- ‘ಐಟಿ, ಇಡಿ ಎಲ್ಲ ಬಿಜೆಪಿಯವರ ಕೈಯಲ್ಲೇ ಇದೆ’
- ರಾಜಕೀಯ ಪ್ರೇರಿತ ರೇಡ್ ಮಾಡ್ತಿದ್ದಾರೆ: ಆರೋಪ
ಗುತ್ತಿಗೆದಾರರಿಂದ ಕಲೆಕ್ಷನ್ ಮಾಡಿದ್ದಾರೆ ಎಂಬ ಬಿಜೆಪಿಯವರ ಹೇಳಿಕೆ ಹಾಸ್ಯಾಸ್ಪದ. ಐಟಿ ಇಲಾಖೆಯಲ್ಲಿ ಸೆಲೆಕ್ಟಿವ್ ರೇಡ್ ಯಾಕಾಗ್ತಿದೆ? ಹಿಂದೂ ಕಾರ್ಯಕರ್ತೆ ಚೈತ್ರಾ ಕೇಸ್ನಲ್ಲಿ ಐಟಿ ದಾಳಿ ಯಾಕಾಗಿಲ್ಲ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದರು.
ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, “ಐಟಿ, ಇಡಿ ಎಲ್ಲ ಬಿಜೆಪಿಯವರ ಕೈಯಲ್ಲೇ ಇದೆ. ತನಿಖೆ ಮಾಡಲಿ. ಉಪ್ಪು ತಿಂದೋರು ನೀರು ಕುಡಿಯಲೇಬೇಕು. ಉದ್ಯಮಿಗೆ ವಂಚಿಸಿರುವ ಚೈತ್ರಾ ಪ್ರಕರಣದಲ್ಲಿ ಹಣ ವರ್ಗಾವಣೆ ನಡೆದಿದೆ. ಇಲ್ಲಿ ಐಟಿ ರೇಡ್ ನಡೆಯಲೇ ಇಲ್ಲ. ಇದೆಲ್ಲವನ್ನು ನೋಡಿದರೆ ರಾಜಕೀಯ ಪ್ರೇರಿತ ರೇಡ್ ಮಾಡ್ತಿದ್ದಾರೆ ಎಂದು ಅನ್ನಿಸುತದೆ” ಎಂದು ಆರೋಪಿಸಿದರು.
ಅದಾನಿ ಮೇಲೆ ರೇಡ್ ಯಾಕಿಲ್ಲ?
ಪ್ರತಿಪಕ್ಷದವರನ್ನೇ ಗುರಿಯಾಗಿಸಿಕೊಂಡು ಐಟಿ ದಾಳಿ ಮಾಡಲಾಗುತ್ತಿದೆ. ಗುಜರಾತ್ ಸೇರಿ ಎಲ್ಲ ಕಡೆ ವಿಪಕ್ಷಗಳ ಮೇಲೆ ರೇಡ್ ಮಾಡುತ್ತಿದ್ದಾರೆ. ಎಷ್ಟು ಜನ ಬಿಜೆಪಿಯವರ ಮೇಲೆ ರೇಡ್ ಆಗಿದೆ? ಈ ಬಗ್ಗೆ ಲೆಕ್ಕ ತಗೆದುಕೊಳ್ಳಿ. ಯಾಕೆ ಅದಾನಿ ಮೇಲೆ ರೇಡ್ ಅಗ್ತಿಲ್ಲ? ಐಟಿ, ಇಡಿ ರೇಡ್ಗೆಲ್ಲಾ ನಾವು ಹೆದರುವುದಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರವೇನೋ ಬದಲಾಯಿತು, ಕೋಮುವಾದಿಗಳ ಅಟಾಟೋಪಗಳಿಗೆ ಅಂಕುಶ ಯಾವಾಗ?
ಕುಮಾರಸ್ವಾಮಿ ಪ್ರತಿಕ್ರಿಯಿಗೆ ತಿರಗೇಟು ನೀಡಿದ ಸಚಿವರು, ” ಬಿಜೆಪಿ ಜೊತೆ ಕುಮಾರಸ್ವಾಮಿ ಒಂದಾಗಿದ್ದಾರೆ. ಕಲೆಕ್ಷನ್ ಮಾಡಲಾಗಿದೆ ಎಂದು ಆರೋಪ ಮಾಡುವ ಬಿಜೆಪಿಯರಿಗೆ ಮೇಲೆ ಬಾಸ್ ಗಳಿದ್ದಾರಲ್ಲ, ಹೋಗಿ ಸಾಕ್ಷಿ ಕೊಡಲಿ. ಕುಮಾರಸ್ವಾಮಿ ಅವರು ನೇರವಾಗಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡುತ್ತಾರೆ. ಡೈರಿ, ಪೆನ್ ಡ್ರೈವ್ ಎಲ್ಲಾ ಅವರಿಗೆ ಕೊಡಲಿ” ಎಂದು ಕುಟುಕಿದರು.
“ವಿಪಕ್ಷ ನಾಯಕನ ಆಯ್ಕೆಗಂತೂ ಅಪಾಯಿಂಟ್ಮೆಂಟ್ ಕೊಟ್ಟಿಲ್ಲ. ಬಿಜೆಪಿ ಮನೆಯೊಂದು ನೂರು ಬಾಗಿಲಾಗಿದೆ. ಯಾರು ಲೀಡರ್ ಅಂತಾ ಗೊತ್ತಾಗುತ್ತಲೇ ಇಲ್ಲ. ಅಲ್ಲಿ ಮೈತ್ರಿ ಆಗಬೇಕಾದರೆ ರಾಜ್ಯದ ಒಬ್ಬ ಲೀಡರ್ ಆದ್ರೂ ಇದ್ರಾ? ಜನತಾದಳ ಜನತೆ ಜೊತೆಯೂ ಇಲ್ಲ, ದಳವಾಗಿಯೂ ಉಳಿದಿಲ್ಲ” ಎಂದು ಟೀಕಿಸಿದರು.