ಚಿತ್ರದುರ್ಗ ಜಿಲ್ಲೆಯಲ್ಲಿ ಮುಂಗಾರು ಕೈಕೊಟ್ಟಿದ್ದರಿಂದ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಸೇರಿದಂತೆ ಒಟ್ಟು 2.4 ಲಕ್ಷ ಹೆಕ್ಟೇರ್ ಬೆಳೆ ಹಾನಿಗೀಡಾಗಿದೆ. ಎನ್ಡಿಆರ್ಎಫ್ ಮಾರ್ಗಸೂಚಿಯನ್ವಯ ಒಟ್ಟು 189.63 ಕೋಟಿ ರೂ. ಪರಿಹಾರ ಮೊತ್ತ ಬಿಡುಗಡೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್ಜೆ ತಿಳಿಸಿದ್ದಾರೆ.
ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರ ಬರ ಅಧ್ಯಯನ ತಂಡಕ್ಕೆ ಅವರು ಜಿಲ್ಲೆಯ ಬರ ಪರಿಸ್ಥಿತಿಯ ಬಗ್ಗೆ ಅಂಕಿ-ಅಂಶ ಸಹಿತ ಮಾಹಿತಿ ನೀಡಿದ್ದಾರೆ.
ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಬಂದ ಮಳೆಗೆ, ರೈತರು ಬಿತ್ತನೆ ಮಾಡಿದ್ದರು. ಜಿಲ್ಲೆಯಲ್ಲಿ ಒಟ್ಟು ಶೇ. 94ರಷ್ಟು ಬಿತ್ತನೆಯಾಗಿದೆ. ಆದರೆ, ಮಳೆ ಸಂಪೂರ್ಣ ಕೈಕೊಟ್ಟು, ತೇವಾಂಶದ ಕೊರತೆ ಜಿಲ್ಲೆಯಾದ್ಯಂತ ರೈತರನ್ನು ಕಾಡಿತು. ಜೂನ್ ವರೆಗೆ 174 ಮಿ.ಮೀ. ಮಳೆಯಾಗಬೇಕಿತ್ತು, ಬದಲಿಗೆ ಕೇವಲ 135 ಮಿ.ಮೀ. ಮಳೆ ಆಗಿದೆ. ಈ ಮಳೆ ಪೈರಿಗೆ ನೀರಿನ ಅಗತ್ಯಿ ಇದ್ದ ಸಮಯಕ್ಕೆ ಬರಲಿಲ್ಲ. ಕಾರಣ, ಜಿಲ್ಲೆಯ ಹೊಲಗಳಲ್ಲಿ ಬೆಳೆ ಮೇಲ್ನೋಟಕ್ಕೆ ಹಸಿರಾಗಿ ಕಾಣುತ್ತಿದ್ದರೂ, ಅವುಗಳಲ್ಲಿ ಯಾವುದೇ ಇಳುವರಿ ಬಂದಿಲ್ಲ.
ಈರುಳ್ಳಿ ಬೆಳೆಯಲ್ಲಿ ಈರುಳ್ಳಿ ಗಡ್ಡೆಯೇ ರೂಪುಗೊಂಡಿಲ್ಲ. ಇಂತ ಸ್ಥಿತಿಯಲ್ಲಿ ಬೆಳೆಗಳಿವೆ. ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ 2,35,507 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. ಎನ್ಡಿಆರೆಫ್ ಮಾರ್ಗಸೂಚಿಯನ್ವಯ 185.56 ಕೋಟಿ ರೂ. ಮತ್ತು 4,790 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಯಾಗಿದ್ದು, ಮಾರ್ಗಸೂಚಿಯನ್ವಯ 4.08 ಕೋಟಿ ರೂ. ಸೇರಿದಂತೆ, ಒಟ್ಟಾರೆ ಕೃಷಿ ಮತ್ತು ತೋಟಗಾರಿಕೆ ಸೇರಿದಂತೆ 2,40,296 ಹೆಕ್ಟೇರ್ ಬೆಳೆ ನಷ್ಟಕ್ಕಾಗಿ 189.63 ಕೋಟಿ ರೂ. ಬೆಳೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮುಂಗಾರು ಹಂಗಾಮಿನಲ್ಲಿ 10.86 ಲಕ್ಷ ಮೆಟ್ರಿಕ್ ಟನ್ಗಳಷ್ಟು ಮೇವು ಬೆಳೆಯಲಾಗುತ್ತಿತ್ತು. ಆದರೆ, ಮಳೆಯ ಕೊರತೆಯಿಂದ ಕೇವಲ 3.71 ಲಕ್ಷ ಮೆಟ್ರಿಕ್ ಟನ್ಗಳಷ್ಟು ಮಾತ್ರ ಬೆಳೆಯಲಾಗಿದೆ. ಜಿಲ್ಲೆಗೆ ಜಾನುವಾರುಗಳಿಗಾಗಿ ವರ್ಷಕ್ಕೆ ಕನಿಷ್ಟ ಎಂಟು ಲಕ್ಷ ಮೆಟ್ರಿಕ್ ಟನ್ ಮೇವಿನ ಅಗತ್ಯತೆ ಇದೆ. ಬರಪರಿಸ್ಥಿತಿಯಿಂದಾಗಿ ಮೇವಿಗೂ ಕೊರತೆ ಬಂದಿದೆ. ಹೀಗಾಗಿ, ಗೋಶಾಲೆಗಳನ್ನು ತೆರೆಯಲು ಬೇಕಾದ ಸಿದ್ಧತೆ ಹಾಗೂ ಅಗತ್ಯವಿರುವ ಅನುದಾನದ ಬಗ್ಗೆಯೂ ವರದಿ ಸಲ್ಲಿಸಲಾಗಿದೆ. ಮಳೆಯ ಕೊರತೆ ಕಾರಣ ಈಗಾಗಲೆ ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಅಂತರ್ಜಲ ಕುಸಿತ ಉಂಟಾಗಿದೆ.
ಸರ್ಕಾರದಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೂಲಿಕಾರ್ಮಿಕರಿಗೆ ನರೇಗಾ ಯೋಜನೆಯಡಿ ವರ್ಷಕ್ಕೆ ನೀಡುವ ಉದ್ಯೋಗದ ದಿನಗಳನ್ನು 100ರಿಂದ 150ಕ್ಕೆ ಹೆಚ್ಚಿಸಲಾಗಿದ್ದು, ವೈಯಕ್ತಿಕ ಹಾಗೂ ಸಮುದಾಯ ಆಧಾರಿತ ಉದ್ಯೋಗ ನೀಡಿ, ಯೋಜಿಸಲಾಗಿದೆ ಎಂದರು.
ಸಭೆಯಲ್ಲಿ ಹಿರಿಯ ಸಲಹೆಗಾರ ಡಾ. ಶ್ರೀನಿವಾಸ, ಪಂಚಾಯತ್ ಸಿಇಒ ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಂಟಿಕೃಷಿ ಮಂಜುನಾಥ್, ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ವಿ.ಅಶೋಕ್ ಕುಮಾರ್, ಎಂ.ಎನ್.ಸಿ.ಎಫ್.ಸಿ ಉಪನಿರ್ದೇಶಕ ಕರಣ್ ಚೌಧರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪಕಾರ್ಯದರ್ಶಿ ಸಂಗೀತ್ ಕುಮಾರ್ ಹಾಗೂ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಶ್ರೀನಿವಾಸ್ ರೆಡ್ಡಿ, ಜಿಲ್ಲಾತೋಟಗಾರಿಕೆ ಉಪನಿರ್ದೇಶಕಿ ಸವಿತಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.