲಾವಿದೆ ಮಂಜುಳಕ್ಕ, ಮಹಿಳಾ ಮುನ್ನಡೆಯ ಜ್ಯೋತಿಶಿಲ್ಪಾ ಇದ್ದರು.