ಚೀನಾದ ಹ್ಯಾಂಗ್ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ 2022ರ ಮಹಿಳೆಯರ ಹೆಪ್ಟಾಥ್ಲಾನ್ 800 ಮೀಟರ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ನಂದಿನಿ ಅಗಸರ ಅವರನ್ನು ಬಳ್ಳಾರಿ ಜಿಲ್ಲಾಡಳಿತ ಸನ್ಮಾನಿಸಿದೆ.
ನಂದಿನಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದವರು. ಇತ್ತೀಚೆಗೆ ಚೀನಾದ ಹ್ಯಾಂಗ್ಝೌನಲ್ಲಿ ನಡೆದ 2022ರ ಏಷ್ಯನ್ ಗೇಮ್ಸ್ನಲ್ಲಿ ಹೆಪ್ಟಾಥ್ಲಾನ್ ಈವೆಂಟ್ನಲ್ಲಿ 800 ಮೀ. ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಯುವ ಸಬಲೀಕರಣ, ಕ್ರೀಡಾ ಸಚಿವ ಬಿ.ನಾಗೇಂದ್ರ ಅವರ ನಿರ್ದೇಶನದಂತೆ ಶನಿವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಂದಿನಿ ಅಗಸರ ಅವರನ್ನು ಸನ್ಮಾನಿಸಲಾಗಿದೆ.
“ನಮ್ಮ ಜಿಲ್ಲೆಯ ವಜ್ರದಂತಿರುವ ಮನೆ ಮಗಳು ನಂದಿನಿ ಅಗಸರ ಅವರು ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕ್ರೀಡಾ ತರಬೇತಿಗಾಗಿ ಅವರಿಗೆ 3 ಲಕ್ಷ ರೂ. ಗೌರವಧನ ನೀಡಲಾಗುವುದು” ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
“ಕ್ರೀಡಾ ಮನೋಭಾವ ಮತ್ತು ಶ್ರೇಷ್ಠತೆಯನ್ನು ರೂಪಿಸಿಕೊಂಡಿರುವ ನಂದಿನಿ ಅವರು ಮುಂದಿನ ದಿನಗಳಲ್ಲಿ ಒಲಂಪಿಕ್ಸ್ ಕ್ರೀಡೆಗಳಲ್ಲಿ ಭಾಗವಹಿಸುವಂತಾಗಲಿ. ಇನ್ನೂ ಹೆಚ್ಚಿನ ಪದಕಗಳನ್ನು ತಮ್ಮದಾಗಿಸಿಕೊಂಡು ನಮ್ಮ ದೇಶ, ರಾಜ್ಯ ಮತ್ತು ಜಿಲ್ಲೆಗೆ ಕೀರ್ತಿ ತರಬೇಕು. ಮುಂದಿನ ಅವರ ಎಲ್ಲ ಪ್ರಯತ್ನಗಳಿಗೆ ಶುಭವಾಗಲಿ” ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.
“ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹಿಸಿದ ನನ್ನ ತಂದೆ-ತಾಯಿಗೆ ಈ ಕೀರ್ತಿ ಸಲ್ಲುತ್ತದೆ. ತರಬೇತಿಯಲ್ಲಿ ಕಾಳಜಿ ಮತ್ತು ಆಸಕ್ತಿ ವಹಿಸಿ ನನಗೆ ಶಕ್ತಿ ತುಂಬಿದ ನನ್ನ ಮಾರ್ಗದರ್ಶಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಹಾಗೂ ನನ್ನನ್ನು ಗುರುತಿಸಿ ಸನ್ಮಾನಿಸಿದ ಜಿಲ್ಲಾಡಳಿತಕ್ಕೆ ಕೃತಜ್ಞತೆಗಳು” ಎಂದು ನಂದಿನಿ ಅಗಸರ ಅವರು ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉಪ ಮೇಯರ್ ಬಿ.ಜಾನಕಿ, ವಿಧಾನ ಪರಿಷತ್ ಶಾಸಕ ವೈ.ಎಂ.ಸತೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಬಳ್ಳಾರಿ ತಹಶೀಲ್ದಾರ ಗುರುರಾಜ, ಸಿರುಗುಪ್ಪ ತಹಶೀಲ್ದಾರ ವಿಶ್ವನಾಥ, ಯುವಜನ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಗ್ರೇಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ. ಹೊನ್ನೂರಪ್ಪ, ನಂದಿನಿ ಅವರ ತಂದೆ ಯಲ್ಲಪ್ಪ ಹಾಗೂ ಇತರರು ಇದ್ದರು.
ವರದಿ: ರಾಧಾಕೃಷ್ಣ, ಸಿಟಿಜನ್ ಜರ್ನಲಿಸ್ಟ್, ಬಳ್ಳಾರಿ