ರಾಜ್ಯದಲ್ಲಿ ಶೇ.22ರಷ್ಟಾದರೂ ಅರಣ್ಯ ಉಳಿದಿರುವುದಕ್ಕೆ ಬುಡಕಟ್ಟು ಸಮುದಾಯದವರು, ಕಿರಿಯ ಅರಣ್ಯ ಸಹಾಯಕರು, ಕಾವಾಡಿಗರು, ಮಾವುತರು ಮತ್ತು ಕೆಳ ಹಂತಹ ಅರಣ್ಯ ಇಲಾಖೆ ಸಿಬ್ಬಂದಿಯ ಕಾಳಜಿ ಮತ್ತು ಶ್ರಮ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ಸೂಚಿಸಿದರು.
ಅರಣ್ಯ ಮತ್ತು ಪರಿಸರ ಇಲಾಖೆ ಮೈಸೂರಿನಲ್ಲಿ ಆಯೋಜಿಸಿದ್ದ 69ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೇ.33ರಷ್ಟು ಅರಣ್ಯ ಇದ್ದರೆ ಮಾತ್ರ ಪರಿಸರ ಸಮತೋಲನ ಇರುತ್ತದೆ. ಆದರೆ ಮನುಷ್ಯನ ದುರಾಸೆ ಮತ್ತು ದುರ್ಬುದ್ದಿಯಿಂದ ಅರಣ್ಯ ನಾಶ ಆಗುತ್ತಿದೆ. ರಾಜ್ಯದಲ್ಲಿ ಹುಲಿ ಮತ್ತು ಆನೆಗಳ ಸಂಖ್ಯೆ ಹೆಚ್ಚಿದೆ. ಆನೆ ಸಂಪತ್ತಿನಲ್ಲಿ ರಾಜ್ಯ ಪ್ರಥಮ ಮತ್ತು ಹುಲಿ ಸಂಪತ್ತಿನಲ್ಲಿ ಎರಡನೇ ಸ್ಥಾನದಲ್ಲಿರುವುದು ಖುಷಿಯ ವಿಚಾರ. ಪ್ರಾಣಿ ಮತ್ತು ಮನುಷ್ಯರ ಸಹ ಜೀವನ ಇರಬೇಕು. ಪರಿಸರ ಸಮತೋಲನ ಸಾಧ್ಯ ಎಂದರು.
ಮುಖ್ಯಮಂತ್ರಿ @siddaramaiah ಅವರು ಅರಣ್ಯ ಮತ್ತು ಪರಿಸರ ಇಲಾಖೆ ಮೈಸೂರಿನಲ್ಲಿ ಆಯೋಜಿಸಿದ್ದ 69ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು.
ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ, ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್, ಮಹಾಪೌರರಾದ ಶಿವಕುಮಾರ್,… pic.twitter.com/FbKqop2IvF— CM of Karnataka (@CMofKarnataka) October 7, 2023
ಅರಣ್ಯ ರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿ ಅಲ್ಲ. ಪರಿಸರದಲ್ಲಿರುವ ಪ್ರತಿಯೊಬ್ಬರ ಕರ್ತವ್ಯ. ಆನೆ ಮತ್ತು ಮಾನವ ಸಂಘರ್ಷ ತಪ್ಪಿಸಲು ರೈಲು ಬ್ಯಾರಿಕೇಡ್ ಗಳನ್ನು ಹಾಕುತ್ತಿದ್ದೇವೆ. 640 ಕಿಮೀ ಬ್ಯಾರಿಕೇಡ್ ಹಾಕಲಾಗುತ್ತದೆ. ಸದ್ಯ 350 ಕಿ.ಮೀ. ಮಾತ್ರ ಆಗಿದೆ. ವನ್ಯ ಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪಿಸಲು ಇಷ್ಟು ಸಾಲುವುದಿಲ್ಲ. ಅರಣ್ಯದಲ್ಲೇ ವನ್ಯ ಜೀವಿಗಳಿಗೆ ಬೇಕಾದ ಆಹಾರ ಮತ್ತು ನೀರಿನ ವ್ಯವಸ್ಥೆ ಆದರೆ ಸಂಘರ್ಷ ತಪ್ಪುತ್ತದೆ. ಇದಕ್ಕೆ ಬೇಕಾದ ಎಲ್ಲ ಸಹಕಾರವನ್ನೂ ಸರ್ಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಈಗ ಶೇ.22ರಷ್ಟಾದರೂ ಅರಣ್ಯ ಉಳಿದಿದೆ ಎಂದರೆ ಬುಡಕಟ್ಟು ಸಮುದಾಯದವರು, ಕಿರಿಯ ಅರಣ್ಯ ಸಹಾಯಕರು, ಕಾವಾಡಿಗರು, ಮಾವುತರು ಮತ್ತು ಕೆಳ ಹಂತಹ ಅರಣ್ಯ ಇಲಾಖೆ ಸಿಬ್ಬಂದಿಯ ಕಾಳಜಿ ಮತ್ತು ಶ್ರಮ ಕಾರಣ. ಹಿರಿಯ ಅರಣ್ಯಾಧಿಕಾರಿಗಳು ಹೆಚ್ಚೆಚ್ಚು ಅರಣ್ಯದಲ್ಲೇ ಉಳಿದು ಕ್ರಮ ವಹಿಸಿದರೆ ಅರಣ್ಯ ಮತ್ತು ವನ್ಯಜೀವಿ ಸಂಪತ್ತು ಹೆಚ್ಚಿನ ಪ್ರಮಾಣದಲ್ಲಿ ಉಳಿಯಲು, ಬೆಳೆಯಲು ಸಾಧ್ಯ ಎಂದರು.
ವನ್ಯಜೀವಿಗಳು ಅರಣ್ಯದಿಂದ ಹೊರಗೆ ಬರದಂತೆ ವ್ಯವಸ್ಥೆ ಮಾಡುವುದು ಅಧಿಕಾರಿ ಮತ್ತು ಸಿಬ್ಬಂದಿಯ ಕರ್ತವ್ಯ. ಅದನ್ನು ಬಿಟ್ಟು ಕಾಡಿನಿಂದ ಹೊರಗೆ ಬಂದ ವನ್ಯ ಜೀವಿಗಳ ಹಿಂದೆ ಬೋನ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಮೊದಲು ಕಾಡಿನಲ್ಲೇ ನೀರು , ಆಹಾರ ನೀರು ಸಿಗುವಂತೆ ಮಾಡಿ ಎಂದು ಸೂಚಿಸಿದರು.
ವನ್ಯಜೀವಿ ಸಂರಕ್ಷಣೆ ಕುರಿತು ಜಾಗ್ರತಿ ಮೂಡಿಸಲು ನಮ್ಮ ಅರಣ್ಯ ಇಲಾಖೆ ವತಿಯಿಂದ ಮೈಸೂರಿನಲ್ಲಿ ಇಂದು ಆಯೋಜಿಸಲಾದ 69ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರೊಂದಿಗೆ ಪಾಲ್ಗೊಳ್ಳಲಾಯಿತು. pic.twitter.com/c5MKXpZAbE
— Eshwar Khandre (@eshwar_khandre) October 7, 2023
ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸಾಕ್ಷ್ಯಚಿತ್ರಗಳನ್ನು ಬಿಡುಗಡೆ ಮಾಡಿದರು. ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ವಿಶೇಷ ಸಾಧಕರಿಗೆ ಸನ್ಮಾನಿಸಿ ಫಲಾನುಭವಿಗಳಿಗೆ ಚೆಕ್ ವಿತರಿಸಿದರು. ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಹಾಪೌರರಾದ ಶಿವಕುಮಾರ್, ಶಾಸಕರುಗಳಾದ ಸಿ.ಅನಿಲ್ ಕುಮಾರ್, ಡಿ.ರವಿಶಂಕರ್, ಜಿ.ಡಿ.ಹರೀಶ್ ಗೌಡ, ದರ್ಶನ್ ದೃವನಾರಾಯಣ್, ಟಿ.ಎಸ್.ಶ್ರೀವತ್ಸ, ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.