ಬ್ಯಾಂಕ್ ದರೋಡೆಗೆ ಬಂದ ಗುಂಪನ್ನು ತಡೆಯಲು ಯತ್ನಿಸಿದ ಸೆಕ್ಯೂರಿಟಿ ಗಾರ್ಡ್ಗೆ ಮಾರಕಾಸ್ತ್ರದಿಂದ ಇರಿದು ಗಾಯಗೊಳಿಸಿರುವ ಘಟನೆ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಹರಿಹರಪುರ ಗ್ರಾಮದಲ್ಲಿ ಭಾನುವಾರ ಮದ್ಯರಾತ್ರಿ ನಡೆದಿದೆ.
ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಮನು(30) ಇರಿತದಿಂದ ಗಾಯಗೊಂಡಿರುವ ಕರ್ತವ್ಯನಿರತ ನೌಕರ. ಇವರು ಡಿಸಿಸಿ ಬ್ಯಾಂಕ್ ಹಾಗೂ ವಿಎಸ್ಎಸ್ಎನ್ ನೌಕರ ಎಂದು ತಿಳಿದುಬಂದಿದೆ.
ಘಟನೆ ವಿವರ:
ಹರಿಹರಪುರ ಗ್ರಾಮದಲ್ಲಿರುವ ಡಿಸಿಸಿ ಬ್ಯಾಂಕ್ ಶಾಖೆಗೆ ಮುಸುಕುದಾರಿಗಳಾಗಿದ್ದ ಮೂವರು ದರೋಡೆಕೋರರು ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಕರ್ತವ್ಯನಿರತನಾಗಿದ್ದ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಮನು(30) ದರೋಡೆಕೋರರನ್ನು ತಡೆದು, ಕಿರುಚಿಕೊಂಡಿದ್ದಾರೆ. ಇದರಿಂದ ವಿಚಲಿತರಾದ ದರೋಡೆಕೋರರು ಬ್ಯಾಂಕ್ ಬೀಗ ಒಡೆಯಲು ಸಾಧ್ಯವಾಗದೇ ಇದ್ದಾಗ ಸೆಕ್ಯೂರಿಟಿ ಗಾರ್ಡ್ನ ಹೊಟ್ಟೆಯ ಭಾಗಕ್ಕೆ ಮಾರಕಾಸ್ತ್ರದಿಂದ ಇರಿದು ಹತ್ಯೆಗೆ ಯತ್ನಿಸಿದ್ದಾರೆ. ಅಷ್ಟರಲ್ಲಿ ಸಾರ್ವಜನಿಕರು ಜಮಾಯಿಸುತ್ತಿರುವುದನ್ನು ಅರಿತ ದರೋಡೆಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ.
ಮಾರಕಾಸ್ತ್ರದ ಇರಿತದಿಂದ ಗಾಯಗೊಂಡು ಅಸ್ವಸ್ಥಗೊಂಡಿದ್ದ ಸೆಕ್ಯೂರಿಟಿ ಗಾರ್ಡ್ ಮನು ಅವರನ್ನು ಗ್ರಾಮಸ್ಥರು ಕೆ ಆರ್ ಪೇಟೆ ಪಟ್ಟಣದ ದುಂಡಶೆಟ್ಟಿ-ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸಮರ್ಪಕ ವಿದ್ಯುತ್ ಪೂರೈಕೆಗೆ ರೈತರ ಆಗ್ರಹ
ಪ್ರಾಣಾಪಾಯದಿಂದ ಪಾರಾಗಿರುವ ಸೆಕ್ಯೂರಿಟಿ ಗಾರ್ಡ್ ಮನು ಅವರನ್ನು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್ ಕೆ ಅಶೋಕ್, ಹರಿಹರಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಮೋಹನ್, ಸಿಇಒ ಕಾಂತರಾಜು, ಮಾಜಿ ಅಧ್ಯಕ್ಷರುಗಳಾದ ನಿಂಗರಾಜು, ಕೃಷ್ಣೇಗೌಡ, ಬಾಲಗಂಗಾಧರತಿಲಕ್, ರೇವಣ್ಣ, ಡೇರಿ ಅಧ್ಯಕ್ಷ ನಾಗೇಶ್ ಸೇರಿದಂತೆ ಇತರರು ಗಾಯಾಳುವನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಬಳಿಕ ಕೆ ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿ, ದುಷ್ಕರ್ಮಿಗಳನ್ನು ಪತ್ತೆ ಮಾಡಿ ಡಿಸಿಸಿ ಬ್ಯಾಂಕ್ ಮತ್ತು ವಿಎಸ್ಎಸ್ಎನ್ ಬ್ಯಾಂಕ್ ಶಾಖೆಗಳಿಗೆ ಸೂಕ್ತ ಪೊಲೀಸ್ ಗಸ್ತು ಭದ್ರತೆ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.