ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದ ಪಟಾಕಿ ದುರಂತದಲ್ಲಿ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದ ವೆಂಕಟೇಶ್ (25) ಅವರ ಕುಟುಂಬಸ್ಥರಿಂದ ಚಿಕಿತ್ಸೆಗೆ ₹70 ಸಾವಿರ ಹಣ ಪಡೆದಿದ್ದ ಆರೋಪದಡಿ ನಗರದ ಸೇಂಟ್ ಜಾನ್ಸ್ ಆಸ್ಪತ್ರೆಯ ವಿರುದ್ಧ ಕೋರಮಂಗಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸೇಂಟ್ ಜಾನ್ಸ್ ಆಸ್ಪತ್ರೆಯ ವಿರುದ್ಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಎ.ದಯಾನಂದ್ ಅವರು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಅತ್ತಿಬೆಲೆಯ ಅಗ್ನಿ ಅವಘಡದಲ್ಲಿ ಗಾಯಗೊಂಡಿರುವ ಎಲ್ಲರ ಚಿಕಿತ್ಸೆ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಿಳಿಸಿದ್ದರು.
ಆದರೂ ಮೃತನ ಕುಟುಂಬಸ್ಥರಿಂದ ಆಸ್ಪತ್ರೆಯ ಸಿಬ್ಬಂದಿ ಹಣ ಕಟ್ಟಿಸಿಕೊಂಡಿದ್ದಾರೆ. ಹಣ ಕಟ್ಟಿಸಿಕೊಂಡಿದ್ದಕ್ಕೆ ಸಾಕ್ಷಿಯಾಗಿ ಆಸ್ಪತ್ರೆಯ ರಶೀದಿಗಳಿವೆ.
ಶನಿವಾರ ಸಂಜೆ ಸೇಂಟ್ ಜಾನ್ಸ್ ಆಸ್ಪತ್ರೆಗೆ ಗಾಯಾಳು ವೆಂಕಟೇಶ್ ದಾಖಲಾಗಿದ್ದರು. ಈ ವೇಳೆ, ಗಾಯಾಳು ಕುಟುಂಬಸ್ಥರು ಎಟಿಎಂ ಕಾರ್ಡ್ ಬಳಸಿ ₹40 ಸಾವಿರ ಪಾವತಿಸಿದ್ದಾರೆ. ಅದೇ ದಿನ ಸಂಜೆ ₹500 ಕಟ್ಟಿದ್ದಾರೆ. ನಂತರ ಶನಿವಾರ ರಾತ್ರಿ ₹4000, ಭಾನುವಾರದಂದು ಮತ್ತೆ ಫೋನ್ ಪೇ ಮೂಲಕ ₹15 ಸಾವಿರ ಕಟ್ಟಿದ್ದಾರೆ. ಸೇಂಟ್ ಜಾನ್ಸ್ ಆಸ್ಪತ್ರೆಗೆ ಹಣ ಪಾವತಿ ಮಾಡಿದ ಎಲ್ಲ ರಶೀದಿಗಳು ಕುಟುಂಬಸ್ಥರ ಬಳಿ ಇವೆ.
“ಆಸ್ಪತ್ರೆಗೆ ಮಗನನ್ನು ದಾಖಲು ಮಾಡಿದ ಮೊದಲ ದಿನ ₹40 ಸಾವಿರ ಹಣ ಪಾವತಿ ಮಾಡಿದ್ದೇನೆ. ಎರಡನೇ ದಿನ ₹30 ಸಾವಿರ, ಭಾನುವಾರದ ನಂತರ ₹40 ಸಾವಿರ ಕೇಳಿದ್ದಾರೆ. ನಾನು ಬಡವನಾಗಿದ್ದರೂ, ಇರುವ ಒಬ್ಬನೇ ಮಗನನ್ನು ಉಳಿಸಿಕ್ಕೊಳ್ಳಲು ಸಾಲ-ಸೋಲ ಮಾಡಿ ಹಣ ಹೊಂದಿಸಿ ಆಸ್ಪತ್ರೆಗೆ ಕಟ್ಟಿದ್ದೇನೆ” ಎಂದು ಮೃತ ವೆಂಕಟೇಶ್ ತಂದೆ ರಮಣಪ್ಪ ಹೇಳಿದರು.
“ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರು ಉಚಿತವಾಗಿ ಚಿಕಿತ್ಸೆ ನೀಡಿ ಎಂದು ಹೇಳಿದ್ದಾರೆ ಎಂದು ಆಸ್ಪತ್ರೆಯವರಿಗೆ ತಿಳಿಸಿದರೆ, ಆ ಬಗ್ಗೆ ನಮಗೆ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ. ಆಟೋ ಓಡಿಸಿ ನನ್ನ ಮಗನನ್ನು ಸಾಕಿದ್ದೀನಿ, ಬಾಡಿ ಬಿಲ್ಡರ್ ಮಾಡಿಸಿದ್ದೆ. ನನ್ನ ಮಗ ಗಟ್ಟಿಮುಟ್ಟಾಗಿದ್ದ. ದುರಂತದಲ್ಲಿ ನನ್ನ ಮಗನ ದೇಹ 20% ಸುಟ್ಟಿದೆ ಎಂದು ಹೇಳಿದ್ದರು. ಆದರೆ, ಅಷ್ಟು ಸಹ ಸುಟ್ಟಿರಲಿಲ್ಲ. ಕೇವಲ ಹಿಂದಿನ ಭಾಗ ಮಾತ್ರ ಸುಟ್ಟಿತ್ತು. ದೇಹದ ಮುಂದಿನ ಭಾಗ ಏನು ಆಗಿರಲಿಲ್ಲ. ನನ್ನ ಮಗ ಸಾಯುವ ವ್ಯಕ್ತಿ ಅಲ್ಲ. ಆಸ್ಪತ್ರೆಯವರು ನಮ್ಮಿಂದ ಇಲ್ಲಿಯವರೆಗೂ ₹70 ಸಾವಿರ ಹಣ ಕಟ್ಟಿಸಿಕೊಂಡಿದ್ದಾರೆ. ಹಣ ನೀಡಿಲ್ಲ ಅಂತ ಸರಿಯಾಗಿ ಚಿಕಿತ್ಸೆ ನೀಡಿಲ್ಲ” ಎಂದು ಡಾ.ಸಾಗರ್ ವಿರುದ್ಧ ಮೃತ ವೆಂಕಟೇಶ್ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಟೊಮೆಟೊ ಬಳಿಕ ಈರುಳ್ಳಿ ಬೆಲೆ ಹೆಚ್ಚಳ ಆತಂಕ
ಮೃತ ವೆಂಕಟೇಶ್ ಸಾವಿಗೆ ಸೇಂಟ್ ಜಾನ್ಸ್ ಆಸ್ಪತ್ರೆಯೇ ಕಾರಣ ಎಂದು ಆಸ್ಪತ್ರೆ ಆವರಣದಲ್ಲಿ ಮೃತ ವೆಂಕಟೇಶ್ ಕುಟುಂಬಸ್ಥರು ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಭೇಟಿ ನೀಡಿ ಮಾತನಾಡಿದ್ದರು.
ಈ ವೇಳೆ, ಚಿಕಿತ್ಸೆ ವೆಚ್ಚ ಪಾವತಿಸಿರುವ ಬಗ್ಗೆ ಪೋಷಕರು ದಾಖಲೆಗಳನ್ನು ನೀಡಿದ್ದರು. ಆಸ್ಪತ್ರೆಯವರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ, ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.