ʼಕುದ್ರುʼ ಚಿತ್ರ ಅಕ್ಟೋಬರ್ 13ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ, ಚಿತ್ರದ ನಟ ಹರ್ಷಿತ್ ಶೆಟ್ಟಿ, ಮೋಕ್ಷ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ, ಭಾಸ್ಕರ್ ನಾಯ್ಕ್ ರಚಿಸಿ, ನಿರ್ದೇಶಿಸಿ, ನಿರ್ಮಿಸಿರುವ ಈ ಚಿತ್ರ ಕರಾವಳಿ ಭಾಗದ ಕಥಾಹಂದರ ಹೊಂದಿದೆ ಎಂದರು.
ʼಕುದ್ರುʼ ಎಂದರೆ, ನೀರಿನಿಂದ ಸುತ್ತುವರೆದ ದ್ವೀಪ. ಈ ದ್ವೀಪದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮೂರು ಕಟುಂಬಗಳು ಸಹಬಾಳ್ವೆಯಿಂದ ಜೀವನ ನಡೆಸುತ್ತಿರುತ್ತವೆ. ಈ ವೇಳೆ ವಾಟ್ಸಪ್ ಸಂದೇಶವೊಂದರಿಂದ ಎಲ್ಲರಲ್ಲೂ ಮನಸ್ತಾಪ ಮೂಡುತ್ತದೆ. ಚಿತ್ರದ ಮೊದಲ ಭಾಗದ ಕಥೆ ಕಾಲೇಜಿನಲ್ಲಿ ನಡೆಯುತ್ತದೆ. ಆನಂತರ, ಕುತೂಹಲ ಮೂಡಿಸುವ ಕಥಾಹಂದರವಿದೆ. ಅದನ್ನು ಚಿತ್ರದಲ್ಲೇ ನೋಡಬೇಕು.
ಉಡುಪಿ, ಮಲೆನಾಡು, ಗೋವಾ ಹಾಗೂ ಆಯಿಲ್ರಿಗ್ನಲ್ಲಿ ಚಿತ್ರೀಕರಣವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಜನಪ್ರಿಯವಾಗಿದೆ. ಈ ಚಿತ್ರದಲ್ಲಿ ಮುಸ್ಲಿಂ ಸಮುದಾಯದ ಹುಡುಗಿಯಾಗಿ, ನಟಿ ಡೈನ ಡಿಸೋಜ, ಮುಸ್ಲಿಂ ಹುಡುಗನಾಗಿ ನಟ ಫರ್ಹಾನ್, ಬ್ರಾಹ್ಮಣ ಹುಡುಗನಾಗಿ ಹರ್ಷಿತ್ ಶೆಟ್ಟಿ ಅಭಿನಯಿಸಿದ್ದು, ಕ್ರಿಶ್ಚಿಯನ್ ಹುಡುಗನಾಗಿ ಗಾಡ್ವಿನ್ ಹಾಗೂ ಬ್ರಾಹ್ಮಣ ಹುಡುಗಿ ಪಾತ್ರದಲ್ಲಿ ನಾಯಕಿ ಪ್ರಿಯಾ ಹೆಗ್ಡೆ, ಮಂಗಳೂರಿನ ನಮಿತಾ, ಪ್ರವೀಣ್ ಬಂಗೇರ, ಕಾಂತಾರ ಸತೀಶ್ ಆಚಾರ್ಯ ಚಿತ್ರದಲ್ಲಿ ನಟಿಸಿದ್ದಾರೆ.
ಛಾಯಾಗ್ರಹಣ ಶ್ರೀ ಪುರಾಣಿಕ್, ಪ್ರದೀಪ್ ಹಾಗೂ ಉಡುಪಿ ಪ್ರಜ್ವಲ್, ಪ್ರತೀಕ್ ಕುಂದು ಸಂಗೀತ ನಿರ್ದೇಶನ ಹಾಗೂ ಶ್ರೀನಿವಾಸ್ ಕಲಾಲ್ ಅವರ ಸಂಕಲನವಿರುವ ʼಕುದ್ರುʼ ಚಿತ್ರಕ್ಕೆ ಉಡುಪಿ ಕೃಷ್ಣ ಆಚಾರ್ ಸಂಭಾಷಣೆ ಬರೆದಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಹರ್ಷಿತ್ ಶೆಟ್ಟಿ, ಪ್ರಿಯಾ ಹೆಗ್ಡೆ, ಸತೀಶ್ ಆಚಾರ್ಯ, ಫರ್ಹಾನ್, ನಮಿತಾ, ಡಯಾನಾ ಡಿಸೋಜ, ಪ್ರವೀಣ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.