ಕೆಲಸದಿಂದ ತೆಗೆದು ಹಾಕಿ ಸಂಬಳ ನೀಡಿಲ್ಲವೆಂದು ಕೋಪಗೊಂಡ ಉದ್ಯೋಗಿಗಳು ಕಂಪನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಈ ಘಟನೆ ಸೆ.27ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಉಮಾಶಂಕರ್ ಮತ್ತು ರೂಪ ಎಂಬುವವರ ಒಡೆತನದ ಪೃಥ್ವಿ ಪಾರ್ಕ್ ಸ್ಕ್ವೇರ್ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಆರೋಪಿ ರಾಹುಲ್ ಪೂಜಾರಿ ಏರಿಯಾ ಸೇಲ್ಸ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು. ಇನ್ನೋರ್ವ ಆರೋಪಿ ಲ್ಯಾವ್ಸನ್ ಪೀಟರ್ ಜಾನ್ ರೀಜಿನಲ್ ಸೇಲ್ಸ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದ. ಈ ಇಬ್ಬರು ಟಾರ್ಗೆಟ್ ರೀಚ್ ಮಾಡಿಲ್ಲ ಎಂದು ಕಂಪನಿ ಈ ಇಬ್ಬರನ್ನು ಕೆಲಸದಿಂದ ತೆಗೆದು ಹಾಕಿತ್ತು.
ಬಳಿಕ, ಕಂಪನಿಯ ಮಾಲೀಕ ರೂಪಾ ಅವರಿಗೆ ರಾಹುಲ್ ಮತ್ತು ಲ್ಯಾವ್ಸನ್ ಕರೆ ಮಾಡಿ ಸಂಬಳ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ, ರೂಪ ಮತ್ತು ಉಮಾಶಂಕರ್ ಸಂಬಳ ನೀಡಲು ನಿರಾಕರಿಸಿದ್ದಾರೆ.
ಇದಕ್ಕೆ ಕೋಪಗೊಂಡ ಆರೋಪಿಗಳು ಸೆ.27 ರಂದು ಬೆಳಿಗ್ಗೆ 10.30ಕ್ಕೆ ಪೃಥ್ವಿ ಪಾರ್ಕ್ ಸ್ಕ್ವೇರ್ ರಿಯಲ್ ಎಸ್ಟೇಟ್ ಕಂಪನಿಗೆ ಬಂದಿದ್ದಾರೆ. ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಮುನ್ನಿ ಎಂಬಾಕೆಯನ್ನು ಹೊರಗೆ ಬರುವಂತೆ ಹೇಳಿ, ಪೆಟ್ರೋಲ್ ಸುರಿದು ಕಂಪನಿಗೆ ಬೆಂಕಿ ಹಚ್ಚಿದ್ದಾರೆ.
ಘಟನೆ ವೇಳೆ, ಕಂಪನಿಯಲ್ಲಿದ್ದ ಟೇಬಲ್, ಸ್ವಿಚ್ ಬೋರ್ಡ್ ಸುಟ್ಟು ಕರಕಲಾಗಿವೆ. ಪೀಠೋಪಕರಣಗಳು ಸೇರಿದಂತೆ ಒಟ್ಟು ಕಂಪನಿಯಲ್ಲಿ ₹11 ಲಕ್ಷ ಬೆಲೆ ಬಾಳುವ ವಸ್ತುಗಳು ಹಾನಿಯಾಗಿವೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಅತ್ತಿಬೆಲೆ ಪಟಾಕಿ ದುರಂತ ಪ್ರಕರಣದ ತನಿಖೆ ಸಿಐಡಿಗೆ: ಮುಖ್ಯಮಂತ್ರಿ ಸಿದ್ಧರಾಮಯ್ಯ
ಈ ಘಟನೆ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.